ಎನ್.ಆರ್.ಪುರ: ಶಾಲೆ ಕಟ್ಟಡ ನಿರ್ಮಾಣಕ್ಕೆಂದು ಮೀಸಲಿಟ್ಟಿದ್ದ 6 ಎಕರೆ ಜಾಗದಲ್ಲಿ ಮೂರೂವರೆ ಎಕರೆ ಜಾಗವನ್ನು ಖಾಸಗಿಯವರು ಮಾಡಿದ್ದ ಒತ್ತುವರಿಯನ್ನು ಸೋಮವಾರ ಪೊಲೀಸರ ನೆರವಿನೊಂದಿಗೆ ಸರ್ವೇ ನಡೆಸಿ ಶಾಲಾ ಜಾಗವನ್ನು ಗುರುತು ಮಾಡಲಾಯಿತು.
18 ವರ್ಷಗಳ ಹಿಂದೆ ಶಾಲಾ ಜಾಗವನ್ನು ಒತ್ತುವರಿ ಮಾಡಲಾಗಿತ್ತು. ಒತ್ತುವರಿ ತೆರವುಗೊಳಿಸುವ ಪ್ರಯತ್ನಗಳು ನಡೆಯುತ್ತಲೇ ಇದ್ದವು. ಈ ಮಧ್ಯೆ ಕರ್ನಾಟಕ ಪಬ್ಲಿಕ್ ಶಾಲೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿತ್ತು. ಎರಡು ಮೂರು ಬಾರಿ ಸರ್ವೇಯನ್ನೂ ಮಾಡಲಾಗಿತ್ತು. ಆದರೆ ಹದ್ದುಬಸ್ತು ಮಾಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.
ಲೋಕಾಯುಕ್ತರ ಜನಸಂಪರ್ಕ ಸಭೆಯಲ್ಲಿ ಸರ್ವೇ ಇಲಾಖೆ ಅಧಿಕಾರಿಗಳಿಗೆ ಲೋಕಾಯುಕ್ತರು ತರಾಟೆ ತೆಗೆದುಕೊಂಡಿದ್ದರಿಂದ ಪೊಲೀಸ್ ಬಂದೋಬಸ್ತ್ನಲ್ಲಿ ಒತ್ತುವರಿದಾರಿಗೆ ನೋಟಿಸ್ ನೀಡಿ, ಒತ್ತುವರಿದಾರರ ಸಮ್ಮುಖದಲ್ಲಿಯೇ ಸರ್ವೇ ಮಾಡಿ, ಜಾಗವನ್ನು ಗುರುತಿಸಿ ಶಾಲಾ ಆಡಳಿತ ಮಂಡಳಿಗೆ ಒಪ್ಪಿಸಲಾಯಿತು.
ಜನಸಂಗ್ರಾಮ ಪರಿಷತ್ ರಾಜ್ಯ ಮಂಡಳಿ ಸದಸ್ಯ ವಾಸುದೇವ ಕೋಟ್ಯಾನ್, ಬಿಇಒ ಕೆ.ಆರ್.ಪುಷ್ಪಾ, ಕೆಪಿಎಸ್ ಪ್ರಾಚಾರ್ಯೆ ಸರಸ್ವತಿ, ಉಪಪ್ರಾಚಾರ್ಯ ರುದ್ರಪ್ಪ, ಕಂದಾಯ ಇಲಾಖೆಯ ಮಂಜುನಾಥ, ವಿ.ಎ.ಸಾನಿಯಾ, ಎಸ್ಡಿಎಂಸಿ ಉಪಾಧ್ಯಕ್ಷ ಪುರುಷೋತ್ತಮ, ಸದಸ್ಯರಾದ ಕೆ.ಎ.ಅಬುಬೇಕರ್, ವಾಣಿ ನರೇಂದ್ರ, ಶಾಂಕುತಲಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಂಜುಂಡಪ್ಪ, ಕೆಪಿಎಸ್ ಮುಖ್ಯ ಶಿಕ್ಷಕಿ ನಿಶಾ ಇತರರಿದ್ದರು.