More

    ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಯಶ

    ಉಡುಪಿ: ಪರಿಸರ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅರಣ್ಯ ಇಲಾಖೆ 2011ರಲ್ಲಿ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಜಾರಿಗೊಳಿಸಿದ್ದು, 10 ವರ್ಷದಲ್ಲಿ ಕುಂದಾಪುರ ವಿಭಾಗ ವ್ಯಾಪ್ತಿಯಲ್ಲಿ 6.28 ಲಕ್ಷಕ್ಕೂ ಅಧಿಕ ಸಸಿಗಳನ್ನು ರೈತರಿಗೆ ವಿತರಿಸಲಾಗಿದೆ.

    ಯೋಜನೆಯನ್ವಯ ರೈತರು, ಸಾರ್ವಜನಿಕರು ರಿಯಾಯಿತಿ ದರದಲ್ಲಿ ಅರಣ್ಯ ಇಲಾಖೆಯ ಹತ್ತಿರದ ಸಸ್ಯಕ್ಷೇತ್ರ(ನರ್ಸರಿ)ಗಳಿಂದ ಸಸಿಗಳನ್ನು ಪಡೆದು ಜಮೀನಿನಲ್ಲಿ ನೆಟ್ಟು ಪೋಷಿಸಬೇಕು. ಬದುಕುಳಿದ ಪ್ರತಿ ಸಸಿಗೆ ಮೊದಲ ವರ್ಷಾಂತ್ಯದಲ್ಲಿ 35 ರೂ. ಹಾಗೂ ಎರಡನೇ ಮತ್ತು ಮೂರನೇ ವರ್ಷದ ಅಂತ್ಯದಲ್ಲಿ ಕ್ರಮವಾಗಿ 40 ಹಾಗೂ 50 ರೂ. ಸೇರಿ ಒಟ್ಟು 125 ರೂ. ಪ್ರೋತ್ಸಾಹಧನ ಪಾವತಿಸಲಾಗುತ್ತದೆ.

    ಮೂರು ವರ್ಷಗಳಲ್ಲಿ 1 ಕೋಟಿ ಪಾವತಿ
    ಕುಂದಾಪುರ ಅರಣ್ಯ ವಿಭಾಗದಲ್ಲಿ ಕಳೆದ ಮೂರು ವರ್ಷಗಳಲ್ಲಿ 1,05,58,120 ರೂ.ಗಳನ್ನು ರೈತರಿಗೆ ಪಾವತಿಸಲಾಗಿದೆ. ಆರಂಭದಲ್ಲಿ ಪ್ರೋತ್ಸಾಹ ಧನ ಕಡಿಮೆ ಇದ್ದು, ಎರಡು ವರ್ಷಗಳಿಂದ ಹೆಚ್ಚಿಸಲಾಗಿದೆ. 2018-19ನೇ ಸಾಲಿನಲ್ಲಿ 16,345 ರೂ., 2019-20ರಲ್ಲಿ 44,51,775 ರೂ. ಪಾವತಿಸಲಾಗಿದೆ. ಕಳೆದ ವರ್ಷ 60.90 ಲಕ್ಷ ರೂ. ರೈತರಿಗೆ ನೀಡಲಾಗಿದೆ.

    59 ಸಾವಿರ ಸಸಿಗಳು
    ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ರೈತರಿಗಾಗಿ ಒಟ್ಟು 59,292 ಸಸಿಗಳನ್ನು ಬೆಳೆಸಲಾಗಿದೆ. ಸಾಗುವಾನಿ, ಮಹಾಗನಿ, ನೇರಳೆ, ಹಲಸು, ಶ್ರೀಗಂಧ, ಮಾವು, ರೆಂಜ, ಪುನರ್‌ಪುಳಿ, ರಾಂಪತ್ರೆ, ಬಾದಾಮಿ ಇತ್ಯಾದಿ ತಳಿಗಳ ಸಸಿಗಳು ಲಭ್ಯವಿವೆ. ಬೈಂದೂರು, ಕುಂದಾಪುರ, ಶಂಕರನಾರಾಯಣ, ಉಡುಪಿ, ಹೆಬ್ರಿ, ಕಾರ್ಕಳ, ಮೂಡುಬಿದಿರೆ ಹಾಗೂ ವೇಣೂರು ವಲಯಗಳ ಅರಣ್ಯ ಇಲಾಖೆಯ ನರ್ಸರಿಗಳಲ್ಲಿ ಈ ಸಸಿಗಳನ್ನು ರೈತರು ಪಡೆಯಬಹುದು.
    ರೈತರು ಮಳೆಗಾಲದಲ್ಲಿ ಕೃಷಿ ಚಟುವಟಿಕೆಗಳ ಜೊತೆಗೆ ಸಸಿ ಬೆಳೆಸಲು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಸಹಕಾರಿಯಾಗಲಿದೆ. ಅರಣ್ಯ ಇಲಾಖೆ ನೀಡುವ ಪ್ರೋತ್ಸಾಹ ಧನದಿಂದ ರೈತರು ಸಸಿಗಳನ್ನು ಖರೀದಿಸಲು ಹಾಗೂ ನೆಡಲು ಆಗುವ ಖರ್ಚು ಭರಿಸಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಟ್ಟು ಬೆಳೆಸಿದರೆ ಗಣನೀಯ ಪ್ರಮಾಣದಲ್ಲಿ ಪ್ರೋತ್ಸಾಹ ಧನ ಪಡೆಯಬಹುದು. ಜೊತೆಗೆ ಮರಗಳಿಂದ ಸಿಗುವ ಹಣ್ಣುಗಳು, ಬೀಜ, ಮೇವು, ಮರಮಟ್ಟು ಇತ್ಯಾದಿ ಪ್ರಯೋಜನ ಪಡೆಯಲು ಅರ್ಹರಾಗಿದ್ದಾರೆ.

    ರೈತರು ಗಿಡಗಳನ್ನು ನೆಟ್ಟು ಪೋಷಿಸುವ ನಿಟ್ಟಿನಲ್ಲಿ ಮೂರು ವರ್ಷಗಳಿಗೆ 125 ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ. ಆಸಕ್ತರು ನೇರವಾಗಿ ನರ್ಸರಿಗೆ ಬಂದು ಆಧಾರ್ ಕಾರ್ಡ್ ಸಂಖ್ಯೆ, ಜಾಗದ ಆರ್‌ಟಿಸಿ, ಬ್ಯಾಂಕ್ ಖಾತೆ ವಿವರ ನೀಡಿ, 10 ರೂ. ಪಾವತಿಸಿ ನೋಂದಾಯಿಸಿಕೊಳ್ಳಬೇಕು. ನಂತರ ರಿಯಾಯಿತಿ ದರದಲ್ಲಿ ಸಸಿಗಳನ್ನು ಖರೀದಿಸಬಹುದು. ಹೀಗೆ ನೆಟ್ಟ ಗಿಡಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲಿಸುತ್ತಾರೆ.
    ಅಶೀಶ್ ರೆಡ್ಡಿ, ಡಿಎ್ಒ, ಕುಂದಾಪುರ ವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts