ಕೊಪ್ಪಳ: ಈ ಬಾರಿಯ ವಿಶ್ವ ಕಪ್ ನಲ್ಲಿ ಭಾರತ ಎಲ್ಲ ಪಂದ್ಯ ಗೆದ್ದರೂ ಅಂತಿಮವಾಗಿ ಸೋಲನುಭವಿಸಿತು.ದೇಶದ ಜನ ಸೋಲನ್ನು ಸಕಾರಾತ್ಮಕವಾಗಿ ಸ್ವೀಕರಿಸಿದರು. ಈ ನಡೆ ನಮಗೆಲ್ಲ ಮಾದರಿಯಾಗಬೇಕು ಎಂದು ಬಳ್ಳಾರಿ ವಲಯ ಐಜಿಪಿ ಬಿ.ಎಸ್. ಲೋಕೇಶಕುಮಾರ ಹೇಳಿದರು.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಜೀವನದ ಎಲ್ಲ ಹಂತದಲ್ಲಿ ನಿರಂತರ ಗೆಲುವು ಲಭಿಸುವುದಿಲ್ಲ. ಕೆಲವೊಮ್ಮೆ ಸೋಲು ಅನುಭವಿಸಬೇಕಾಗುತ್ತದೆ. ಸೋಲನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಗುಣ ಬೆಳಸಿಕೊಳ್ಳಬೇಕು. ಎಲ್ಲರೂ ಕ್ರೀಡಾ ಸ್ಫೂರ್ತಿಯಿಂದ ಭಾಗವಹಿಸಿದ್ದು ಕಾಣುತ್ತಿದೆ.
ಶಿಸ್ತುಬದ್ಧವಾಗಿ ಕ್ರೀಡಾಕೂಟ ಆಯೋಜಿಸಿದ್ದೀರಿ. ಸದಾ ಒತ್ತಡದಲ್ಲಿ ಕೆಲಸ ಮಾಡುವ ನಮಗೆ ಕ್ರೀಡಾಕೂಟದಿಂದ ಕೊಂಚ ಮನರಂಜನೆ, ಉಲ್ಲಾಸ ಸಿಗುತ್ತದೆ. ಕರ್ತವ್ಯ ನಿರ್ವಹಣೆಗೆ ಹೊಸ ಚೈತನ್ಯ ದೊರೆಯುತ್ತದೆ ಎಂದರು.
ಕುದುರೆ ಏರಿದ ಸಿಪಿಐ: ಕೊಪ್ಪಳ ಗ್ರಾಮೀಣ ಸಿಪಿಐ ಮಹಾಂತೇಶ ಸಜ್ಜನ ಬಹುಮಾನ ಪಡೆಯಲು ಕುದುರೆ ಏರಿ ಆಗಮಿಸುವ ಮೂಲಕ ನೆರೆದವರ ಗಮನ ಸೆಳೆದರು. ಅವರು ಬರುತ್ತಲೇ ನೆರೆದವರು ಶಿಳ್ಳೆ, ಕೇಕೆ ಹಾಕಿ ಹುರಿದುಂಬಿಸಿದರು. ಅತಿಥಿಗಳು ಖುಷಿಪಟ್ಟರು.
ಹಲವು ಪ್ರಶಸ್ತಿ ಪಡೆದ ಎಸ್ಪಿ:ಕ್ರೀಡಾಕೂಟದಲ್ಲಿ ಕೊಪ್ಪಳ ನಗರ ಮತ್ತು ಗಂಗಾವತಿ ನಗರ ಠಾಣೆ ತಂಡಗಳು ಚಾಂಪಿಯನ್ಸ್ ಗೌರವ ಪಡೆದುಕೊಂಡವು. ಎಸ್ಪಿ ಯಶೋದಾ ವಂಟಗೋಡಿ ಶಟಲ್ ಬ್ಯಾಡ್ಮಿಂಟನ್ ಡಬಲ್ಸ್, ಟೆನಿಸ್ ಸಿಂಗಲ್ಸ್ ಹಾಗೂ ಡಬಲ್ಸ್ ಎರಡೂ ವಿಭಾಗದಲ್ಲಿ ಪ್ರಥಮ ಸ್ಥಾನ, 9 ಎಂ.ಎಂ. ಪಿಸ್ತೂಲ್ ಟಾರ್ಗೆಟ್ (ದ್ವಿತೀಯ), 303 ರೈಫಲ್ ಟಾರ್ಗೆಟ್ ಗುರಿ (ತೃತೀಯ) ಸ್ಥಾನ ಪಡೆದರು.
ಲೋಕಾಯುಕ್ತ ಡಿವೈಎಸ್ಪಿ ಸಲೀಂ ಪಾಷಾ, ಡಿವೈಎಸ್ಪಿಗಳಾದ ಶರಣಬಸಪ್ಪ ಸುಬೇದಾರ, ಸಿದ್ದಲಿಂಗಪ್ಪಗೌಡ ಪಾಟೀಲ್, ಮುಖಂಡರಾದ ಚಂದ್ರಶೇಖರ ಪಾಟೀಲ್ ಹಲಗೇರಿ, ಮಹಾಂತೇಶ ಪಾಟೀಲ್ ಮೈನಳ್ಳಿ, ರಾಜಶೇಖರ್ ಆಡೂರು ಇದ್ದರು.