ನವದೆಹಲಿ: ಲೋಕಸಭೆ ಕಲಾಪದ ವೇಳೆ ಉಂಟಾದ ಭದ್ರತಾ ಲೋಪದ ಕುರಿತು ಚರ್ಚಿಸಲು ಅವಕಾಶ ನೀಡಬೇಕೆಂದು ಕೋರಿ ಸದನದಲ್ಲಿ ಗದ್ದಲ ಎಬ್ಬಿಸಿದ ಆರೋಪದ ಮೇಲೆ ವಿರೋಧ ಪಕ್ಷದ 15 ಸಂಸದರನ್ನು ಅಮಾನತು ಮಾಡಲಾಗಿದೆ. ಲೋಕಸಭೆಯಲ್ಲಿ 14 ಹಾಗೂ ರಾಜ್ಯಸಭೆಯಲ್ಲಿ ಓರ್ವ ಸಂಸದನನ್ನು ಕಲಾಪದಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಅಮಾನತುಗೊಂಡಿರುವ 14 ಸಂಸದರ ಪೈಕಿ ಒಂಬತ್ತು ಮಂದಿ ಕಾಂಗ್ರೆಸ್, ಇಬ್ಬರು ಸಿಪಿಎಂ, ಒಬ್ಬರು ಸಿಪಿಐ ಮತ್ತು ಇಬ್ಬರು ಡಿಎಂಕೆ ಪಕ್ಷದವರಾಗಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಶ್ರೀಕೃಷ್ಣ ಜನ್ಮಭೂಮಿ ವಿವಾದ; ಶಾಹಿ ಈದ್ಗಾ ಮೈದಾನ ಸರ್ವೇಗೆ ಹೈಕೋರ್ಟ್ ಅನುಮತಿ
ಕಾಂಗ್ರೆಸ್ ಸಂಸದರಾದ ಮಾಣಿಕಂ ಟ್ಯಾಗೋರ್, ಎಂಡಿ ಜಾವೇದ್, ವಿಕೆ ಶ್ರೀಕಂದನ್, ಬೆನ್ನಿ ಬೆಹನನ್, ಡಿಎಂಕೆ ಸಂಸದರಾದ ಕೆ ಕನಿಮೋಳಿ ಮತ್ತು ಎಸ್ಆರ್ ಪಾರ್ಥಿಬನ್, ಸಿಪಿಎಂ ಸಂಸದರಾದ ಪಿಆರ್ ನಟರಾಜನ್ ಮತ್ತು ಎಸ್ ವೆಂಕಟೇಶನ್ ಮತ್ತು ಸಿಪಿಐ ಸಂಸದ ಕೆ ಸುಬ್ಬರಾಯನ್ ಅಮಾನತುಗೊಂಡಿರುವ ಸಂಸದರು ಎಂದು ತಿಳಿದು ಬಂದಿದೆ. ಕಲಾಪದ ವೇಳೆ ಅಶಿಸ್ತಿನ ವರ್ತನೆ ತೋರಿದರೆಂಬ ಕಾರಣಕ್ಕೆ ತೃಣಮೂಲ ಕಾಂಗ್ರೆಸ್ ಸಂಸದ (ರಾಜ್ಯಸಭೆ) ಡೆರೆಕ್ ಒ’ಬ್ರಿಯಾನ್ ಅವರನ್ನು ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಲಾಗಿದೆ.
ಸಂಸದರನ್ನು ಅಮಾನತು ಮಾಡಿರುವ ಸ್ಪೀಕರ್ ಕ್ರಮವನ್ನು ಖಂಡಿಸಿರುವ ಕಾಂಗ್ರೆಸ್ ಇದು ಪ್ರಜಾಪ್ರಭುತ್ವದ ವಿರೋಧಿ ನಡೆಯಾಗಿದೆ. ಸಂಸತ್ ಅಧಿವೇಶನದ ವೇಳೆ ಉಂಟಾದ ಭದ್ರತಾ ಲೋಪದ ಕುರಿತು ಉತ್ತರಿಸುವಂತೆ ಆಗ್ರಹಿಸಿದ ಸಂಸದರನ್ನು ಅಮಾನತು ಮಾಡಿರುವ ಕ್ರಮ ಖಂಡನೀಯ. ಬಿಜೆಪಿ ಸರ್ಕಾರ ಸಂಸತ್ತನ್ನು ರನ್ನರ್ ಸ್ಟ್ಯಾಂಪ್ ಮಾಡಿದ್ದು, ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಯಾವುದೇ ಕ್ರಮ ಉಳಿದಿಲ್ಲ ಎಂದು ಕಿಡಿಕಾರಿದೆ.