ಅಳವಂಡಿ: ಮಕ್ಕಳಿಗೆ ಬಾಲ್ಯದಲ್ಲೇ ಅರಣ್ಯದ ಮತ್ತು ಅದರ ಮಹತ್ವದ ಬಗ್ಗೆ ಮಾಹಿತಿ ನೀಡುವ ಕೆಲಸ ಆಗಬೇಕು ಎಂದು ಶಿಕ್ಷಕ ವೆಂಕರಡ್ಡಿ ಇಮ್ಮಡಿ ತಿಳಿಸಿದರು.
ಹಲವಾಗಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಅರಣ್ಯ ದಿನಾಚರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪರಿಸರ ಗಿಡ ಮರಗಳಿಂದ ತುಂಬಿದ್ದರೆ ಮಾತ್ರ ಮನುಷ್ಯ ಆರೋಗ್ಯಕರ ಜೀವನ ನಡೆಸಲು ಸಾಧ್ಯ. ಮಳೆ ಬಂದರೆ ಬೆಳೆ ಚೆನ್ನಾಗಿ ಬರುತ್ತದೆ. ಇದರಿಂದ ನಾಡು ಸಮೃದ್ಧವಾಗಲು ಸಾಧ. ಆದ್ದರಿಂದ ಎಲ್ಲರೂ ಗಿಡ ನೆಟ್ಟು ಆರೈಕೆ ಮಾಡಬೇಕು ಎಂದರು.
ಉಚಿತವಾಗಿ ಶುದ್ಧ ಗಾಳಿ ಕೊಡುವ ಮರಗಳನ್ನು ಕಡಿಯಬೇಡಿ. ಗಿಡ ಬೆಳೆಸಿ ನಾಡು ಉಳಿಸಿ ಪರಿಸರ ಕಾಪಾಡಬೇಕು. ಒಬ್ಬ ಮನುಷ್ಯ ಒಂದು ದಿನಕ್ಕೆ 3 ಸಿಲಿಂಡರ್ನಷ್ಟು ಆಮ್ಲಜನಕ ಉಸಿರಾಡುತ್ತಾನೆ. ಒಂದು ಸಿಲಿಂಡರ್ ಬೆಲೆ ಸುಮಾರು 800 ರೂ. ಆದರೂ ದಿನಕ್ಕೆ 2400 ರೂ. ಆಗುತ್ತದೆ. ಒಂದು ವೇಳೆ ಆಮ್ಲಜನಕ ಗಿಡಗಳಿಂದ ಸಿಗದಿದ್ದರೆ ಉಸಿರಾಡಲು ವರ್ಷಕ್ಕೆ ಸುಮಾರು 8 ರಿಂದ 10 ಲಕ್ಷ ರೂ. ಖರ್ಚಾಗುತ್ತದೆ ಎಂದರು.
ಮುಖ್ಯ ಶಿಕ್ಷಕ ಯಮನೂರಸಾಬ್ ಯಕಲಾಸಪುರ, ಶಿಕ್ಷಕರಾದ ವೀರೇಶ, ಚನ್ನಮ್ಮ ನಾಗರಳ್ಳಿ, ಮಂಜುನಾಥ ಕೇಸಲಾಪುರ, ಲಕ್ಷ್ಮಣ ಕುಮಾರ, ಕೃಷ್ಣಪ್ಪ ಬಣ್ಣದ ಇತರರು ಇದ್ದರು.