ಕೊಚ್ಚಿ: ತನ್ನ ಮಕ್ಕಳ ಕೈಯಲ್ಲಿ ಅರೆಬೆತ್ತಲೆ ದೇಹದ ಮೇಲೆ ಡ್ರಾಯಿಂಗ್ ಮಾಡಿಸಿಕೊಳ್ಳುವ ಮೂಲಕ ವಿವಾದಕ್ಕೀಡಾಗಿರುವ ಹೋರಾಟಗಾರ್ತಿ ರೆಹನಾ ಫಾತಿಮಾಗೆ ಮತ್ತೊಮ್ಮೆ ಶಾಕ್ ಎದುರಾಗಿದೆ. ತಾನೂ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾ ಮಾಡಿದ ಬೆನ್ನಲ್ಲೇ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ಫಾತಿಮಾಗೆ ಕೇರಳ ಸರ್ಕಾರ ಅಡ್ಡಗಾಲಾಗಿದೆ. ಜಾಮೀನು ನೀಡದಂತೆ ಸರ್ಕಾರ ಅರ್ಜಿ ಸಲ್ಲಿಸಿದೆ.
ಸುಪ್ರೀಂಕೋರ್ಟ್ ಮುಂದಿನ ವಾರ ರೆಹನಾ ಅರ್ಜಿಯನ್ನು ಕೈಗೆತ್ತಿಕೊಳ್ಳಲಿದೆ. ಹೀಗಾಗಿ ನಿರೀಕ್ಷಣಾ ಜಾಮೀನು ನೀಡದಂತೆ ಅರ್ಜಿ ಸಲ್ಲಿರುವ ಕೇರಳ ಸರ್ಕಾರ, ತೀರ್ಪು ನೀಡುವ ಮುನ್ನ ನಮ್ಮ ವಾದವನ್ನು ಕೇಳಬೇಕೆಂದು ಮನವಿ ಮಾಡಿದೆ.
ಇದನ್ನೂ ಓದಿ: ತನ್ನ ಮಕ್ಕಳ ಮುಂದೆ ಅರೆಬೆತ್ತಲೆಯಾದ ರೆಹಾನಾಗೆ ಮತ್ತೊಂದು ಸಂಕಷ್ಟ!
ರೆಹಾನಾ ವಿರುದ್ಧ ಬಾಲಾಪರಾಧಿ ನ್ಯಾಯ ಕಾಯ್ದೆ ಸೆಕ್ಷನ್ 75, ಐಟಿ ಕಾಯ್ದೆಯ ಸೆಕ್ಷನ್67B (D) ಹಾಗೂ ಪೊಕ್ಸೊ ಕಾಯ್ದೆಯಡಿ ಬರುವ ಸೆಕ್ಷನ್ 13, 14ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ಆಕೆಯ ವಿರುದ್ಧ ಪೊಲೀಸ್ ತನಿಖೆ ನಡೆಯಬೇಕಾಗಿದ್ದು, ಆಕೆಯನ್ನು ಪೊಲೀಸರು ವಿಚಾರಣೆ ನಡೆಸಲು ಬಂಧಿಸಬೇಕಿದೆ. ಮಕ್ಕಳನ್ನು ಲೈಂಗಿಕವಾಗಿ ಪ್ರಚೋದಿಸುವ ಉದ್ದೇಶದಿಂದ ಹಾಗೆ ಮಾಡಿದಳೆ ಎಂದು ತಿಳಿಯಲು ವಿಚಾರಣೆಯ ಅಗತ್ಯವಿದೆ ಎಂದು ಕೋರ್ಟ್ಗೆ ಮನವರಿಕೆ ಮಾಡಿಕೊಡಲು ಸರ್ಕಾರ ತಯಾರಿ ನಡೆಸಿದೆ.
ಇದಕ್ಕೂ ಮುನ್ನ ಹೈಕೋರ್ಟ್ನಲ್ಲಿ ರೆಹಾನಾ ಅರ್ಜಿ ವಜಾಗೊಳಿಸಿದ ನ್ಯಾಯಾಧೀಶ ಪಿವಿ ಕುನ್ಹಿಕೃಷ್ಣನ್, ನಿಮ್ಮ ತತ್ವಶಾಸ್ತ್ರದ ಪ್ರಕಾರ ನಿಮ್ಮ ಮಕ್ಕಳಿಗೆ ಕಲಿಸುವ ಸ್ವತಂತ್ರ ನಿಮಗಿದೆ. ಆದರೆ, ಅದು ನಿಮ್ಮ ಮನೆಯ ನಾಲ್ಕು ಗೋಡೆಗಳ ನಡುವೆ ಇರಬೇಕು ಮತ್ತು ಕಾನೂನನ್ನು ಉಲ್ಲಂಘಿಸುವಂತಿರಬಾರದು ಎಂದು ರೆಹನಾಗೆ ಬುದ್ಧಿ ಹೇಳಿದ್ದರು. ಇದೇ ವೇಳೆ ಮಕ್ಕಳ ಜೀವನದಲ್ಲಿ ತಾಯಿ ಪಾತ್ರದ ಬಗ್ಗೆ ತಿಳಿಸಿದ ಜಡ್ಜ್ ಮುಂದಿನ ತನಿಖೆಗೆ ಪೊಲೀಸರಿಗೆ ಸಹಕರಿಸುವಂತೆ ಸೂಚನೆ ನೀಡಿದರು.
