ಕೊಟ್ಟೂರು: ತಾಲೂಕಿನ ಹರಾಳು ಗ್ರಾಮಕ್ಕೆ ನಿರ್ದಿಷ್ಟ ಸ್ಮಶಾನ ಇಲ್ಲದ ಕಾರಣ, ಯಾರಾದರೂ ತೀರಿಕೊಂಡರೆ ಸಂಬಂದಿಕರು ಎಲ್ಲಿಲ್ಲದ ಪರದಾಟ ಎದುರಿಸಬೇಕಾಗಿ ಬರುತ್ತದೆ.
ಮಳೆಗಾಲದಲ್ಲಿ ಇವರು ಎದುರಿಸುವ ಸಮಸ್ಯೆ ಅಷ್ಟಿಷ್ಟಲ್ಲ. ಹಳ್ಳದ ಈಚೆ ಇರುವ ಈ ಜನ ಅತ್ಯಂತ ಕಿರಿದಾದ ಕಲ್ಲು-ಮುಳ್ಳು ತುಳಿದುಕೊಂಡು, ನಾಲ್ಕೈದು ಅಡಿಯಷ್ಟು ಹಳ್ಳದ ನೀರಿನಲ್ಲಿ ನೀರಿನಲ್ಲಿ ಶವವನ್ನು ಹೊತ್ತುಕೊಂಡೇ 40-50 ಅಡಿ ದೂರ ಸಾಗಬೇಕು. ಹೆಚ್ಚಿನ ಮಳೆಯಾದರೆ ದೇವರೇ ಗತಿ. ಶವ ಹೊತ್ತು ಹಳ್ಳ ದಾಟುವಾಗ ಶವದೊಂದಿಗೆ ಹಳ್ಳದಲ್ಲಿ ಬಿದ್ದ ಹತ್ತಾರು ಪ್ರಸಂಗಗಳು ನಡೆದಿವೆ. ಕೆಲ ಸ್ಥಿತಿವಂತರು ತಮ್ಮ ತಮ್ಮ ಹೊಲ, ಕಣದಲ್ಲಿ ಶವ ಸಂಸ್ಕಾರ ಮಾಡುತ್ತಾರೆ. ಬಡವರ ಗೋಳು ಹೇಳತೀರದು.
ಈ ಗ್ರಾಮದಲ್ಲಿ 500-600 ಮನೆಗಳಿದ್ದರೂ ನಿರ್ದಿಷ್ಟ ಸ್ಮಶಾನವಿಲ್ಲದ ಕಾರಣ ಈ ಸ್ಥಿತಿ ನಿರ್ಮಾಣವಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನ ಹರಿಸಿ, ಸಮಸ್ಯೆ ಪರಿಹರಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
ನನಗೀಗ 45 ವರ್ಷ. ನಾನು ಬಾಲ್ಯದಿಂದಲೂ ಶವ ಸಂಸ್ಕಾರ ಮಾಡುವ ಕಷ್ಟವನ್ನು ಕಣ್ಣಾರೆ ನೋಡಿದ್ದೇನೆ. ಅನುಭವಿಸಿದ್ದೇನೆ. ನಮ್ಮೂರಿನ ಸ್ಮಶಾನ ಎಲ್ಲಿದೆ ಎಂಬುದೇ ತಿಳಿಯುತ್ತಿಲ್ಲ. ಕೂಡಲೇ ಕಂದಾಯ ಇಲಾಖೆಯವರು ಸ್ಮಶಾನ ಭೂಮಿಯನ್ನು ಪತ್ತೆ ಹಚ್ಚಿ, ಅದ್ದುಬಸ್ತು ಮಾಡಿಕೊಟ್ಟು, ಗ್ರಾಮಸ್ಥರ ಶವ ಸಂಸ್ಕಾರದ ಕಷ್ಟವನ್ನು ಪರಿಹರಿಸಬೇಕು.
| ಎಸ್. ಗುರುಮೂರ್ತಿ, ತಾಪಂ ಮಾಜಿ ಅಧ್ಯಕ್ಷ, ಹರಾಳು ಗ್ರಾಮ.ಹರಾಳು ಗ್ರಾಮಸ್ಥರು ಶವ ಸಂಸ್ಕಾರ ಮಾಡಲು ಪಡುತ್ತಿರುವ ಕಷ್ಟ ಕೇಳಿ ಬೇಸರವಾಯಿತು. ಗ್ರಾಮಕ್ಕೆ ಸ್ಮಶಾನ ಇದೆ. ಈ ಭೂಮಿ ಎಲ್ಲಿದೆ ಎಂದು ಸರ್ವೇ ಮಾಡಿಸಿ, ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು. ಅದನ್ನು ಹದ್ದುಬಸ್ತು ಮಾಡಿಸಿ, ಸ್ಮಶಾನದ ಅಭಿವೃದ್ಧಿಗೆ ಬೇಕಾದ ವ್ಯವಸ್ಥೆಯನ್ನು ಮಾಡಲಾಗುವುದು.
| ಎಂ. ಕುಮಾರ ಸ್ವಾಮಿ, ಕೊಟ್ಟೂರು ತಹಸೀಲ್ದಾರ್