ಕೋಲ್ಕತ: ದೇಶಾದ್ಯಂತ ಪ್ರಸಿದ್ಧವಾಗಿರುವ “ಹಲ್ದಿರಾಮ್ ಭುಜಿಯಾವಾಲಾ” ಸ್ನ್ಯಾಕ್ಸ್ ಸಂಸ್ಥೆಯ ಮಾಲೀಕ ಮಹೇಶ್ ಅಗರ್ವಾಲ್ ಅವರು ಶುಕ್ರವಾರ ತಡರಾತ್ರಿ ಸಿಂಗಾಪುರ್ನಲ್ಲಿ ಕೊನೆಯುಸಿರೆಳೆದಿದ್ದಾರೆ.
ಅಗರ್ವಾಲ್, ಗಂಭೀರವಾದ ಲಿವರ್ ಕಾಯಿಲೆಯಿಂದ ಬಳಲುತ್ತಿದ್ದರು. ಕಳೆದ ಮೂರು ತಿಂಗಳಿಂದ ಸಿಂಗಾಪುರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ 57ನೇ ವಸಂತಕ್ಕೆ ಕಾಲಿಡುವಷ್ಟರಲ್ಲಿ ಇಹಲೋಕವನ್ನೇ ತ್ಯಜಿಸಿದ್ದಾರೆ.
ಕರೊನಾ ವೈರಸ್ನಿಂದ ಸದ್ಯ ಜಾಗತಿಕವಾಗಿ ಎದುರಾಗಿರುವ ಸಂಕಷ್ಟದ ಸಮಯದಲ್ಲಿ ಅಗರ್ವಾಲ್ ಪಾರ್ಥೀವ ಶರೀರವನ್ನು ತವರಿಗೆ ತರಲಾಗದೆ ಅವರ ಕುಟುಂಬ ಸಿಂಗಾಪುರ್ನಲ್ಲಿ ಅಂತ್ಯಕ್ರಿಯೆ ನೆರವೇರಿಸಿದೆ. ಸಿಂಗಾಪುರ್ನಲ್ಲಿ ಹಿಂದು ವಿಧಿ-ವಿಧಾನಗಳು ಅನುಸರಿಸದೇ ಇರುವುದರಿಂದ ಆ ದೇಶದ ನಿಯಮಾನುಸಾರವೇ ಅಂತ್ಯಕ್ರಿಯೆ ನಡೆದಿದೆ.
ಅಗರ್ವಾಲ್, ಪತ್ನಿ ಮೀನಾ ಮತ್ತು ಮಗಳು ಅವನಿ ತವರಿಗೆ ಮರಳಲು ಯತ್ನಿಸಿದರೂ ಸದ್ಯದ ಸ್ಥಿತಿಯಲ್ಲಿ ಅದು ಸಾಧ್ಯವಾಗಿಲ್ಲ. ಇದನ್ನರಿತು ಭಾರತೀಯ ರಾಯಭಾರಿ ಕಚೇರಿಯನ್ನು ತಲುಪಲು ಯತ್ನಿಸಿದರೂ ಕೂಡ ಮಂಗಳವಾರದಿಂದ ಜಾರಿಯಲ್ಲಿರುವ ಲಾಕ್ಡೌನ್ನಿಂದಾಗಿ ತುಂಬಾ ಸಮಸ್ಯೆ ಎದುರಿಸುವಂತಾಗಿದೆ.
ನಮ್ಮ ತಂದೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ, ನಮ್ಮ ಬಿಸಿನೆಸ್ ಕೋಲ್ಕತದಲ್ಲೇ ದಿಢೀರ್ ಬೆಳವಣಿಗೆಯಿಂದ ಅನಾಥವಾಗಿ ಉಳಿದಿದೆ. ನಾವು ಅದನ್ನು ಉಳಿಸಿಕೊಳ್ಳಲು ತವರಿಗೆ ಮರಳಲೇ ಬೇಕಿದೆ ಎಂದು ಸಿಂಗಾಪುರ್ನಿಂದಲೇ ಅವನಿ ಅಳಲು ತೋಡಿಕೊಂಡಿದ್ದಾರೆ.
ಅಗರ್ವಾಲ್ಗೆ ಓರ್ವ ಮಗ ಮತ್ತು ಮೂವರು ಹೆಣ್ಣು ಮಕ್ಕಳಿದ್ದಾರೆ. ಹಿರಿಯ ಮಗ ಪ್ರತೀಕ್ ಸದ್ಯ ಕೋಲ್ಕತದಲ್ಲಿದ್ದಾರೆ. ಹಿರಿಯ ಮಗಳು ಅಂಚಲ ವಿಜ್ಞಾನಿಯಾಗಿದ್ದು, ಸ್ಯಾನ್ಫ್ರಾನ್ಸಿಸ್ಕೋದ ಸ್ಯಾನ್ಡಿಸ್ಕ್ ಜತೆ ಕೆಲಸ ಮಾಡುತ್ತಿದ್ದಾರೆ. ಕಿರಿಯ ಮಗಳು ಅಂತರ ಡುರ್ಹಾಮ್ ವಿಶ್ವವಿದ್ಯಾಲಯದಲ್ಲಿ ಗಣಿತ ಮತ್ತು ಕಂಪ್ಯೂಟರ್ ವಿಜ್ಞಾನ ಅಧ್ಯಯನ ಮಾಡುತ್ತಿದ್ದಾರೆ.
ಲಿವರ್ ಕಾಯಿಲೆಯಿಂದ ಬಳಲುತ್ತಿದ್ದ ಅಗರ್ವಾಲ್ ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನೆಲೆಯಲ್ಲಿ ಜನವರಿಯಲ್ಲಿ ಸಿಂಗಾಪುರ್ಗೆ ಕರೆದೊಯ್ಯಲಾಯಿತು. ಕುಟುಂಬವು ಲಿವರ್ ಕಸಿಯ ಭರವಸೆಯನ್ನು ಹೊಂದಿದ್ದರು. ಸರ್ಜರಿ ಯಶಸ್ವಿಯು ಆಗಿತ್ತು. ಆದರೆ, ಅಗರ್ವಾಲ್ ಅವರನ್ನು ಐಸಿಯುಗೆ ಸ್ಥಳಾಂತರಿಸಿದ ಬಳಿಕ ಸೋಂಕೊಂದು ಬೆಳವಣಿಗೆಯಾಗಲು ಆರಂಭಿಸಿತು. ಈ ಸೋಂಕು ಕ್ಯಾಂಡಿಡಾ ಆರಿಸ್ನಿಂದ ಉತ್ಪತಿಯಾಗುತ್ತದೆ. ಇದರಿಂದಾಗಿಯೇ ಅಗರ್ವಾಲ್ ಮರಣ ಹೊಂದಿದರು ಎಂದು ತಿಳಿದುಬಂದಿದೆ. (ಏಜೆನ್ಸೀಸ್)
ಕೂಲ್ ಕ್ಯಾಪ್ಟನ್ ಧೋನಿಗೆ ಈ ದಿನ ತುಂಬಾ ವಿಶೇಷವೇಕೆ ಗೊತ್ತಾ? ಪಾಕ್ ವಿರುದ್ಧವೇ ಮೈಲುಗಲ್ಲು ಸ್ಥಾಪಿಸಿದ ದಿನವಿದು!
ಕರೊನಾ ವೈರಸ್ ಗಾಳಿಯಿಂದ ಹರಡುವುದಕ್ಕೆ ಆಧಾರಗಳಿಲ್ಲ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸ್ಪಷ್ಟನೆ