ಮಕ್ಕಳ ಕಾಳಜಿಗಾಗಿ ಲೈಂಗಿಕ ಶಿಕ್ಷಣದ ಅವಶ್ಯಕತೆ ಇದೆ. ದೇಹ ಮತ್ತು ಅದರ ಅಂಗಾಗಳ ಬಗ್ಗೆ ಮಕ್ಕಳಿಗೆ ತಿಳಿಸುವ ಅಗತ್ಯವಿದೆ. ಅಂಗಾಗಳನ್ನು ಕೇವಲ ಲೈಂಗಿಕ ಸಾಧನವನ್ನಾಗಿ ನೋಡುವ ಬದಲು ಅದನ್ನು ಬೇರೆ ಮಾಧ್ಯಮವಾಗಿ ವೀಕ್ಷಿಸಲು ಮಕ್ಕಳಲ್ಲಿ ಅರಿವು ಮೂಡಿಸಬೇಕೆಂಬ ಉದ್ದೇಶದಿಂದ ಈ ರೀತಿ ಮಾಡಿದೆ ಎಂದು ರೆಹಾನಾ ಹೈಕೋರ್ಟ್ ಮುಂದೆ ಹೇಳಿಕೆ ನೀಡಿದ್ದರು.
ಇದನ್ನೂ ಓದಿ: ಮನೆ ಖಾಲಿ ಮಾಡಮ್ಮ ರೆಹನಾ! ಮಕ್ಕಳ ಮುಂದೆ ಅರೆಬೆತ್ತಲೆಯಾದವಳಿಗೆ ಸಂಕಷ್ಟದ ಮೇಲೆ ಸಂಕಷ್ಟ!
ಘಟನೆ ಹಿನ್ನೆಲೆ ಏನು?
ರೆಹನಾ ಜೂನ್ 19ರಂದು ತನ್ನ ಯೂಟ್ಯೂಬ್ ಚಾನಲ್ನಲ್ಲಿ ಬಾಡಿ ಆರ್ಟ್ಸ್ ಪಾಲಿಟಿಕ್ಸ್ (#BodyArtPolitics) ಎಂಬ ಅಡಿಬರಹದೊಂದಿಗೆ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರು. ವಿಡಿಯೋದಲ್ಲಿ ರೆಹನಾ ತನ್ನ ಮಗ ಹಾಗೂ ಮಗಳ ಕೈಯಿಂದ ಅರೆಬೆತ್ತಲೆ ದೇಹದ ಮೇಲೆ ಚಿತ್ರ ಬಿಡಿಸಿಕೊಳ್ಳುತ್ತಿರುವ ದೃಶ್ಯವಿದೆ. ವಿಡಿಯೋ ಮಾಡಿದ್ದರ ಉದ್ದೇಶದ ಬಗ್ಗೆ ತಿಳಿಸಿದ್ದ ರೆಹನಾ, ಲೈಂಗಿಕತೆ ಮತ್ತು ನಗ್ನತೆ ನಿಷೇಧವಾಗಿರುವ ಸಮಾಜದಲ್ಲಿ ಮಹಿಳೆಯರು ಲೈಂಗಿಕತೆ ಮತ್ತು ಅವರ ದೇಹದ ಬಗ್ಗೆ ಮುಕ್ತವಾಗಿರಬೇಕು ಎಂದು ಪುನರುಚ್ಚರಿಸುವುದಕ್ಕಾಗಿ ಈ ವಿಡಿಯೋವನ್ನು ಮಾಡಿದ್ದಾಗಿ ಹೇಳಿದ್ದರು. ಇದರ ಬೆನ್ನಲ್ಲೇ ದೂರು ದಾಖಲಾಗಿತ್ತು. ಅಲ್ಲದೆ, ಮಕ್ಕಳ ಕಲ್ಯಾಣ ಮತ್ತು ರಕ್ಷಣಾ ಆಯೋಗವು ಸಹ ಮಧ್ಯಪ್ರವೇಶಿಸಿತ್ತು. ಇದರ ನಡುವೆ ರಾಜ್ಯ ಸರ್ಕಾರ ರೆಹಾನೆ ಜಾಮೀನು ನೀಡದಂತೆ ಅರ್ಜಿಯನ್ನು ಸಲ್ಲಿಸಿತ್ತು.
ಅಂದಹಾಗೆ ರೆಹನಾ ಅವರು ಬಿಎಸ್ಎನ್ಎಲ್ ಮಾಜಿ ಉದ್ಯೋಗಿಯಾಗಿದ್ದಾರೆ. ಅಯ್ಯಪ್ಪ ಭಕ್ತರ ನಂಬಿಕೆಗೆ ನೋವುಂಟು ಮಾಡುವ ಫೇಸ್ಬುಕ್ ಪೋಸ್ಟ್ ಹಾಕಿದ ಆರೋಪದಲ್ಲಿ ಈ ಹಿಂದೆ ಬಂಧಿತರಾಗಿ 18 ದಿನ ಜೈಲುವಾಸ ಅನುಭವಿಸಿದ್ದರು. ಅಲ್ಲದೆ, ಶಬರಿಮಲೆಗೆ ಮಹಿಳೆಯರು ಪ್ರವೇಶಿಸಬಹುದೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ 2018ರ ಅಕ್ಟೋಬರ್ನಲ್ಲಿ ರೆಹನಾ ಸಹ ಶಬರಿಮಲೆಗೆ ಭೇಟಿ ನೀಡುವ ಪ್ರಯತ್ನ ಮಾಡಿ, ಬಂಧಿತರಾಗಿ ಬಿಡುಗಡೆಯಾಗಿದ್ದರು. (ಏಜೆನ್ಸೀಸ್)
ನಾಲ್ಕು ಗೋಡೆಗಳ ನಡುವೆ ಇರಲಿ: ಮಕ್ಕಳ ಮುಂದೆ ಅರೆಬೆತ್ತಲೆಯಾದ ರೆಹಾನಾಗೆ ಹೈಕೋರ್ಟ್ ಶಾಕ್!