ಕೊಲ್ಹಾರ: ರಾಜ್ಯದಲ್ಲಿ ಪಕ್ಷದ ತತ್ವ, ಸಿದ್ಧಾಂತ ಒಪ್ಪಿಕೊಂಡು ಬರುವ ನಾಯಕರನ್ನು ಸ್ವಾಗತಿಸಲಾಗುವುದು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಹೇಳಿದರು.
ಸ್ಥಳೀಯ ದಿಗಂಬರೇಶ್ವರ ಮಠಕ್ಕೆ ಶನಿವಾರ ಭೇಟಿ ನೀಡಿ ಮಠಾಧೀಶ ಶ್ರೀ ಕಲ್ಲಿನಾಥ ದೇವರನ್ನು ಸನ್ಮಾನಿಸಿ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಸ್ವಯಂ ಘೋಷಿತ ಮುಖ್ಯಮಂತ್ರಿ ಎಂದು ಯಾರೂ ಹೇಳಿಕೆ ನೀಡಿಲ್ಲ. ಅದನ್ನು ಅಭಿಮಾನಿಗಳು, ಕಾರ್ಯಕರ್ತರು ಮಾತ್ರ ಹೇಳಿದ್ದಾರೆ. ನಮ್ಮ ಪಕ್ಷದಲ್ಲಿ ಚುನಾವಣೆ ಮುಂಚೆ ಹಾಗೂ ಚುನಾವಣೆ ನಂತರವೂ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡುವುದಿಲ್ಲ. ಬಹುಮತ ಪಡೆದ ನಂತರ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ನಿರ್ಣಯ ಕೈಗೊಳ್ಳಲಾಗುತ್ತದೆ. ಪಕ್ಷದ ಎಲ್ಲ ನಾಯಕರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ ಎಂದರು.
ರಾಜಕಾರಣದಲ್ಲಿ ಧರ್ಮ ಇರಬೇಕು ಹೊರತು, ಧರ್ಮದಲ್ಲಿ ರಾಜಕೀಯ ಬೆರೆಯಬಾರದು. ಮಹಾತ್ಮರ, ಸಂತರ, ಶರಣರ ದರುಶನ ಭಾಗ್ಯದಿಂದ ನಮ್ಮ ಪಕ್ಷಕ್ಕೆ ಮತ್ತು ನಾಡಿನ ಜನತೆಗೆ ಒಳ್ಳೆಯದು ಆಗಲೆಂದು ನಮ್ಮ ನಾಯಕರು ಮಠಗಳಿಗೆ ಭೇಟಿ ಕೊಡುತ್ತಿದ್ದೇವೆ ಎಂದರು.
ಶ್ರೀ ಕಲ್ಲಿನಾಥ ದೇವರು ಮಾತನಾಡಿ, ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿ ಎಸ್.ಆರ್.ಪಾಟೀಲರು ಹೊರಹೊಮ್ಮಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಲಿ ಎಂದು ಶ್ರೀಗಳು ಹಾರೈಸಿದರು.
ಜಿಪಂ ಮಾಜಿ ಸದಸ್ಯ ಕಲ್ಲು ದೇಸಾಯಿ, ಉಸ್ಮಾನಸಾಬ್ ಪಟೇಲ್, ಮಲ್ಲಿಕಾರ್ಜುನ ಗರಸಂಗಿ, ಯಮನಪ್ಪ ಬಾಟಿ, ಕಲ್ಲಪ್ಪ ಕಾಖಂಡಕಿ ಇತರರಿದ್ದರು. 2200 ರುದ್ರಾಕ್ಷಿಗಳಿಂದ ತಯಾರಿಸಿದ ಮಾಲೆಯನ್ನು ಶ್ರೀಗಳಿಗೆ ಹಾಕಿ ಎಸ್.ಆರ್. ಪಾಟೀಲ ಸನ್ಮಾನಿಸಿದರು.