More

    ಬೇಸಿಗೆ ಭವಣೆ ನೀಗಲು 97 ಕೆರೆಗೆ ನೀರು

    ವಿಜಯಪುರ: ಮುಳವಾಡ ಏತ ನೀರಾವರಿ ಯೋಜನೆಯ ಮೂರನೇ ಹಂತದ ವಿಜಯಪುರ ಮುಖ್ಯ ಕಾಲುವೆ ಮೂಲಕ ಜಿಲ್ಲೆಯ 97 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಶಾಸಕ ಶಿವಾನಂದ ಪಾಟೀಲ ಸೋಮವಾರ ಚಾಲನೆ ನೀಡಿದರು.
    ಕೂಡಗಿ ರೈಲ್ವೆ ಸ್ಟೇಶನ್ ಸಮೀಪದ ಮುಖ್ಯ ಕಾಲುವೆ ಮೂಲಕ ಮುಳವಾಡ ಮತ್ತು ಚಿಮ್ಮಲಗಿ ಏತ ನೀರಾವರಿ ವ್ಯಾಪ್ತಿಗೆ ಬರುವ ಜಿಲ್ಲೆಯ 97 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಗಂಗಾ ಪೂಜೆ ನೆರವೇರಿಸಿದ ಅವರು, ಮುಳವಾಡ ಏತ ನೀರಾವರಿ ಯೋಜನೆ ಮೂರನೇ ಹಂತದ ಮುಖ್ಯ ಕಾಲುವೆ ರೈಲ್ವೆ ಸೇತುವೆ ಕೆಳಗೆ ಬಾಕ್ಸ್ ಪುಸ್ಸಿಂಗ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಮುಖ್ಯ ಕಾಲುವೆಗೆ ಇಂದು ಹರಿಸಿರುವುದರಿಂದ ಮುಳವಾಡ ಏತ ನೀರಾವರಿ ವ್ಯಾಪ್ತಿಯಲ್ಲಿ ಬರುವ 61 ಮತ್ತು ಚಿಮ್ಮಲಗಿ ಏತ ನೀರಾವರಿ ವ್ಯಾಪ್ತಿಗೆ ಬರುವ 36 ಕೆರೆಗಳು ಸೇರಿದಂತೆ ಜಿಲ್ಲೆಯ ಒಟ್ಟು 97 ಕೆರೆಗಳಿಗೆ ನೀರು ದೊರೆಯಲಿದ್ದು, ಇದರಿಂದ ತೀವ್ರ ಬೇಸಿಗೆ ಕಾಲದಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸೌಲಭ್ಯ ದೊರೆಯಲಿದೆ ಎಂದು ಹೇಳಿದರು.

    2 ಟಿಎಂಸಿ ನೀರು ಸಂಗ್ರಹಕ್ಕೆ ಅನುಮತಿ

    ಈ ಭಾಗದ ಬಹು ದಿನಗಳ ಬೇಡಿಕೆ ಇದಾಗಿದ್ದು, ಈ ಹಿಂದೆ ಟ್ರಾಯಲ್ ರನ್ ಮೂಲಕ ನೀರು ಬಿಡಲಾಗಿತ್ತು. ಪೂರ್ವ ಯೋಜನೆಯನ್ವಯ, ನಾಗರಿಕರ ಬೇಡಿಕೆಗೆ ಅನುಗುಣವಾಗಿ ಮುಖ್ಯ ಕಾಲುವೆ ಮುಖಾಂತರ ನೀರು ಬಿಡಲಾಗಿದ್ದು, ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿಯೂ ಬೇಸಿಗೆ ಸಮಯದಲ್ಲಿ ತುರ್ತು ಬಳಕೆಗಾಗಿ ಮತ್ತು ಕುಡಿಯುವ ನೀರಿಗಾಗಿ 2 ಟಿಎಂಸಿ ನೀರು ಸಂಗ್ರಹಕ್ಕೆ ಅನುಮತಿ ದೊರೆತಿದೆ. ಮುಳವಾಡ ಹಂತ ಮೂರರ ಕಾಲುವೆ ಜಾಲಕ್ಕೆ ನೀರು ಹರಿಸಲು ಯಾವುದೇ ಅಡೆತಡೆ ಇರುವುದಿಲ್ಲ. ಪ್ರತಿದಿನ ಮುಳವಾಡ ಹಂತ ಮೂರರ 61 ಕೆರೆಗಳಿಗೆ 1017 ಕ್ಯೂಸೆಕ್ ನೀರನ್ನು 8 ತಾಸುಗಳವರೆಗೆ ಕೆರೆ ತುಂಬಲು 30 ದಿನಗಳ ಅವಧಿ ಪರಿಗಣಿಸಲಾಗಿದೆ. ಅದರಂತೆ ಚಿಮ್ಮಲಗಿ ಏತ ನೀರಾವರಿ ಯೋಜನೆಯಡಿ 36 ಕೆರೆಗಳನ್ನು ತುಂಬಲು ಪ್ರತಿದಿನ 610 ಕ್ಯೂಸೆಕ್ ನೀರನ್ನು 8 ಗಂಟೆಗಳ ಕಾಲ ಪೂರೈಸಿ 20 ದಿನಗಳ ಅವಧೊ ನಿಗದಿಪಡಿಸಲಾಗಿದೆ ಎಂದು ಹೇಳಿದರು.

