ಕೊಟ್ಟೂರು: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತಾಲೂಕಿನ ಸ್ಮಶಾನ ಕಾರ್ಮಿಕರು ಸೋಮವಾರ ಆಯಾ ಗ್ರಾಮದ ರುದ್ರಭೂಮಿಯಲ್ಲಿ ಪತಿಭಟನೆ ನಡೆಸಿದರು. ತಾಲೂಕಿನ 33 ಹಳ್ಳಿಗಳ ಸುಮಾರು 350 ಸ್ಮಶಾನ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸಂಘದ ತಾಲೂಕು ಕಾರ್ಯದರ್ಶಿ ಜಾಗಟಗೆರೆ ರುದ್ರೇಶ ಮಾತನಾಡಿ, ಕರೊನಾದಿಂದ ಮೃತಪಟ್ಟವರನ್ನು ಸ್ಮಶಾನ ಕಾರ್ಮಿಕರು ಅಂತ್ಯಕ್ರಿಯೆ ಮಾಡುತ್ತಿದ್ದಾರೆ. ಅವರು ತೀವ್ರ ಸಂಕಷ್ಟದಲ್ಲಿದ್ದು, ಸರ್ಕಾರ ಕರೊನಾ ಮುಗಿಯುವ ತನಕ ಕಾರ್ಮಿಕರ ಕುಟುಂಬಕ್ಕೆ ಉಚಿತವಾಗಿ ಪಡಿತರ ವಿತರಿಸಬೇಕು. ಅಲ್ಲದೆ 10 ಸಾವಿರ ರೂ. ಪ್ರೋತ್ಸಾಹಧನ ಹಾಗೂ ಆರೋಗ್ಯ ವಿಮೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು. ಇದಕ್ಕೂ ಮುನ್ನ ತಾಲೂಕು ಕಚೇರಿಯಲ್ಲಿ ಶಿರಸ್ತೇದಾರ್ ಎಸ್.ಲೀಲಾಗೆ ಸಂಘದ ಅಧ್ಯಕ್ಷ ಮೂಗಪ್ಪ, ಉಪಾಧ್ಯಕ್ಷೆ ಮೂಗಮ್ಮ, ಕಾರ್ಯದರ್ಶಿ ಜಾಗಟಗೆರೆ ರುದ್ರೇಶ, ಸಂಚಾಲಕ ಹನುಮಂತಪ್ಪ ಮನವಿ ಸಲ್ಲಿಸಿದರು.