More

    ಉರಿಗೌಡ, ನಂಜೇಗೌಡ ಹೆಸರು ಬಳಸಲು ಪ್ರಧಾನಿಯೇ ಹೇಳಿದ್ರಾ? ಎಚ್‌ಡಿಕೆ ಪ್ರಶ್ನೆ

    ಹಾಸನ: ಪ್ರಧಾನಿ ನರೇಂದ್ರ ಮೋದಿ ಮಂಡ್ಯ ಭೇಟಿ ಸಂದರ್ಭದಲ್ಲಿ ಬಿಜೆಪಿಯವರು ಉರಿಗೌಡ, ನಂಜೇಗೌಡ ಹೆಸರಲ್ಲಿ ಮಹಾದ್ವಾರ ಹಾಕಿದ್ದನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.
    ಹಿರಿಸಾವೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿಯವರು ಒಕ್ಕಲಿಗರನ್ನ ಟಾರ್ಗೆಟ್ ಮಾಡಿಕೊಂಡು ಉರಿಗೌಡ ನಂಜೇಗೌಡ ಪದ ಬಳಕೆ ಮಾಡುತ್ತಿದ್ದಾರೆ. ಅದು ಒಕ್ಕಲಿಗ ಸಮಾಜದ ಗೌರವವನ್ನು ಹಾಳು ಮಾಡುವಂತಹದ್ದು. ಆ ವ್ಯಕ್ತಿಗಳು ಟಿಪ್ಪುವನ್ನು ಕೊಂದಿರುವ ಇತಿಹಾಸವಿಲ್ಲ. ಆ ಇತಿಹಾಸವನ್ನು ಸೃಷ್ಟಿ ಮಾಡಿರುವವರು ಬಿಜೆಪಿಯವರು. ಇತಿಹಾಸ ಸೃಷ್ಟಿ ಮಾಡಿ ನಮ್ಮ ಸಮಾಜದ ಹೆಸರನ್ನು ಹಾಳು ಮಾಡಿ ಅಗೌರವ ತರುತ್ತಿದ್ದಾರೆ. ಒಕ್ಕಲಿಗರು ಅದನ್ನು ಪ್ರತಿಭಟಿಸಬೇಕು ಮತ್ತು ಧಿಕ್ಕರಿಸಬೇಕಾಗುತ್ತದೆ ಎಂದು ಕರೆ ನೀಡಿದರು.
    ಇದಕ್ಕೆ ಪೂರಕವಾಗಿ ಟ್ವೀಟ್ ಮಾಡಿರುವ ಅವರು, ಕಪೋಲ ಕಲ್ಪಿತ ಪಾತ್ರಗಳನ್ನು ಸೃಷ್ಟಿಸಿ, ಕೋಮು ದ್ವೇಷ ಹರಡಿ, ಜನರ ತಲೆಯಲ್ಲಿ ವಿಷ ಬೀಜ ಬಿತ್ತಿ ಹೆಮ್ಮರವಾಗಿ ಬೆಳೆಯಲು ತನು-ಮನ-ಧನವನ್ನೆಲ್ಲ ಅರ್ಪಿಸುವ ಪಕ್ಷ ಬಿಜೆಪಿ. ಟಿಪ್ಪು ಸುಲ್ತಾನನನ್ನು ಕೊಂದವರು ಎನ್ನಲಾಗುವ ಕಾಲ್ಪನಿಕ ಪಾತ್ರಗಳಾದ ಉರಿಗೌಡ, ನಂಜೇಗೌಡ ಎಂಬ ಹೆಸರುಗಳನ್ನು ಪ್ರಧಾನಿ ರೋಡ್ ಶೋ ನಡೆಸಿದ ಮಹಾದ್ವಾರಕ್ಕೆ ಇಟ್ಟಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.
    ಮೇಲಾಗಿ ಮಹಾದ್ವಾರಕ್ಕೆ ಇದ್ದ ಒಕ್ಕಲಿಗರ ಪರಮಪೂಜ್ಯ ಗುರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಹೆಸರನ್ನು ಮುಚ್ಚಿ, ಅವರ ಜಾಗದಲ್ಲಿ ಈ ಕಾಲ್ಪನಿಕ ಪಾತ್ರಗಳ ಹೆಸರನ್ನು ಹಾಕಿದ್ದ ಉದ್ದೇಶವೇನು? ಇಂತಹ ಚಿಲ್ಲರೆ, ದ್ವೇಷ ತುಂಬಿದ ನಡೆಯಿಂದ ಒಕ್ಕಲಿಗರ ಮನ ಗೆಲ್ಲಬಹುದು ಎಂಬ ಭ್ರಮೆಯಲ್ಲಿದ್ದರೆ ಅದು‌ ಶತಮೂರ್ಖತನ ಎಂದಿದ್ದಾರೆ.