    ಸದ್ಯ 1.30 ಟಿಎಂಸಿ ನೀರು ಬಳಕೆ

    ಈ ಅವಧಿಯಲ್ಲಿ ಒಟ್ಟಾರೆ 1.30 ಟಿಎಂಸಿ ನೀರನ್ನು ಬಳಸಿ ಒಟ್ಟು 97 ಕೆರೆಗಳನ್ನು ಅವುಗಳ ಪ್ರತಿಶತ 50 ರಷ್ಟು ಸಾಮರ್ಥ್ಯಕ್ಕೆ ತುಂಬಲು ಯೋಜಿಸಲಾಗಿದೆ. ಸಂಗ್ರಹಣೆಯಲ್ಲಿರುವ 2 ಟಿಎಂಸಿ ನೀರಿನ ಪೈಕಿ ಸದ್ಯ 1.30 ಟಿಎಂಸಿ ನೀರನ್ನು ಬಳಸಿ ಉಳಿದ ಪ್ರಮಾಣವನ್ನು ಪರಿಸ್ಥಿತಿಗನುಗುಣವಾಗಿ ಪುನಃ ಬಳಸಲು ಯೋಜಿಸಲಾಗಿದೆ. ಜಿಲ್ಲೆಯ ಜನರಿಗೆ ಇದು ಉತ್ತಮ ಕೊಡುಗೆಯಾಗಿದ್ದು, ಇತ್ತೀಚೆಗೆ ಹಲವು ಹೋರಾಟಗಾರರು ಉಪವಾಸ ಸತ್ಯಾಗ್ರಹ ನಡೆಸಿ ನೀರಿನ ಬೇಡಿಕೆ ಇಟ್ಟಿದ್ದರ ಹಿನ್ನೆಲೆಯಲ್ಲಿ ಇಂದು ಸರ್ಕಾರದ ಮತ್ತು ಜನಪ್ರತಿನಿಧಿಗಳ ಪರವಾಗಿ ಕೆರೆಗಳಿಗೆ ನೀರು ದೊರೆಯಲಿದ್ದು, ಇದರ ಸದುಪಯೋಗ ಪಡೆಯುವಂತೆ ಅವರು ತಿಳಿಸಿದರು.
    ಜಿಪಂ ಸದಸ್ಯ ತಾನಾಜಿ ನಾಗರಾಳ, ತಾಪಂ ಮಾಜಿ ಉಪಾಧ್ಯಕ್ಷ ಸಿದ್ದಪ್ಪ ಮಿಣಜಗಿ, ನ್ಯಾಯವಾದಿ ಎಸ್.ಎಸ್. ಗರಸಂಗಿ, ಎಪಿಎಂಸಿ ನಿರ್ದೇಶಕ ಸಿ.ಪಿ. ಪಾಟೀಲ, ಕೆಬಿಜೆಎನ್‌ಎಲ್ ಮುಖ್ಯ ಅಭಿಯಂತರ ಆರ್.ಪಿ. ಕುಲಕರ್ಣಿ, ಮುಳವಾಡ ಏತ ನೀರಾವರಿ ಯೋಜನೆ ಅಧೀಕ್ಷಕ ಅಭಿಯಂತರ ಜಗದೀಶ ರಾಠೋಡ, ಆಲಮಟ್ಟಿ ಆಣೆಕಟ್ಟು ವಲಯದ ಅಭಿಯಂತರ ಚಲವಾದಿ, ಅಧೀಕ್ಷಕ ಅಭಿಯಂತರ ಬಸವರಾಜು, ನಿವೃತ್ತ ಅಭಿಯಂತರ ಎಸ್.ಬಿ. ಪಾಟೀಲ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts