ಕೃಷ್ಣ ಕುಲಕರ್ಣಿ ಕಲಬುರಗಿ
ಈ ಭಾಗದ ಸಮಗ್ರ ಅಭಿವೃದ್ಧಿಗಾಗಿ ಅಸ್ತಿತ್ವಕ್ಕೆ ಬಂದಿರುವ ಕಲ್ಯಾಣ (ಮೊದಲು ಹೈದರಾಬಾದ್) ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್ಡಿಬಿ) ಅಧ್ಯಕ್ಷ ಗಾದಿಗೆ ಶಾಪವೊಂದು ಸುತ್ತಿಕೊಂಡಿದ್ದು, 2023ರ ವಿಧಾನಸಭೆ ಚುನಾವಣೆಯಲ್ಲೂ ಮರುಕಳಿಸಿದೆ.
2013ರಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸ್ಥಾಪಿಸಲಾಯಿತು. ಕಾಂಗ್ರೆಸ್ ಸರ್ಕಾರದಲ್ಲಿ ಖಮರುಲ್ ಇಸ್ಲಾಂ ಮೊದಲ ಅಧ್ಯಕ್ಷರಾಗಿದ್ದರು. ಬಳಿಕ ಅವರು ಯಾವುದೇ ಚುನಾವಣೆ ಎದುರಿಸದೆ 2017ರಲ್ಲಿ ನಿಧನ ಹೊಂದಿದರು. ಇವರ ನಂತರ 2016ರಲ್ಲಿ ಸೇಡಂ ಶಾಸಕ ಡಾ.ಶರಣಪ್ರಕಾಶ ಪಾಟೀಲ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಮೂರು ವರ್ಷ ಅಧಿಕಾರ ನಡೆಸಿದ ಅವರು, 2018ರ ಚುನಾವಣೆಯಲ್ಲಿ ಸೇಡಂ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ರಾಜಕುಮಾರ ಪಾಟೀಲ್ ತೆಲ್ಕೂರ ಎದುರು 7200 ಅಂತರದಿಂದ ಸೋಲನುಭವಿಸಿದರು.
2018ರ ಮಾರ್ಚನಲ್ಲಿ ಕೊಪ್ಪಳ ಜಿಲ್ಲೆ ಯಲಬುರ್ಗಾ ಕ್ಷೇತ್ರದ ಶಾಸಕರಾಗಿದ್ದ ಬಸವರಾಜ ರಾಯರೆಡ್ಡಿ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಲಾಯಿತು. ಏಳು ತಿಂಗಳು ಅಧಿಕಾರ ನಡೆಸಿದ ಬಳಿಕ ಎದುರಾದ ಚುನಾವಣೆಯಲ್ಲಿ ಯಲಬುರ್ಗಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ ಎದುರು 13,318 ಮತಗಳ ಅಂತರದಿಂದ ಸೋಲನುಭವಿಸಿದರು. 2018ರ ಅಕ್ಟೋಬರ್ನಲ್ಲಿ ಹುಮನಾಬಾದ್ ಶಾಸಕ ರಾಜಕುಮಾರ ಪಾಟೀಲ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಒಂದು ವರ್ಷ ಆಡಳಿತ ನಡೆಸಿದರಾದರೂ ಸಮ್ಮಿಶ್ರ ಸರ್ಕಾರ ಪತನ ಕಂಡಿದ್ದರಿಂದ ಅಧ್ಯಕ್ಷಗಿರಿ ಕಳೆದುಕೊಂಡರು. ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿಯ ಡಾ.ಸಿದ್ದು ಪಾಟೀಲ್ ಎದುರು 1594 ವೋಟ್ಗಳ ಅಂತರದಿಂದ ಸೋಲನುಭವಿಸಿದ್ದಾರೆ.
2020ರ ಜುಲೈನಲ್ಲಿ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅವರನ್ನು ಕೆಕೆಆರ್ಡಿಬಿ ಚೇರ್ಮನ್ ಆಗಿ ನೇಮಕ ಮಾಡಲಾಯಿತು. ಮೂರು ವರ್ಷ ಅಧಿಕಾರ ನಡೆಸಿದ ಬಳಿಕ ಎದುರಾದ ಈ ಚುನಾವಣೆಯಲ್ಲಿ ಕಾಂಗ್ರೆಸ್ನ ಅಲ್ಲಮಪ್ರಭು ಪಾಟೀಲ್ ಎದುರು 21,048 ಮತಗಳ ಅಂತರದಿಂದ ಸೋಲುಂಡಿದ್ದಾರೆ.
ಮಂಡಳಿಗೆ ಇದುವರೆಗೆ ಐವರು ಅಧ್ಯಕ್ಷರಾಗಿ ಅಧಿಕಾರ ನಡೆಸಿದ್ದಾರೆ. ಖಮರುಲ್ ಇಸ್ಲಾಂ ಎಲೆಕ್ಷನ್ಗೂ ಮುನ್ನವೇ ಮೃತಪಟ್ಟರೆ, ಇನ್ನುಳಿದ ನಾಲ್ವರು ಚೇರ್ಮನ್ ಹುದ್ದೆಗೇರಿದ ಬಳಿಕ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ಸೋಲನುಭವಿಸಿದ್ದಾರೆ. ಇದು ಕೆಕೆಆರ್ಡಿಬಿ ಅಧ್ಯಕ್ಷ ಗಾದಿಗೇರಿದವರಿಗೆ ನೆಕ್ಸ್ಟ್ ಎಲೆಕ್ಷನ್ನಲ್ಲಿ ಸೋಲು ಕಟ್ಟಿಟ್ಟ ಬುತ್ತಿ ಎಂಬ ಸಂದೇಶ ರವಾನಿಸಿದೆ