ಕೊಪ್ಪಳ: ಪ್ರಾಣಿ ಕಲ್ಯಾಣ, ಪ್ರಾಣಿ ಹಿಂಸೆ, ಪ್ರಾಣಿ ವಧೆ ಹಾಗೂ ಪ್ರಾಣಿಗಳ ಸಾಗಣೆಗೆ ಇರುವ ನಿಯಮ ಕಡ್ಡಾಯವಾಗಿ ಎಲ್ಲರೂ ಪಾಲಿಸಬೇಕು. ಸಂಬಂಧಿಸಿದ ಅಧಿಕಾರಿಗಳು ಕಾನೂನನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಡಿಸಿ ಎಸ್.ವಿಕಾಸ್ ಕಿಶೋರ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಪ್ರಾಣಿ ದಯಾ ಸಂಘದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿನ ಖಾಸಗಿ ಗೋಶಾಲೆಗಳಿಗೆ ಸಹಾಯಧನ ಮಂಜೂರಾತಿಗೆ ಸಲ್ಲಿಕೆಯಾದ ಪ್ರಸ್ತಾವನೆ ಪರಿಶೀಲಿಸಿದ್ದು, ಅವುಗಳನ್ನು ಕೇಂದ್ರ ಕಚೇರಿಗೆ ಕಳಿಸಿ. ಕರ್ನಾಟ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆದ್ಯಾದೇಶ-2020 ಕಾಯ್ದೆ ಅನುಷ್ಠಾನದಿಂದ ಬೀದಿ ದನಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಅವುಗಳ ಪೋಷಣೆ ಅಗತ್ಯ ಇರುವ ಗೋಶಾಲೆ ಆರಂಭಿಸಲು ಕ್ರಮ ಕೈಗೊಳ್ಳಬೇಕು. ನೂತನ ಕಾಯ್ದೆ ಅನ್ವಯ ಎಲ್ಲ ವಯಸ್ಸಿನ ಆಕಳು, ಆಕಳ ಕರು, ಗೂಳಿ, ಎತ್ತು ಹಾಗೂ ಹದಿಮೂರು ವರ್ಷದೊಳಗಿನ ಕೋಣ, ಎಮ್ಮೆ ಹತ್ಯೆ ಮಾಡುವಂತಿಲ್ಲ. ರೈತರು ಕೃಷಿ ಉದ್ದೇಶಕ್ಕೆ ಸ್ಥಳೀಯವಾಗಿ 15 ಕಿಲೋಮೀಟರ್ ದೂರದವರೆಗೆ ಪರವಾನಗಿ ಇಲ್ಲದೆ ಎರಡು ಹಸು ಮತ್ತು ಎರಡು ಕರುಗಳನ್ನು ಮಾತ್ರ ಕೊಂಡೊಯ್ಯಬಹುದು. ರಾತ್ರಿ 8 ರಿಂದ ಬೆಳಗ್ಗೆ 6ರವರೆಗೆ ಗೋವುಗಳ ಸಾಗಣೆಗೆ ಅವಕಾಶವಿಲ್ಲ. ಬೇಸಿಗೆ ಕಾಲದಲ್ಲಿ ಮಾರ್ಚ್ನಿಂದ ಮೇವರೆಗೆ ಬೆಳಗ್ಗೆ 11 ರಿಂದ ಮಧ್ಯಾಹ್ನ 3ರ ಅವಧಿಯಲ್ಲೂ ಗೋವುಗಳ ಸಾಗಣೆಗೆ ನಿಷೇಧವಿದೆ.
ಕೃಷಿ ಅಥವಾ ಪಶುಸಂಗೋಪನೆಯ ಉದ್ದೇಶಕ್ಕೆ ಹಸು, ಕರು, ಎತ್ತು, ಎಮ್ಮೆ, ಕೋಣ ಸಾಗಿಸುವಾಗಲೂ ಸಾಗಣೆಯ ಪರವಾನಗಿ ಹೊಂದಿರಬೇಕು. ಇದನ್ನು ಉಲ್ಲಂಸಿದರೆ ಪೊಲೀಸರು, ತಹಸೀಲ್ದಾರ್ ಕ್ರಮಕೈಗೊಳ್ಳಬೇಕು. ಗೋ ಸಾಗಣೆ ವಾಹನಗಳನ್ನು ಜಪ್ತಿ ಮಾಡಬಹುದು.ಅಪರಾಧ ಸಾಬೀತಾದಲ್ಲಿ 3ರಿಂದ 7ವರ್ಷದವರೆಗೆ ಶಿಕ್ಷೆ ವಿಧಿಸಬಹುದು. ಒಂದು ಜಾನುವಾರಿಗೆ 50 ಸಾವಿರ ರೂ.ನಿಂದ 5 ಲಕ್ಷ ರೂ.ವರೆಗೂ ದಂಡ ವಿಧಿಸಬಹುದು. ಲಸಿಕೆ ಸ್ರಾವ, ಸಂಶೋಧನೆ ಉದ್ದೇಶಕ್ಕೆ ಅಥವಾ ಸಾರ್ವಜನಿಕ ಹಿತಾಸಕ್ತಿಯಿಂದ ಹತ್ಯೆ ಅನಿವಾರ್ಯವೆಂದು ಪಶುವೈದ್ಯಾಧಿಕಾರಿ ಪ್ರಮಾಣಿಸಿದಲ್ಲಿ ಹತ್ಯೆಗೆ ಅವಕಾಶವಿದೆ. ಒಂದೊಮ್ಮೆ ರೋಗದಿಂದ ಜಾನುವಾರುಗಳು ಬಳಲುತ್ತಿದ್ದಲ್ಲಿ ಪಶು ವೈದ್ಯಾಧಿಕಾರಿಯಿಂದ ಪ್ರಮಾಣಪತ್ರ ಪಡೆದು ವಧೆ ಮಾಡಲು ಅವಕಾಶವಿದೆ ಎಂದರು.
ಜಿಲ್ಲಾ ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಎಚ್.ನಾಗರಾಜ, ಸಹಾಯಕ ನಿರ್ದೇಶಕ ಡಾ.ಬಸಯ್ಯಸಾಲಿ ಇತರರಿದ್ದರು.