ಕೆಂಭಾವಿ: ಪ್ರತಿ ತಾಯಿ ಮಕ್ಕಳಿಗೆ ಉತ್ತಮ ಸಂಸ್ಕಾರ, ಧರ್ಮ ಬೋಧನೆಯ ತತ್ವಗಳನ್ನು ಬಿತ್ತಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಖ್ಯಾತ ವಾಗ್ಮಿ ಹಾರಿಕಾ ಮಂಜುನಾಥ ಹೇಳಿದರು.
ಕೂಡಲಗಿ ಗ್ರಾಮದ ಶಾಂತಾನಂದ ಸರಸ್ವತಿ ಸ್ವಾಮಿಗಳ (ಬಾಬಾ ಮಹಾರಾಜ) ಜಾತ್ರೋತ್ಸವದ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ನಮ್ಮ ದೇಶ ಧರ್ಮದ ತಳಹದಿಯ ಮತ್ತು ಉತ್ತಮ ಸಂಸ್ಕಾರದ ದೇಶವಾಗಿದೆ. ಹಿಂದು ಸಮಾಜದಲ್ಲಿ ಹುಟ್ಟಿರುವ ಪ್ರತಿಯೊಬ್ಬರೂ ಉತ್ತಮ ಸಂಸ್ಕಾರ ಹೊಂದುವುದು ಅವಶ್ಯಕವಾಗಿದೆ. ತಮ್ಮ ಮಕ್ಕಳಿಗೆ ಎಷ್ಟೇ ಶಿಕ್ಷಣ ಕೊಡಿಸಿದರೂ ಮೊದಲು ಉತ್ತಮ ಸಂಸ್ಕಾರ ನೀಡುವುದು ಪಾಲಕರ ಕರ್ತವ್ಯವಾಗಿದೆ. ಧಾರ್ಮಿಕ, ಮಕ್ಕಳಲ್ಲಿ ಆಧ್ಯಾತ್ಮಿಕ ಮನೋಭಾವನೆ ಬೆಳೆಸಬೇಕು, ರಾಮಾಯಣ, ಮಹಾಭಾರತ, ಗೀತೆಯಂಥ ಉತ್ತಮ ಗ್ರಂಥಗಳ ಜ್ಞಾನವನ್ನು ಬೆಳೆಸಬೇಕು ಎಂದು ಹೇಳಿದರು.
ಸ್ವಾತಂತ್ರ್ಯಸಂಗ್ರಾಮದಲ್ಲಿ ಸುರಪುರದ ರಾಜಾ ವಂಕಟಪ್ಪ ನಾಯಕರ ಹೋರಾಟ ಅತ್ಯಂತ ಸ್ಮರಣೀಯವಾಗಿದ್ದು, ಬ್ರಿಟಿಷ್ರ ವಿರುದ್ಧ ಒಬ್ಬಂಟಿಗರಾಗಿ ಹೋರಾಟ ಮಾಡಿ ದೇಶಕ್ಕೆ ಸ್ವತಂತ್ರ ತಂದುಕೊಟ್ಟ ಮಹಾನ್ ನಾಯಕರಲ್ಲಿ ಸುರಪುರದ ಅರಸು ಪ್ರಮುಖ ಪಾತ್ರ ಇದೆ ಎಂದರು.
ಪೀಠಾಧಿಪತಿ ಶ್ರೀ ಉಮಾಕಾಂತ ಸಿದ್ಧರಾಜ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಮಾತೋಶ್ರೀ ಶರಣಮ್ಮ ತಾಯಿ, ಶ್ರೀ ಚನ್ನವೀರಸ್ವಾಮಿ, ಗಡಗಿಸೋಮನಾಳದ ಗಾಂಗೇಯಪಿತ, ಬ್ರಾಹ್ಣ ಸಂಘದ ಜಿಲ್ಲಾ ಗೌರವಾಧ್ಯಕ್ಷ ವಾಮನರಾವ ದೇಶಪಾಂಡೆ, ಶ್ರೀಪದ ಭಟ್ಟ ಜೋಷಿ, ಮೃತ್ಯುಂಜಯ ಮಹಾರಾಜ, ಗಜಾನನ ಮಹಾರಾಜ, ಗಂಗಾಧರ ಮಹಾರಾಜ ಇದ್ದರು. ನಾಗರಾಜ ಸಜ್ಜನ ನಿರೂಪಣೆ ಮಾಡಿದರು.