ಚಿತ್ರದುರ್ಗ: ನಿತ್ಯ ಕನಿಷ್ಠ ಎರಡು ಗಂಟೆಯಾದರೂ ಓದುವ ಹವ್ಯಾಸ ಬೆಳಸಿಕೊಳ್ಳಬೇಕು. ಉತ್ತಮ ಆರೋಗ್ಯಕ್ಕಾಗಿ ಯಾವುದಾದರೂ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಎಸ್ಜೆಎಂ ವಿದ್ಯಾಪೀಠದ ಆಡಳಿತಾಧಿಕಾರಿ ಪಿ.ಎಸ್.ವಸ್ತ್ರದ್ ಸಲಹೆ ನೀಡಿದರು.
ಮುರುಘಾಮಠದ ಅನುಭವ ಮಂಟಪದಲ್ಲಿ ಎಸ್ಜೆಎಂ ತಾಂತ್ರಿಕ ಮಹಾವಿದ್ಯಾಲಯದ 2017-18ರಿಂದ 2020-21ನೇ ಸಾಲಿನ ವಿದ್ಯಾರ್ಥಿಗಳಿಗಾಗಿ ಶನಿವಾರ ಹಮ್ಮಿಕೊಂಡಿದ್ದ ಗ್ರಾಜ್ಯುಯೇಟ್ ಮೀಟ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜೀವನ ಅತ್ಯಂತ ಚಿಕ್ಕದಾಗಿದ್ದು, ಪ್ರತಿಕ್ಷಣವು ಅಮೂಲ್ಯ. ಕಲಿಕೆ ಎಂದಿಗೂ ನಿಲ್ಲುವುದಿಲ್ಲ. ವಿಜ್ಞಾನಿಯೊಡನೆ 10 ನಿಮಿಷ ಕಳೆದರೆ ಅಜ್ಞಾನ ಅಳಿಯಲಿದೆ. ಶಿಕ್ಷಕರಿಂದ ಹೊಸತನ್ನು, ವ್ಯಾಪಾರಿಯಿಂದ ವ್ಯವಹಾರವನ್ನು, ಸ್ನೇಹಿತರಿಂದ ಆನಂದ ಹೀಗೆ ಪ್ರತಿಯೊಬ್ಬರಿಂದ ಒಂದಿಲ್ಲೊಂದು ಅನುಭವ ಪಡೆಯಬಹುದು ಎಂದರು.
ಬದುಕಿನುದ್ದಕ್ಕೂ ಸಂತೋಷದಿಂದ ಇರಲು ಯತ್ನಿಸಬೇಕು. ಯುವ ಮತದಾರರು ಚುನಾವಣೆಗಳಲ್ಲಿ ತಪ್ಪದೆ ಉತ್ತಮರಿಗೆ ಮತ ಚಲಾಯಿಸಿ, ಪ್ರಜಾಪ್ರಭುತ್ವ ಉಳಿವಿಗೆ ಹಾಗೂ ಸದೃಢ ಸರ್ಕಾರ ರಚನೆಗೆ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಶ್ರಮ ಟೆಕ್ನಾಲಜೀಸ್ ಕಾರ್ಯನಿರ್ವಾಹಣಾಧಿಕಾರಿ ಅಮರ್ಜೀತ್ ಕುಮಾರ್ ಮಾತನಾಡಿ, ಯುವಸಮೂಹ ತಮ್ಮೊಳಗಿನ ಸಾಮರ್ಥ್ಯ ಗುರುತಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ಪ್ರಾಮಾಣಿಕತೆ, ಕರ್ತವ್ಯ ಪ್ರಜ್ಞೆ, ಉತ್ತಮ ಕೆಲಸ ಉನ್ನತಮಟ್ಟಕ್ಕೆ ಕೊಂಡೊಯ್ಯುತ್ತದೆ. ಆದ್ದರಿಂದ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನಕ್ಕೆ ಅನುಗುಣವಾಗಿ ಕೌಶಲ ರೂಢಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಕಾರ್ಯದರ್ಶಿ ಕೆ.ವಿ.ಪ್ರಭಾಕರ್, ಆಡಳಿತ ಮಂಡಳಿ ಸದಸ್ಯ ಬಸವರಾಜ್ ಪಾಟೀಲ್, ಪ್ರಾಂಶುಪಾಲ ಡಾ.ಪಿ.ಬಿ.ಭರತ್, ವಿವಿಧ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಜಿ.ಕುಮಾರಸ್ವಾಮಿ, ಡಾ.ಎನ್.ಜಗನ್ನಾಥ, ಪ್ರೊ.ಪೋರಾಳ್ ನಾಗರಾಜ್, ಡಾ.ಕೆ.ಬಿ.ಸಿದ್ದೇಶ್, ಡಾ.ಜೆ.ಎಂ.ಶ್ರೀಶೈಲ, ಡಾ.ಎಚ್.ಜೆ. ಲೋಕೇಶ್, ಕಾರ್ಯಕ್ರಮ ಸಂಚಾಲಕ ಪ್ರೊ.ಟಿ.ಬಿ.ಲವಕುಮಾರ್ ಇತರರಿದ್ದರು.
ವಿಜೇತರಿಗೆ ಬಹುಮಾನ
ಸ್ಪೂರ್ತಿ-2023 ಉತ್ಸವದ ಸೋಲೋ ವಿಭಾಗದಲ್ಲಿ ಎಸ್.ಆರ್.ಹರ್ಷಿತಾ, ಆರ್.ಪ್ರಜ್ಞಾ, ಗ್ರೂಪ್ ಡಾನ್ಸ್ ಸ್ಪರ್ಧೆಯಲ್ಲಿ ಶಶಾಂಕ್ ಮತ್ತು ತಂಡ, ಎಸ್.ಆರ್.ಹರ್ಷಿತಾ ಮತ್ತು ತಂಡ ಕ್ರಮವಾಗಿ ಪ್ರಥಮ, ದ್ವಿತೀಯ ಬಹುಮಾನ ಪಡೆದುಕೊಂಡರು. ತೀರ್ಪುಗಾರ ಎಸ್.ದಯಾನಂದ್ ಇದ್ದರು.