ತುಮಕೂರು: ಪ್ರಯಾಣಿಕರೊಬ್ಬರು ಅಸ್ವಸ್ಥಗೊಂಡಿದ್ದನ್ನು ಗಮನಿಸಿದ ಕೆಎಸ್ಆರ್ಟಿಸಿ ಚಾಲಕ ಹಾಗೂ ನಿರ್ವಾಹಕ ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮರೆದಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರಿನಲ್ಲಿ ನಡೆದಿದೆ.
ಶಿವಮೊಗ್ಗದಿಂದ ಬೆಂಗಳೂರಿನತ್ತ ಬಸ್ನಲ್ಲಿ ಘಟನೆ ನಡೆದಿದ್ದು, ಅಸ್ವಸ್ಥಗೊಂಡವರನ್ನು ಭದ್ರಾವತಿ ಮೂಲದ ಈಶ್ವರ್ ರೆಡ್ಡಿ ಎಂದು ಗುರುತಿಸಲಾಗಿದೆ. ಬಸ್ ಚಾಲಕ ಪ್ರಕಾಶ್ ಹಾಗೂ ನಿರ್ವಾಹಕ ಓಂಕಾರ್ ಅವರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: VIDEO| ಧಾರ್ಮಿಕ ಸೌಹಾರ್ದತೆಗೆ ಧಕ್ಕೆ; ಆರೋಪಿಗಳ ಮನೆ ಮೇಲೆ ಜೆಸಿಬಿ ಕಾರ್ಯಾಚರಣೆ
ಶಿವಮೊಗ್ಗದಿಂದ ಬೆಂಗಳೂರಿನತ್ತ ಬರುತ್ತಿದ್ದ ಬಸ್ ತಿಪಟೂರು ತಲುಪಿದ ವೇಳೆ ಈಶ್ವರ್ ರೆಡ್ಡಿ ಕುಸಿದು ಬಿದ್ದಿದ್ದು ಏಕಾಏಕಿ ಅವರ ಬಾಯಿಂದ ನೊರೆ ಹಾಗೂ ನಾಲಗೆಯಿಂದ ರಕ್ತಬರಲು ಶುರುವಾಗಿದೆ. ಇದನ್ನು ಗಮನಿಸಿದ ನಿರ್ವಾಹಕ ಓಂಕಾರ್ ಕೂಡಲೇ ಬಸ್ಅನ್ನು ಸರ್ಕಾರಿ ಆಸ್ಪತ್ರೆಯತ್ತ ತಿರುಗಿಸುವಂತೆ ಚಾಲಕ ಪ್ರಕಾಶ್ಗೆ ಸೂಚಿಸಿದ್ದಾರೆ.
ಸಮಯಕ್ಕೆ ಸರಿಯಾಗಿ ರೋಗಿಯನ್ನು ಆಸ್ಪತ್ರೆಗೆ ಸೇರಿಸಿ ಅವರ ಜೀವ ಉಳಿಸಿದ ಕೆಎಸ್ಆರ್ಟಿಸಿ ಸಿಬ್ಬಂದಿ ಸಮಯಪ್ರಜ್ಞೆ ಹಾಗು ಮನುಷ್ಯತ್ವ ಗುಣಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.