ಕುಕನೂರು: ಮಕ್ಕಳಂತೆ ಸಸಿಗಳನ್ನು ಪೋಷಿಸಿ ಪರಿಸರಕ್ಕೆ ಕೊಡುಗೆ ನೀಡಬೇಕು ಎಂದು ಎಸ್ಡಿಎಂಸಿ ಅಧ್ಯಕ್ಷ ಮಂಗಳೇಶ ಯತ್ನಟ್ಟಿ ಹೇಳಿದರು.
ತಾಲೂಕಿನ ಮಂಗಳೂರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಸಿಗೆ ನೀರೆರೆವ ಮೂಲಕ ಸಸ್ಯ ಶ್ಯಾಮಲ ಯೋಜನೆಗೆ ಚಾಲನೆ ನೀಡಿ ಶನಿವಾರ ಮಾತನಾಡಿದರು.
ಮರಗಳು ಸರ್ವ ಜೀವರಾಶಿಗಳಿಗೆ ಉಸಿರಾಡಲು ಆಮ್ಲಜನಕ ನೀಡುತ್ತವೆ. ನಾವೆಲ್ಲರೂ ಮುಂದಿನ ಪೀಳಿಗೆಗಾಗಿ ಮನೆಗೊಂದು ಮರ ಊರಿಗೊಂದು ವನ ನಿರ್ಮಾಣ ಮಾಡಬೇಕಾಗಿದೆ. ಸಸ್ಯಗಳ ಮಹತ್ವವನ್ನು ಪ್ರತಿಯೊಬ್ಬರಿಗೂ ತಿಳಿಸುವುದು ಸಸ್ಯ ಶ್ಯಾಮಲಾ ಯೋಜನೆ ಮುಖ್ಯ ಉದ್ದೇಶವಾಗಿದೆ ಎಂದರು.
ಮುಖ್ಯಶಿಕ್ಷಕ ಹನುಮಂತಪ್ಪ ಉಪ್ಪಾರ ಮಾತನಾಡಿ, ಜೀವಸಂಕುಲದ ಉಳಿವಿಗೆ, ಸಮಾಜದ ಸದೃಢ ಆರೋಗ್ಯಕ್ಕೆ ಪ್ರತಿಯೊಬ್ಬರೂ ಸಸಿಗಳನ್ನು ನೆಡಬೇಕು. ಮಕ್ಕಳಿಗೆ ಗಿಡಗಳನ್ನು ಬೆಳೆಸುವಂತೆ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಶಿಕ್ಷಣ ಪ್ರೇಮಿ ಮಾಬುಸಾಬ್ ಗೋಡೆಕಾರ, ಉರ್ದು ಶಾಲೆ ಮುಖ್ಯಶಿಕ್ಷಕ ಕೊಟ್ರಯ್ಯ, ಪ್ರಮುಖರಾದ ಅನಿಲಕುಮಾರ, ಬಸವರಾಜ ರಾಜೂರು, ಜಗದೀಶ ಇತರರಿದ್ದರು.