ಕೊಪ್ಪಳ: ಸರ್ಕಾರ ಕೊಟ್ಟ ಮಾತಿನಂತೆ ನಮ್ಮ ಬೇಡಿಕೆ ಈಡೇರಿಸಿಲ್ಲ. ಕೂಡಲೇ ಭರವಸೆ ಈಡೇರಿಸಬೇಕೆಂದು ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಭಾನುವಾರ ಶಾಸಕ ರಾಘವೇಂದ್ರ ಹಿಟ್ನಾಳ್ಗೆ ಮನವಿ ಸಲ್ಲಿಸಿದರು.
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜುಲೈ 10 ರಿಂದ 29 ರವರೆಗೆ ಕರ್ತವ್ಯ ನಿಲ್ಲಿಸಿ ಮುಷ್ಕರ ಹಮ್ಮಿಕೊಳ್ಳಲಾಗಿತ್ತು. ಆರೋಗ್ಯ ಮಂತ್ರಿಗಳು ಎರಡು ದಿನಗಳಲ್ಲಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಅದಾಗಿ 49 ದಿನಗಳಾದರೂ ಯಾವೊಂದು ಬೇಡಿಕೆ ಈಡೇರಿಲ್ಲ. ಹೀಗಾಗಿ ಮತ್ತೊಮ್ಮೆ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗಿದೆ. ಸೆ.22 ಮತ್ತು 23 ರಂದು ರಾಜ್ಯಮಟ್ಟದ ಪ್ರತಿಭಟನೆ ನಡೆಸಲಾಗುವುದು. ಕೊಟ್ಟ ಮಾತಿನಂತೆ ನಮ್ಮ ಮಾಸಿಕ ವೇತನವನ್ನು 12 ಸಾವಿರ ರೂ.ಗೆ ಹೆಚ್ಚಿಸಬೇಕು. ಬಾಕಿ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು. ಕರೊನಾ ಪ್ರೋತ್ಸಾಹಧನ ತಲುಪದ ಕಾರ್ಯಕರ್ತೆಯರಿಗೆ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಜಿಲ್ಲಾಧ್ಯಕ್ಷ ಶರಣು ಗಡ್ಡಿ, ಜಿಲ್ಲಾ ಕಾರ್ಯದರ್ಶಿ ಕೌಶಲ್ಯ ಹಿರೇಗೌಡರ್, ಪದಾಧಿಕಾರಿಗಳಾದ ಗಿರಿಜಮ್ಮ, ಶಾಂತಮ್ಮ, ಶಾರದಾ, ಅನ್ನಪೂರ್ಣ, ಸುನಿತಾ, ಶಬಾನಾ ಇತರರಿದ್ದರು.