ಕೊಪ್ಪಳ: ರಾಸಾಯನಿಕ ಬಳಸಿ ಬೆಳೆದ ಆಹಾರ ಧಾನ್ಯಗಳು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ನಮ್ಮ ಪೂರ್ವಜರು ಅನುಸರಿಸಿದ ಸಾವಯವ ಕೃಷಿ ಪದ್ಧತಿಗೆ ನಾವಿಂದು ಒತ್ತು ನೀಡಬೇಕಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಜಿಲ್ಲಾ ಉತ್ಸವ ಅಂಗವಾಗಿ ಜಿಲ್ಲಾಡಳಿತದಿಂದ ಸೋಮವಾರ ಹಮ್ಮಿಕೊಂಡಿದ್ದ ಸಿರಿಧಾನ್ಯ ಜಾಗೃತಿ ನಡಿಗೆಗೆ ಚಾಲನೆ ನೀಡಿ ಮಾತನಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಸಿರಿಧಾನ್ಯಗಳನ್ನು ಜಗತ್ತಿಗೆ ಪರಿಚಯಿಸುತ್ತಿದ್ದಾರೆ. ಇದನ್ನು ವಿದೇಶಗಳು ಅಪ್ಪಿಕೊಳ್ಳುತ್ತಿವೆ. ಸಿರಿಧಾನ್ಯ ಬೆಳೆಯುವ ರೈತರಿಗೆ ಕೇಂದ್ರ ಸರ್ಕಾರ 10 ಸಾವಿರ ರೂ.ಪ್ರೋತ್ಸಾಹಧನ ನೀಡುತ್ತಿದೆ. ಸದೃಢ ಆರೋಗ್ಯಕ್ಕೆ ಸಿರಿಧಾನ್ಯಗಳ ಬಳಕೆ ಅತ್ಯವಶ್ಯ. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜಾಗೃತಿ ನಡಿಗೆ ಹಮ್ಮಿಕೊಂಡಿದ್ದು ಉತ್ತಮ ಕೆಲಸ ಎಂದರು.
ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ನಿಜವಾದ ಸುಖ ಇರುವುದು ಉತ್ತಮ ಆರೋಗ್ಯದಲ್ಲಿ. ಮನುಷ್ಯ ಆರೋಗ್ಯವಾಗಿರಲು ಏನು ಉಣ್ಣಬೇಕು, ಎಷ್ಟು ಉಣ್ಣಬೇಕು, ಯಾವಾಗ ಉಣ್ಣಬೇಕು ಎಂಬುದು ತಿಳಿಯುತ್ತಿಲ್ಲ. ಇದರಿಂದ ಜನರ ಆರೋಗ್ಯ ಹಾಳಾಗುತ್ತಿದೆ. ನಮ್ಮ ಆಹಾರದ ಬಗ್ಗೆ ಜಾಗೃತಿವಹಿಸಿದರೆ, ಆರೋಗ್ಯ ಉತ್ತಮವಾಗಿರುತ್ತದೆ ಎಂದರು. ಡಿಸಿ ಎಂ.ಸುಂದರೇಶ ಬಾಬು, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಎಡಿಸಿ ಸಾವಿತ್ರಿ ಕಡಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್., ಉಪನಿರ್ದೇಶಕ ಸಹದೇವ ಯರಗೊಪ್ಪ, ಆಹಾರ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ, ಕೃಷಿ ತಂತ್ರಜ್ಞಾನ ಸಂಸ್ಥೆಯ ರಾಜ್ಯ ಪ್ರತಿನಿಧಿ ವೀರಣ್ಣ ಕಮತರ ಇತರರಿದ್ದರು.