ಕೊಪ್ಪಳ: ಹೃದಯದ ಆರೋಗ್ಯ ಬಹಳ ಮುಖ್ಯ. ನಾವೆಲ್ಲ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಮುನಿರಾಬಾದ್ ಐಆರ್ಬಿ ಕಮಾಂಡೆಂಟ್ ಮಹಾದೇವ ಪ್ರಸಾದ ಹೇಳಿದರು.
ವಿಶ್ವ ಹೃದಯ ದಿನ ಅಂಗವಾಗಿ ಕೆ.ಎಸ್.ಆಸ್ಪತ್ರೆಯಿಂದ ಶನಿವಾರ ಕೇಂದ್ರ ಬಸ್ ನಿಲ್ದಾಣ ಮುಂಭಾಗದಿಂದ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದಿನ ಅನಾರೋಗ್ಯಕರ ಜೀವನ ಶೈಲಿಯಿಂದ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿವೆ. ನಾವೆಲ್ಲ ಆರೋಗ್ಯ ಜಾಗೃತಿ ಹೊಂದಬೇಕು. ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳಬೇಕು ಎಂದರು.
ಸರ್ಕಾರಿ ಅಭಿಯೋಜಕ ಬಿ.ಎಸ್.ಪಾಟೀಲ್ ಮಾತನಾಡಿ, ಇಂದು ಎಲ್ಲ ವಯೋಮಾನದವರಲ್ಲಿ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಳ್ಳುತ್ತಿವೆ. ಆಹಾರ ಪದ್ಧತಿ ಬದಲಾವಣೆಯಿಂದ ಉತ್ತಮ ಆರೋಗ್ಯ ಹೊಂದಬಹುದು ಎಂದು ತಿಳಿಸಿದರು.
ಕೆ.ಎಸ್.ಆಸ್ಪತ್ರೆ ಮುಖ್ಯಸ್ಥ ಡಾ.ಬಸವರಾಜ ಕ್ಯಾವಟರ್ ಮಾತನಾಡಿ, ನಾವು ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಕಡಿಮೆ. ಆಹಾರ ಪದ್ಧತಿ, ಜೀವನಶೈಲಿ, ಬದುಕುವ ರೀತಿ, ಆಹಾರದ ವಿವಿಧ ಮಜಲುಗಳನ್ನು ತಿಳಿದುಕೊಳ್ಳಬೇಕು. ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆವ ಬದಲು ಮುಂಜಾಗ್ರತೆವಹಿಸುವಂತೆ ಮನವಿ ಮಾಡಿದರು.
ವಿಪ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ಮಾತನಾಡಿದರು. ನಗರಾದ್ಯಂತ ಜಾಥಾ ನಡೆಸಲಾಯಿತು. ಡೆಪ್ಯೂಟಿ ಕಮಾಂಡೆಂಟ್ಗಳಾದ ರೂಪೇಶ, ರಾಧಾಕೃಷ್ಣ, ಹೃದಯ ರೋಗ ತಜ್ಞರಾದ ವಿಶ್ವನಾಥ, ಪೂರ್ಣಿಮಾ ಶೆಟ್ಟಿ, ಜಯರಾಜ ಶೆಟ್ಟಿಗಾರ, ಪ್ರದೀಪ ಸೋಮಲಾಪುರ, ಗಿರೀಶ ಇತರರಿದ್ದರು.