ಕೊಪ್ಪಳ: ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸಂಗೀತ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಂತೆ ಒತ್ತಾಯಿಸಿ ಜಿಲ್ಲಾ ಕಲಾವಿದರ ಸಂಘದ ಪದಾಧಿಕಾರಿಗಳು ಬುಧವಾರ ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
2005ರಿಂದ ಪ್ರಾಥಮಿಕ ಶಾಲೆಗೆ ಹಾಗೂ 2009ರಿಂದ ಪ್ರೌಢಶಾಲೆಗೆ ಸಂಗೀತ ಶಿಕ್ಷಕರ ನೇಮಕವಾಗಿಲ್ಲ. ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಜೂನಿಯರ್, ಸೀನಿಯರ್ ಗ್ರೇಡ್ ವಿದ್ವತ್, ಬಿ.ಮ್ಯೂಸಿಕ್, ಎಂ.ಮ್ಯೂಸಿಕ್ ಪದವಿಗಳನ್ನು ಓದಿದರೂ ಕೆಲಸ ಇಲ್ಲದಂತಾಗಿದೆ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಗೀತ ಪದವೀಧರರಿದ್ದೇವೆ. ಶಿಕ್ಷಣ ಇಲಾಖೆಯಿಂದ ಶಿಕ್ಷಕರ ನೇಮಕ ನಡೆದಿದ್ದರೂ ಸಂಗೀತ ಶಿಕ್ಷಕರನ್ನು ಪರಿಗಣಿಸಿಲ್ಲ. ಕೂಡಲೇ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಒತ್ತಾಯಿಸಿದರು.
ಸಂಗೀತ ಕಲಾವಿದರಾದ ನಾಗರಾಜ ಶ್ಯಾವಿ, ಶಕುಂತಲಾ ಬಿನ್ನಾಳ, ಕಳಕಯ್ಯ ಹಿರೇಮಠ, ಸುರೇಶ ಹಡಪದ, ಕುಮಾರೇಶ ದೊಡ್ಡಮನಿ, ವಿಜಯಲಕ್ಷ್ಮೀ, ಚೈತ್ರಾ ತಿಪ್ಪೇಶ ಮತ್ತು ಇತರರಿದ್ದರು.