ತಿರುವನಂತಪುರ: ಕರೊನಾ ಸಮಸ್ಯೆಯಿಂದ ಉಂಟಾದ ಆರ್ಥಿಕ ನಷ್ಟವನ್ನು ತುಂಬಲು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಹಣವನ್ನು ನೀಡಲು ನಿರಾಕರಿಸಿದ ನೌಕರರ ಒಂದು ತಿಂಗಳ ವೇತನವನ್ನು ಕಡಿತಗೊಳಿಸಲು ಕೇರಳ ರಾಜ್ಯ ಸರ್ಕಾರ ಚಿಂತಿಸುತ್ತಿದೆ. ಇತರ ಕೆಲವು ರಾಜ್ಯ ಸರ್ಕಾರಗಳ ಮಾದರಿಯಲ್ಲಿಯೇ ಪರಿಹಾರ ನಿಧಿಗೆ ನೌಕರರು ಸಂಬಳ ನೀಡಬೇಕು ಎನ್ನುವುದು ಸರ್ಕಾರದ ಚಿಂತನೆ. ಸರ್ಕಾರಿ ಹಾಗೂ ಸರ್ಕಾರಿ ಪ್ರಾಯೋಜಕತ್ವದ ಸಂಸ್ಥೆಗಳ ಸಿಬ್ಬಂದಿಗೆ ಈ ನಿಯಮ ಅನ್ವಯ ಆಗುತ್ತದೆ.
ತಮ್ಮ ಒಂದು ತಿಂಗಳ ಸಂಬಳವನ್ನು ನೀಡಲು ಮುಂದೆ ಬಂದಿರುವ ನೌಕರರು, ಅದನ್ನು ಎರಡು- ಮೂರು ಕಂತುಗಳಲ್ಲಿ ಪಾವತಿಸಲು ಸರ್ಕಾರ ಅನುಮತಿ ನೀಡಲಿದೆ. ಆದರೆ ಸಂಬಳ ನೀಡಲು ನಿರಾಕರಿಸುವ ಸಿಬ್ಬಂದಿಯ ಮುಂದಿನ ಎರಡು ತಿಂಗಳ ವೇತನದಲ್ಲಿ ಶೇ. 50ರಷ್ಟನ್ನು ಕಡಿತಗೊಳಿಸುವುದಾಗಿ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಒಂದು ವೇಳೆ ಎಲ್ಲಾ ಉದ್ಯೋಗಿಗಳು ತಮ್ಮ ಒಂದು ತಿಂಗಳ ಸಂಬಳವನ್ನು ನೀಡಿದರೆ, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸರಿಸುಮಾರು 3 ಸಾವಿರ ಕೋಟಿ ರೂಪಾಯಿ ಹರಿದುಬರಲಿದೆ.
ಎಲ್ಲ ನೌಕರರು ಸ್ವ ಇಚ್ಛೆಯಿಂದ ಹಣವನ್ನು ನೀಡುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮನವಿ ಮಾಡಿಕೊಂಡಿದ್ದಾರೆ.
2018ರಲ್ಲಿ ಉಂಟಾದ ಭೀಕರ ಪರಿಹಾರದ ಹಿನ್ನೆಲೆಯಲ್ಲಿ ಸರ್ಕಾರವು ಇದೇ ರೀತಿಯಲ್ಲಿ ಹಣವನ್ನು ಸಂಗ್ರಹ ಮಾಡಿತ್ತು. ಆದರೆ ಈ ನಿರ್ಧಾರಕ್ಕೆ ಸರ್ಕಾರವು ನ್ಯಾಯಾಲಯದಿಂದ ತೀವ್ರ ಟೀಕೆಗೆ ಒಳಗಾಗಬೇಕಾಯಿತು. ಆದ್ದರಿಂದ ಈ ಬಾರಿ ಸರ್ಕಾರವು ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸುವ ಮೂಲಕ ಎಲ್ಲಾ ಸಾಧಕ ಬಾಧಕಗಳನ್ನು ಪರಿಶೀಲಿಸಿ ಅಧಿಕೃತ ಆದೇಶ ಹೊರಡಿಸಲು ನಿರ್ಧರಿಸಿದೆ.
ಕೆಳ ದರ್ಜೆಯ ನೌಕರರು, ಕರೊನಾ ಸೋಂಕಿತರ ರಕ್ಷಣೆಯಲ್ಲಿ ತೊಡಗಿರುವ ಆರೋಗ್ಯ ಮತ್ತು ಪೊಲೀಸ್ ಇಲಾಖೆಯ ನೌಕರರನ್ನು ಇದರಿಂದ ಹೊರಗಿಡಲು ಸರ್ಕಾರ ನಿರ್ಧರಿಸಿದೆ. (ಏಜೆನ್ಸೀಸ್)
ಕರೊನಾ ಕುರಿತ ಭಯಾನಕ ಮಾಹಿತಿ ಬಿಚ್ಚಿಟ್ಟ ನೂತನ ಸಂಶೋಧನೆ: ಎಚ್ಚರ ವಹಿಸದಿದ್ರೆ ಸೋಂಕು ಖಂಡಿತ
ಸಹಸ್ರಾರು ಮಂದಿ ಬಲಿಯಾದರೂ ಬುದ್ಧಿ ಕಲಿಯದ ಚೀನಾ: ಮತ್ತೆ ಬಾವಲಿ, ಪ್ಯಾಂಗೋಲಿನ್ ಮಾರಾಟ ಆರಂಭ