ಕೊಡೇಕಲ್: ತಾಯಂದಿರಿಗೆ ಮತ್ತು ಪಾಲಕರಿಗೆ ಆರೋಗ್ಯ ಜಾಗೃತಿ ಮೂಡಿಸುವುದರಿಂದ ಮಾತ್ರ ಅತಿಸಾರಭೇದಿ ನಿಯಂತ್ರಿಸಲು ಸಾಧ್ಯ ಎಂದು ಸಮುದಾಯ ಆರೋಗ್ಯ ಕೇಂದ್ರದ ಆಯುಷ್ಯ ವೈದ್ಯೆ ಡಾ.ಸೀಮಾ ಕೋರಿ ಹೇಳಿದರು.
ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ, ಮಕ್ಕಳ ಮತ್ತು ಮಹಿಳಾ ಕಲ್ಯಾಣ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡ ರಾಷ್ಟ್ರೀಯ ಆರೋಗ್ಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ತಾಯಿ ಮತ್ತು ಮಕ್ಕಳ ಆರೋಗ್ಯಕ್ಕಾಗಿ ಅನೇಕ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ತೀವ್ರತರ ಅತಿಸಾರಭೇದಿಯಿಂದ ದೇಶದಲ್ಲಿ ಅನೇಕ ಮರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಹೀಗಾಗಿ ಇದನ್ನು ನಿರ್ಲಕ್ಷ್ಯವಹಿಸುವಂತಿಲ್ಲ. ಈ ಹಿನ್ನೆಲೆಯಲ್ಲಿ ಆಶಾ ಕರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಮಕ್ಕಳಿಗೆ ಒಆರ್ಎಸ್ ದ್ರಾವಣ ಮತ್ತು ಜಿಂಕ್ ಮಾತ್ರೆ ನೀಡಬೇಕು. ಅಲ್ಲದೆ ತಾಯಂದಿರಿಗೆ ಒಆರ್ಎಸ್ ದ್ರಾವಣ ತಯಾರಿಸುವುದರ ಬಗ್ಗೆ ಪ್ರಾತ್ಯಕ್ಷಿಕೆಯ ಮಾಹಿತಿ ನೀಡಲಿದ್ದಾರೆ ಎಂದು ಹೇಳಿದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಚನ್ನಬಸ್ಸು ನಾಲತವಾಡ ಮಾತನಾಡಿದರು. ಹಿರಿಯ ಪ್ರಾಥಮಿಕ ಸುರಕ್ಷತಾ ಅಧಿಕಾರಿ ಗಂಗಮ್ಮ ಪಾಟೀಲ್, ಕೊಡೇಕಲ್ ವಲಯ ಅಂಗನವಾಡಿ ಮೇಲ್ವಿಚಾರಕಿ ಪಾರ್ವತಿ ಕಡಿ, ಬಸವರಾಜೇಶ್ವರಿ, ಶರಣು ಬಾದ್ಯಾಪುರ, ಅಂಗನವಾಡಿ ಕಾರ್ಯಕರ್ತೆಯರಾದ ಸುಭದ್ರಾ ಕುಲಕರ್ಣಿ, ಜಯಶ್ರೀ ಮನ್ಯಾಳ, ಶರಣಮ್ಮ ಹಿರೇಮಠ, ಗದ್ದೆಮ್ಮ, ಸಂಗೀತಾ, ರೇಣುಕಾ, ಆಶಾ ಕಾರ್ಯಕರ್ತೆಯರಾದ ನೀಲಮ್ಮ, ದೇವಮ್ಮ, ಸುಮಿತ್ರಾ, ಚಿನ್ನಮ್ಮ, ರೇಣುಕಾ, ಮೀನಾಕ್ಷಿ , ಸುರ್ವಣ ಇತರರಿದ್ದರು. ನಂತರ ಆರೋಗ್ಯ ಜಾಗೃತಿ ಮೂಡಿಸುವ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು.