ಕೊಪ್ಪಳ: ಎಸ್ಬಿಐ ಮಾದರಿಯಲ್ಲಿ ಎಲ್ಲ ಬ್ಯಾಂಕ್ಗಳಲ್ಲಿ ಋಣಮುಕ್ತ ಯೋಜನೆ ಜಾರಿ ಮಾಡಬೇಕೆಂದು ಒತ್ತಾಯಿಸಿ ಅಖಿಲ ಭಾರತ ದಾಳಿಂಬೆ ಬೆಳೆಗಾರರ ಸಂಘ ಹಾಗೂ ಕುಷ್ಟಗಿಯ ರೈತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ದುಂಡಾಣು ರೋಗದಿಂದ ದಾಳಿಂಬೆ ಬೆಳೆ ಹಾಳಾಗಿದೆ. ಮಾಡಿದ ಸಾಲ ಹಾಗೇ ಉಳಿದಿದ್ದು, ತೀರಿಸಲಾಗದೆ ಪರದಾಡುವಂತಾಗಿದೆ. ದಾಳಿಂಬೆ ಬೆಳೆಗಾರರ ಸಾಲ ಮನ್ನಾ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದರೂ ಪ್ರಯೋಜನವಾಗಿಲ್ಲ. ನಮ್ಮ ಒತ್ತಾಯಕ್ಕೆ ಮಣಿದು ಎಸ್ಬಿಐ ಮೂಲ ಸಾಲದ ಶೇ.10 ಹಣ ಕಟ್ಟಿದಲ್ಲಿ ಋಣ ಮುಕ್ತಗೊಳಿಸುತ್ತಿದ್ದಾರೆ. ಅದರಂತೆ ಇತರ ಬ್ಯಾಂಕಿನವರು ಯೋಜನೆ ಜಾರಿ ಮಾಡಬೇಕೆಂದು ಒತ್ತಾಯಿಸಿದ್ದು, ಇತ್ತೀಚೆಗೆ ನಡೆದ ಬ್ಯಾಂಕ್ಗಳ ಮುಖ್ಯಸ್ಥರ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ಆದರೆ, ಅದು ಕಾರ್ಯರೂಪಕ್ಕೆ ಬರುತ್ತಿಲ್ಲವೆಂದು ರೈತರು ಆರೋಪಿಸಿದರು.
ಎಸ್ಬಿಐನಂತೆ ಎಲ್ಲ ರಾಷ್ಟ್ರೀಕೃತ ಬ್ಯಾಂಕ್ಗಳು ಋಣಮುಕ್ತ ಯೋಜನೆ ಜಾರಿ ಮಾಡಿ ಶೇ.10 ಸಾಲದ ಮೊತ್ತ ಕಟ್ಟಿಸಿಕೊಳ್ಳಬೇಕು. ಆಯಾ ಬ್ಯಾಂಕ್ನ ಕೇಂದ್ರ ಕಚೇರಿಯವರು ರಾಜ್ಯದ ತಮ್ಮ ಎಲ್ಲ ಬ್ಯಾಂಕ್ಗಳಿಗೆ ಪತ್ರ ಬರೆದು ನಿರ್ದೇಶನ ನೀಡಬೇಕು. ಅದನ್ನು ಬಿಟ್ಟು ಸಾಲ ವಸೂಲಾತಿಗೆ ದಾವೆ ಹೂಡುವುದು, ಕಿರಕಿರಿ ನೀಡುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.