ಬೂದಿಕೋಟೆ: ನಿವಾರ್ ಹಾಗೂ ಬುರೇವಿ ಚಂಡಮಾರುತದಿಂದ ಸುರಿಯುತ್ತಿರುವ ಮಳೆಗೆ ಜಮೀನಿನಲ್ಲಿರುವ ಮೇವು ಕೊಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಮೇವಿನ ಅಭಾವ ಉಂಟಾಗುವ ಸಾಧ್ಯತೆ ಇದೆ.
ಕೋಲಾರ ಜಿಲ್ಲೆಯಲ್ಲಿ ಉತ್ತಮ ಮಳೆಯಿಂದ ಬಂಗಾರಪೇಟೆ ತಾಲೂಕಿನಲ್ಲಿ 16,437 ಹೆಕ್ಟೇರ್ನಲ್ಲಿ ರಾಗಿ ಬೆಳೆ ಚೆನ್ನಾಗಿ ಬಂದಿದ್ದು, ಗರಿಷ್ಠ ಪ್ರಮಾಣದಲ್ಲಿ ರೈತರು ತೆನೆ ಕಟಾವು ಮಾಡಿ ಒಕ್ಕಣೆ ಮಾಡಿಕೊಂಡಿದ್ದಾರೆ. ಆದರೆ ನೆಲಕ್ಕೆ ಉರುಳಿರುವ ನೂರಾರು ಎಕರೆ ರಾಗಿ ತಾಳನ್ನು ಕೂಲಿ ಕಾರ್ಮಿಕರ ಸಮಸ್ಯೆಯಿಂದ ಕಟಾವು ಮಾಡದೆ ಜಮೀನಿನಲ್ಲೇ ಬಿಟ್ಟಿದ್ದು, ಇದೀಗ ತೇವಾಂಶ ಜಾಸ್ತಿಯಾಗಿ ರಾಗಿ ತಾಳು ಕೊಳೆಯಲಾರಂಭಿಸಿದೆ.
ಮೇವಿಗೆ ಗೆದ್ದಲ ಕಾಟ: ಕಟಾವು ಮಾಡಿ ಜಮೀನಿನಲ್ಲಿ ಸಣ್ಣದಾಗಿ ಮೆದೆ ರೂಪದಲ್ಲಿ ಕೂಡಿಟ್ಟಿದ್ದ ರಾಗಿ ತೇವಾಂಶ ಹೆಚ್ಚಾಗಿ ಗೆದ್ದಲು ಹಿಡಿದಿದೆ. ಜಾನುವಾರುಗಳಿಗೆ ಮೇವಾಗಬೇಕಿದ್ದ ರಾಗಿ ತಾಳು ಸೇರಿ ಹಲವು ಮೇವಿನ ಬೆಳೆಗಳು ಹಾಳಾಗುತ್ತಿರುವ ಕಾರಣ ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಮೇವಿನ ಅಭಾವ ಎದುರಾಗುವ ಸಾಧ್ಯತೆ ಇದೆ.
ಕಳೆದ ವರ್ಷ ಜಾನುವಾರುಗಳಿಗೆ ಮೇವಿನ ಬರ ಉಂಟಾಗಿ, ರೈತರು ತಮಿಳುನಾಡಿನಿಂದ ಒಣ ಮೇವು ಖರೀದಿಸಿದ್ದರು. ಈ ಬಾರಿ ಉತ್ತಮ ಬೆಳೆಯಿಂದ ಮೇವಿನ ಅಭಾವವಿರುವುದಿಲ್ಲ ಎಂಬ ನಿರೀಕ್ಷೆೆಯಲ್ಲಿದ್ದ ರೈತರಿಗೆ ಚಂಡಮಾರುತ ದೊಡ್ಡ ಹೊಡೆತ ಕೊಟ್ಟಿದೆ.
ಮೂರು ಎಕರೆಯಲ್ಲಿ ರಾಗಿ ಬೆಳೆಯಲಾಗಿದ್ದು, ಬೆಳೆ ನೆಲಕಚ್ಚಿತ್ತು. ತೆನೆ ಕಟಾವು ಮಾಡಿದ್ದು, ಮಳೆ ಹಾಗೂ ಕೂಲಿ ಕಾರ್ಮಿಕರ ಸಮಸ್ಯೆಯಿಂದ ಜಮೀನಿನಲ್ಲೇ ಬಿಡಲಾಗಿದೆ. ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ತಾಳು ಕೊಳೆಯುತ್ತಿದ್ದು, ದನ-ಕರುಗಳಿಗೆ ಮೇವು ಇಲ್ಲದಂತಾಗಿದೆ.
ಹರೀಶ್, ರೈತ, ಜ್ಯೋತೇನಹಳ್ಳಿ