ಕೊಪ್ಪಳ: ತಾಲೂಕಿನ ಇಂದರಗಿ ಗ್ರಾಮದಲ್ಲಿ ಬೆಂಕಿ ಆಕಸ್ಮಿಕದಿಂದ 8 ಎಕರೆ ತೊಗರಿ ಬೆಳೆ ನಾಶವಾಗಿದೆ. ಗುಡ್ಡಕ್ಕೆ ಹೊಂದಿಕೊಂಡು ಗ್ರಾಮದ ಈರಪ್ಪ ಹೊನ್ನುಂಚಿ ಎಂಬುವರ ಹೊಲವಿದೆ.
ತೊಗರಿ ಬೆಳೆ ಕಟಾವು ನಡೆಸಿದ್ದು, 5 ಎಕರೆಯಷ್ಟು ಕಟಾವು ಮಾಡಿ ಗೂಡು ಹಾಕಿದ್ದರು. ಭಾನುವಾರ ತಡರಾತ್ರಿ ಬೆಂಕಿ ಹತ್ತಿಕೊಂಡಿದ್ದು, ಬೆಳೆಯೆಲ್ಲ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಕಳೆದು ಮೂರು ದಿನದಿಂದ ಗುಡ್ಡದಲ್ಲಿ ಕಾಡ್ಗಿಚ್ಚು ಹತ್ತಿಕೊಂಡಿದೆ. ಗುಡ್ಡದ ಪಕ್ಕದಲ್ಲೇ ಹೊಲವಿರುವ ಕಾರಣ,ಅಲ್ಲಿಂದಲೇ ಬೆಂಕಿ ಆವರಿಸಿಕೊಂಡಿದೆ. ಬೆಳೆ ಎಲ್ಲ ಸಂಪೂರ್ಣ ಸುಟ್ಟು ನಾಶವಾಗಿದೆ. ಅಧಿಕಾರಿಗಳು ಸೂಕ್ತ ಪರಿಹಾರ ಕೊಡಿಸಬೇಕು ಎಂದು ರೈತ ಈರಪ್ಪ ಅಳಲು ತೋಡಿಕೊಂಡಿದ್ದಾರೆ.