ಶಿವಮೊಗ್ಗ: ಇತ್ತೀಚೆಗಷ್ಟೇ ಉದ್ಘಾಟನೆಯಾದ ನೂತನ ಸಂಸತ್ ಭವನದಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಉಂಟಾದ ಭದ್ರತಾ ಲೋಪ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದು, ಘಟನೆ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ಈಶ್ವರಪ್ಪ ಇದು ಆಘಾತಕಾರಿ ಮತ್ತು ಮನಸ್ಸಿಗೆ ನೋವನ್ನುಂಟು ಮಾಡುವ ಸಂಗತಿ ಎಂದು ಹೇಳಿದ್ದಾರೆ.
ಈ ಕುರಿತು ಶಿವಮೊಗ್ಗ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೆ.ಎಸ್. ಈಶ್ವರಪ್ಪ ಪ್ರತಾಪ್ ಸಿಂಹನಂಥ ದೇಶಭಕ್ತ, ಹಿಂದುತ್ವವಾದಿಯನ್ನು ಶಂಕಿಸುವುದು ಕಾಂಗ್ರೆಸ್ಗೆ ಮಾತ್ರ ಸಾಧ್ಯ ಎಂದು ಕಿಡಿಕಾರಿದ್ದಾರೆ. ಭಾರೀ ಭದ್ರತೆಯ ಹೊರತಾಗಿಯೂ ಕಿಡಿಗೇಡಿಗಳು ಸಂಸತ್ತಿನ ಒಳಗೆ ನುಗ್ಗಿದ್ದು ಆಘಾತಕಾರಿ ಮತ್ತು ಮನಸ್ಸಿಗೆ ನೋವನ್ನುಂಟು ಮಾಡುವ ಸಂಗತಿಯಾಗಿದೆ.
ಇದನ್ನೂ ಓದಿ: ಯುವನಿಧಿ ಯೋಜನೆ ಜಾರಿ ದಿನಾಂಕ ಮುಂದೂಡಿದ ಸರ್ಕಾರ
ಬಂಧಿತ ಆರೋಪಿಗಳಿಗೆ ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಿಂದ ಪಾಸ್ ಪಡೆದಿರುವ ಬಗ್ಗೆ ಕೇಳಿದಾಗ, ಅಚಾತುರ್ಯ ನಡೆದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಪ್ರಥಮ ಅಧಿವೇಶನದ ವೇಳೆ ವ್ಯಕ್ತಿಯೊಬ್ಬರು ಶಾಸಕರ ಆಸನದಲ್ಲಿ ಬಂದು ಕುಳಿತಿದ್ದರು ಅದು ಭದ್ರತಾ ಲೋಪವಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ನಾಯಕರು ತನಿಖೆಗೆ ಆಗ್ರಹಿಸಿದ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ ಅವರಿಗೆ ಮಾಡಲು ಬೇರೆ ಉದ್ಯೋಗವಿಲ್ಲ, ಪ್ರತಾಪ್ ಸಿಂಹನಂಥ ದೇಶಭಕ್ತ ಮತ್ತು ಹಿಂದೂತ್ವವಾದಿಯ ಮೇಲೆ ಶಂಕೆ ಪಡೋದು, ಖಂಡಿಸೋದು ಕೇವಲ ಕಾಂಗ್ರೆಸ್ಸಿಗರಿಗೆ ಮಾತ್ರ ಸಾಧ್ಯ ಎಂದು ವಾಗ್ದಾಳಿ ನಡೆಸಿದ್ದಾರೆ.