    ಹೆಸರು ಬದಲಿಸಿದ ನಂತರ ಸಾರ್ವಜನಿಕರು, ಸ್ಥಳೀಯರು, ಹಾಗೂ ಪ್ರಗತಿಪರ ಸಂಘನೆಗಳಿಂದ ವಿರೋಧ ವ್ಯಕ್ತವಾಗಿದ್ದೆ ತಡ, ಜಿಲ್ಲಾಡಳಿತವು ಈ ಹೆಸರನ್ನು ತೆರವುಗೊಳಿಸಿದೆ. ಇಂತಹ ನಿರ್ಲಜ್ಜ ನಡೆಯು ರಾಜ್ಯ ಸರ್ಕಾರದ ನೀಚ ರಾಜಕಾರಣಕ್ಕೆ ಹಿಡಿದ ಕನ್ನಡಿ ಎಂದಿದ್ದಾರೆ.
    ಸುಳ್ಳುಗಳಿಗೆ ಆಯಸ್ಸು ಬಹಳ ಕಮ್ಮಿ. ಮಾಂಸ ತಿಂದು ದೇವಸ್ಥಾನಕ್ಕೆ ತೆರಳಿದ ಸಿ.ಟಿ. ರವಿಯವರೆ, ಉರಿಗೌಡ, ನಂಜೇಗೌಡನ ಹೆಸರಲ್ಲಿ ಶಾಶ್ವತ ದ್ವಾರ ನಿರ್ಮಿಸುತ್ತೀರಾ? ನಾಚಿಕೆಯಾಗಬೇಕು ನಿಮಗೆ. ಕೊಳಕು ಮಟ್ಟದ ರಾಜಕಾರಣವನ್ನೇ ಉಸಿರಾಗಿಸಿಕೊಂಡಿರುವ ನಿಮಗೆ ಪ್ರಧಾನಿಯವರ ಗುಲಾಮಗಿರಿ ಮಾಡುವ ಅನಿವಾರ್ಯತೆ ಇದೆ. ಒಕ್ಕಲಿಗರು ಸ್ವಾಭಿಮಾನಕ್ಕೆ ಹೆಸರಾದವರು. ಇಡೀ ಒಕ್ಕಲಿಗ ಸಮುದಾಯವನ್ನ ಅಪಹಾಸ್ಯಕ್ಕೆ ಗುರಿ ಮಾಡುವ ಮೂಲಕ ಏನನ್ನು ಸಾಧಿಸಲು ಬಿಜೆಪಿ ಹೊರಟಿದೆ ಎಂಬುದು ಸ್ಪಷ್ಟ. ಅವರ ಈ ಧ್ರುವೀಕರಣದ ರಾಜಕೀಯಕ್ಕೆ ಪ್ರಧಾನಿಯವರನ್ನು ಬಳಸಿದರೆ ಅದಕ್ಕೆ ಹೆಚ್ಚು ಪ್ರಚಾರ ಸಿಗುತ್ತದೆ ಎಂಬ ಕಲ್ಪನೆ ಅವರಿಗಿದೆ. ಅದರ ಭಾಗವಾಗಿಯೇ ಈ ಪ್ರಯೋಗ ಎಂದು ವಿವರಿಸಿದ್ದಾರೆ.
    ಈ ಕುತಂತ್ರಿ ರಾಜಕಾರಣ ನಡೆಸಲು ಪ್ರಧಾನಿಯವರೆ ರಾಜ್ಯ ಬಿಜೆಪಿಗೆ ನಿರ್ದೇಶನ ನೀಡಿದರೆ? ಆರ್ ಎಸ್ ಎಸ್ ಪ್ರಣೀತ ಸಿದ್ಧಾಂತದ ಆಧಾರದಲ್ಲಿ ದ್ವೇಷವನ್ನು ಹರಡಲು ಒಕ್ಕಲಿಗ ಸಮುದಾಯವನ್ನು ಕೊಲೆಗಡುಕರು ಎಂದು ಚಿತ್ರಿಸಿ ಅವಮಾನ ಮಾಡಲಾಗಿದೆ. ತಾಳ್ಮೆ, ಸ್ವಾಭಿಮಾನ, ಸ್ವಂತಿಕೆ, ಸೇವೆ, ಸೌಹಾರ್ದತೆ ಮತ್ತು ಸಮನ್ವಯ ತತ್ವಗಳನ್ನು ಅಳವಡಿಸಿಕೊಂಡು ಬೆಳೆದಿದ್ದು ಈ ನಾಡಿನ ಒಕ್ಕಲಿಗ ಸಮುದಾಯದ ಹೆಗ್ಗಳಿಕೆ. ದ್ವೇಷ ಮತ್ತು ಹಸಿಸುಳ್ಳುಗಳನ್ನು ಅವರೆಂದು ಪೋಷಿಸಿ, ಬೆಳೆಸಿದವರಲ್ಲ. ಒಂದೀಡಿ ಸಮುದಾಯವನ್ನು ಇಷ್ಟು ನಿಕೃಷ್ಟವಾದ ರಾಜಕಾರಣಕ್ಕೆ ಇಳಿಸಿ, ಬಳಸಬಹುದು ಎಂಬ ಚಿಂತನೆಯೇ ಹೊಲಸು ಎಂದಿದ್ದಾರೆ.

    ಇಂತಹ ಚಿಲ್ಲರೆ ರಾಜಕಾರಣವು ಈ ಸಲದ ಚುನಾವಣೆಯಲ್ಲಿ ಯಾವ ಫಲವನ್ನೂ ನೀಡುವುದಿಲ್ಲ. ನಾಡಿನ ಒಕ್ಕಲಿಗ ಸಮುದಾಯ ಬಹಳ ಪ್ರಬುದ್ಧವಾಗಿ ಈ ಮಹಾ ಸುಳ್ಳಿನ ರಾಜಕಾರಣವನ್ನು ಎದುರಿಸಲಿದೆ. ಚುನಾವಣೆಯಲ್ಲಿ ರಾಜ್ಯ ಬಿಜೆಪಿಗೆ ಕಪಾಳಮೋಕ್ಷ ಕಟ್ಟಿಟ್ಟಬುತ್ತಿ. ಸತ್ಯ, ಸಹಬಾಳ್ವೆ ಮತ್ತು ವಿಶ್ವ ಮಾನವ ತತ್ವವಷ್ಟೇ ಗೆಲ್ಲಲಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts