ಕೊಚ್ಚಿ: ಕೊಚ್ಚಿಯಿಂದ ದುಬೈಗೆ ತೆರಳುವ ವಿಮಾನ ಪ್ರಯಾಣಿಕರಲ್ಲಿ ಓರ್ಕವನಿಗೆ ಕರೊನಾ ವೈರಸ್ ಸೋಂಕು ಪತ್ತೆಯಾಗಿದೆ ಎಂದು ವರದಿಯಾಗಿದೆ.
ಪ್ರಯಾಣಿಕನಲ್ಲಿ ವೈರಸ್ ಸೋಂಕು ಪತ್ತೆಯಾಗುತ್ತಲೇ ದುಬೈಗೆ ತೆರಳುತ್ತಿದ್ದ 289 ಮಂದಿಯನ್ನು ವಿಮಾನ ಟೇಕ್ ಆಫ್ ಆಗುವ ಮೊದಲೇ ಸ್ಥಳಾಂತರಿಸಲಾಗಿದೆ. ಎಲ್ಲ 289 ಮಂದಿಯನ್ನು ಪ್ರತ್ಯೇಕ ಕೊಠಡಿಯಲ್ಲಿ ಇಟ್ಟು ನಿಗಾ ವಹಿಸಲಾಗಿದೆ ಎಂದು ಕೇರಳ ಸರ್ಕಾರ ತಿಳಿಸಿದೆ.
ಇಂಗ್ಲೆಂಡ್ನ ಓರ್ವ ಪ್ರಜೆಯಲ್ಲಿ ಕರೊನಾ ವೈರಸ್ ಸೋಂಕು ಪತ್ತೆಯಾಗಿದ್ದು ದುಬೈಗೆ ತೆರಳುತ್ತಿದ್ದ ಪ್ರಯಾಣಿಕರೊಂದಿಗೆ ಸೇರಿಕೊಂಡ ಹಿನ್ನೆಲೆಯಲ್ಲಿ ಎಲ್ಲರನ್ನು ಪರೀಕ್ಷೆ ಒಳಪಡಿಸಲು ಕೇರಳ ಸರ್ಕಾರ ಮುಂದಾಗಿದೆ.
ಈತ ಮುನಾರ್ನಲ್ಲಿ ರಜೆ ದಿನ ಕಳೆಯಲು ಆಗಮಿಸಿದ್ದ. 19 ದಿನಗಳಿಂದ ಮುನಾರ್ನಲ್ಲಿ ಇದ್ದ. ಈತನಿಗೆ ವೈರಸ್ ಸೋಂಕು ಹರಡಿತ್ತು. ಈತ ಮುನಾರ್ನಲ್ಲಿ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡದೆ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಪ್ರಯಾಣಿಕರೊಂದಿಗೆ ಸೇರಿಕೊಂಡಿದ್ದ ಎಂದು ತಿಳಿದು ಬಂದಿದೆ.
ಕೇರಳದ ಪ್ರಸಿದ್ಧ ಯಾತ್ರ ಕ್ಷೇತ್ರಗಳಾದ ಗುರುವಾಯೂರು ಹಾಗೂ ಶಬರಿಮಲೆಗೆ ಆಗಮಿಸುವ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಎರಡು ಕ್ಷೇತ್ರಗಳಲ್ಲಿ ಧಾರ್ಮಿಕ ಚಟುವಟಿಕೆಗಳು ಕಡಿಮೆಯಾಗಿವೆ.
ಕೇರಳ ಸರ್ಕಾರ ಚಿತ್ರಮಂದಿರ, ಮಾಲ್ಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಿದೆ. ಚಲನ ಚಿತ್ರಗಳ ಶೂಟಿಂಗ್ ಕೂಡ ರದ್ದಾಗಿದೆ. ಪ್ರವಾಸಿ ತಾಣಗಳಲ್ಲಿರುವ ರೆಸಾರ್ಟ್, ಹೋಟೆಲ್ಗಳನ್ನು ಮುಚ್ಚಲಾಗಿದೆ.
ಕೇಂದ್ರ ಆರೋಗ್ಯ ರಾಜ್ಯ ಸಚಿವ ಅಶ್ವಿನಿ ಚೌಬೆ ಮಾತನಾಡಿ, ಕರೊನಾ ವೈರಸ್ ಸೋಂಕು ತಗುಲಿರುವವರಿಗೆ ಪ್ರತ್ಯೇಕ ಆಸ್ಪತ್ರೆ ತೆರೆಯಲು ಸರ್ಕಾರ ಸಜ್ಜಾಗಿದೆ ಎಂದು ಅವರು ಹೇಳಿದರು. (ಏಜೆನ್ಸೀಸ್)