ಬೆಳಗಾವಿ: ಸ್ಮಾರ್ಟ್ವಾಚ್ ಬಳಸಿ ಕೆಪಿಟಿಸಿಎಲ್ ಪರೀಕ್ಷೆ ಬರೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಗೆದಷ್ಟೂ ಅಕ್ರಮ ಹೊರಬರುತ್ತಿದೆ. ಅಕ್ರಮದಲ್ಲಿ ಭಾಗಿಯಾಗಿರುವ ಮತ್ತಿಬ್ಬರನ್ನು ಬೆಳಗಾವಿ ಜಿಲ್ಲಾ ಪೊಲೀಸರು ಸೋಮವಾರ ಬಂಧಿಸಿದ್ದು, ಬಂಧನಕ್ಕೆ ಒಳಗಾದ ಆರೋಪಿಗಳ ಸಂಖ್ಯೆ 15ಕ್ಕೆ ಏರಿದೆ.
ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಹನಗಂಡಿ ನಿವಾಸಿ ಬೀರಪ್ಪ ಲಕ್ಷ್ಮಣ ಹನಗಂಡಿ (24) ಹಾಗೂ ಗೋಕಾಕ ತಾಲೂಕಿನ ಅರಭಾವಿಯ ನಿವಾಸಿ ಶಿವಾನಂದ ದುಂಡಪ್ಪ ಹಳ್ಳೂರ ಬಂಧಿತರು. ಬಂಧಿತರಿಂದ ಅಕ್ರಮಕ್ಕೆ ಬಳಸಿದ 6 ಮೊಬೈಲ್ ಫೋನ್, ಲ್ಯಾಪ್ಟಾಪ್ ಹಾಗೂ ಎಲೆಕ್ಟ್ರಾನಿಕ್ ಡಿವೈಸ್ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಬೀರಪ್ಪ ಹನಗಂಡು ಎಂಬಾತ ಪರೀಕ್ಷೆಯಲ್ಲಿ ಅಕ್ರಮ ಎಸಗಲು ಪ್ರಶ್ನೆ ಪತ್ರಿಕೆಗಳ ಮುದ್ರಣಕ್ಕಾಗಿ ಲ್ಯಾಪ್ಟಾಪ್ ಹಾಗೂ ಸ್ಮಾರ್ಟ್ವಾಚ್ ಖರೀದಿಸಿ ಇನ್ನಿತರ ಆರೋಪಿಗಳಿಗೆ ತಂದು ಕೊಟ್ಟಿದ್ದನು. ಇನ್ನು ಶಿವಾನಂದ ಹಳ್ಳೂರ ಸ್ಮಾರ್ಟ್ವಾಚ್ಗಳಿಗೆ ಕನೆಕ್ಟ್ ಮಾಡುವ ಎಲೆಕ್ಟ್ರಾನಿಕ್ ಡಿವೈಸ್ ಸಮೇತ ಪರೀಕ್ಷೆಗೆ ಹಾಜರಾಗಿದ್ದ ಎನ್ನಲಾಗಿದೆ. ಬೀರಪ್ಪನಿಂದ ಲ್ಯಾಪ್ಟಾಪ್ ಹಾಗೂ ಒಂದು ಮೊಬೈಲ್ಫೋನ್ ಮತ್ತು ಶಿವಾನಂದ ಹಳ್ಳೂರನಿಂದ 5 ಮೊಬೈಲ್ಫೋನ್ ಹಾಗೂ ಎಲೆಕ್ಟ್ರಾನಿಕ್ ಡಿವೈಸ್ ಜಪ್ತಿ ಮಾಡಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
62 ವರ್ಷಗಳ ಹಿಂದೆ ಕಳವಾಗಿದ್ದ ನಟರಾಜ ಮೂರ್ತಿ ನ್ಯೂಯಾರ್ಕ್ನಲ್ಲಿ ಪತ್ತೆ!