ಕುಕನೂರು: ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಸಹಾಯಕರ ವೇತನವನ್ನು ಈ ಬಾರಿಯ ಬಜೆಟ್ನಲ್ಲಿ 12,000 ರಿಂದ 21,000 ರೂ.ಗೆ ರಾಜ್ಯ ಸರ್ಕಾರ ಹೆಚ್ಚಿಸಬೇಕೆಂದು ಒತ್ತಾಯಿಸಿ ಮಸಬಹಂಚಿನಾಳದ ಕಚೇರಿಯಲ್ಲಿ ಶಾಸಕ ಹಾಲಪ್ಪ ಆಚಾರ್ಗೆ ರಾಜ್ಯ ಸರ್ಕಾರಿ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘ ಶುಕ್ರವಾರ ಮನವಿ ಸಲ್ಲಿಸಿತು.
ಗ್ರಾಮ ಸಹಾಯಕರಿಗೆ ಯಾವುದೇ ರೀತಿ ಸೇವಾ ಭದ್ರತೆ ನೀಡುತ್ತಿಲ್ಲ. ಅಲ್ಲದೆ, ವಿಶೇಷ ಭತ್ಯೆ ಸಹ ಇರುವುದಿಲ್ಲ. ಗ್ರಾಮ ಸಹಾಯಕರಿಗೆ ಕನಿಷ್ಠ ವೇತನಕ್ಕೆ ಈಗಾಗಲೇ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದೇವೆ. ವರದಿ ಸಹ ಹಣಕಾಸು ಇಲಾಖೆಯಲ್ಲಿ ಇದ್ದು, ಮುಖ್ಯಮಂತ್ರಿಗಳು ಕೂಡಲೇ ಪರಿಶೀಲಿಸಿ ವೇತನ ಹೆಚ್ಚಳ ಮಾಡಿಕೊಡಬೇಕೆಂದು ಒತ್ತಾಯಿಸಿದರು.