More

    ಲೋಕಸಭೆ ಚುನಾವಣೆ ಖರ್ಚು ವೆಚ್ಚದ ಮೇಲೆ ತೀವ್ರ ನಿಗಾ ಇರಲಿ; ಅನುಪಕುಮಾರ ಸೂಚನೆ

    ವಿಜಯಪುರ: ಲೋಕಸಭಾ ಚುನಾವಣೆಗಾಗಿ ಅಭ್ಯರ್ಥಿಗಳು ಮಾಡುವ ಖರ್ಚು ವೆಚ್ಚದ ಮೇಲೆ ತೀವ್ರ ನಿಗಾ ಇಡುವ ಕಾರ್ಯವಾಗಬೇಕು ಎಂದು ವಿಜಯಪುರ ಲೋಕಸಭಾ ಚುನಾವಣಾ ವೆಚ್ಚ ವೀಕ್ಷಕ ಐಆರ್‌ಎಸ್ ಅಧಿಕಾರಿ ಅನುಪಕುಮಾರ ಸೂಚಿಸಿದರು.

    ನಗರದ ಜಿಪಂ ಸಭಾಂಗಣದಲ್ಲಿ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಶನಿವಾರ ಅವರು ಸಭೆ ನಡೆಸಿದರು.
    ಯಾವುದೇ ಚುನಾವಣೆಯಾದರು ಕೂಡ ನಿರ್ಲಕ್ಷಿಸುವಂತಿಲ್ಲ, ವಿಧಾನ ಸಭೆ ಚುನಾವಣೆಯಂತೆ ಲೋಕಸಭಾ ಚುನಾವಣೆಯನ್ನೂ ಅಷ್ಟೇ ಗಂಭೀರವಾಗಿ ಪರಿಗಣಿಸಿ ಅಭ್ಯರ್ಥಿಗಳು ಮಾಡುವ ಖರ್ಚು ವೆಚ್ಚಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಬ್ಯಾಂಕ್‌ಗಳಲ್ಲಿ ಹೊಸ ಖಾತೆ ತೆರೆಯಲಾಗುತ್ತಿದೆಯಾ ಎಂದು ಪರಿಶೀಲಿಸಿ ಮತ್ತು ಆ ಖಾತೆಗಳಿಗೆ ನಿಗದಿಪಡಿಸಿದ ಮೊತ್ತಕ್ಕಿಂತ ಹೆಚ್ಚಿನ ಹಣ ವರ್ಗಾವಣೆಯಾಗುತ್ತಿದೆಯಾ ಎಂಬುದನ್ನು ವಿಚಾರಿಸಿ ಖಚಿತಪಡಿಸಿಕೊಳ್ಳಬೇಕು. ಚೆಕ್ ಪೋಸ್ಟ್‌ಗಳಲ್ಲಿ ಕಾಟಾಚಾರಕ್ಕೆ ಮಾಡಿದಂತೆ ತಪಾಸಣೆಯಾಗಬಾರದು, ಕಟ್ಟು ನಿಟ್ಟಾಗಿ ಪರಿಶೀಲಿಸುವುದರೊಂದಿಗೆ ಸಾರ್ವಜನಿಕರಿಗೆ ತೊಂದೆಯಾಗದಂತೆ ಕರ್ತವ್ಯ ನಿರ್ವಹಿಸಬೇಕು ಎಂದರು.

    ಮದ್ಯದಂಗಡಿಗಳಲ್ಲಿ ನಿಗದಿಪಡಿಸಿದಕ್ಕಿಂತ ಹೆಚ್ಚಿನ ಮಟ್ಟದ ಸಾರಾಯಿ ಮಾರಾಟವಾದಲ್ಲಿ ತಕ್ಷಣ ಗಮನಕ್ಕೆ ತರಬೇಕು, ಮಹಾರಾಷ್ಟ್ರ ರಾಜ್ಯಕ್ಕೆ ಗಡಿಭಾಗ ಜಿಲ್ಲೆಯಾಗಿರುವುದರಿಂದ ಅಬಕಾರಿ ಇಲಾಖಾ ಅಧಿಕಾರಿ ಕಟ್ಟು ನಿಟ್ಟಾಗಿ ಕೆಲಸ ನಿರ್ವಹಿಸಿ ಅಲ್ಲದೇ ಪ್ರಿಂಟಿಂಗ್ ಪ್ರೆಸ್‌ಗಳ ಮೇಲೆ ಕೂಡ ನಿಗಾ ಇಡುವುದು ಅವಶ್ಯವಾಗಿದೆ ಎಂದು ಹೇಳಿದರು.

    ಜಿಲ್ಲಾ ಚುನಾವಣಾಧಿಕಾರಿ ಟಿ.ಭೂ ಬಾಲನ್ ಮಾತನಾಡಿ, ಲೋಕಸಭಾ ಚುನಾವಣೆಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಜ. 22 ರಂದು ಹೊರಡಿಸಲಾದ ಅಂತಿಮ ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ ಒಟ್ಟು 19,19,048 ಮತದಾರರಿದ್ದು, ಈ ಪೈಕಿ 9,76,073 ಪುರುಷ, 9,42,757 ಮಹಿಳಾ ಹಾಗೂ 218 ತೃತೀಯ ಲಿಂಗ ಮತದಾರಿರುತ್ತಾರೆ, ಗ್ರಾಮೀಣ ಭಾಗದಲ್ಲಿ 1507 ಹಾಗೂ ಪಟ್ಟಣ ಪ್ರದೇಶದಲ್ಲಿ 578 ಸೇರಿ ಒಟ್ಟು 2085 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಸುಗಮ, ಪಾರದರ್ಶಕ ಹಾಗೂ ನ್ಯಾಯ ಸಮ್ಮತ ಚುನಾವಣೆ ಜರುಗಿಸುವ ದೃಷ್ಟಿಯಿಂದ ಒಟ್ಟು 167 ಸೆಕ್ಟರ್ ಅಧಿಕಾರಿ, 72 ಫ್ಲಾಯಿಂಗ್ ಸ್ವ್ಯಾಡ್, 87 ಸ್ಟೆಟಿಕ್ ಸರ್ವಲೈನ್ಸ್ ತಂಡ, 24 ವಿಡಿಯೋ ಸರ್ವಲೈನ್ಸ್ ಹಾಗೂ 8 ವಿಡಿಯೋ ವಿವ್ಹಿಂಗ್ ತಂಡ ರಚಿಸಲಾಗಿರುತ್ತದೆ ಎಂದು ಮಾಹಿತಿ ನೀಡಿದರು.

    ಜಿಪಂ ಸಿಇಒ ರಿಶಿ ಆನಂದ ಮಾತನಾಡಿ, ಮತದಾನ ಪ್ರಮಾಣ ಹೆಚ್ಚಿಸಲು ಸ್ವೀಪ್ ಸಮಿತಿಯಿಂದ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಕಳೆದ ಬಾರಿ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ ಪ್ರದೇಶಗಳನ್ನು ಗುರುತಿಸಿ ಆ ಪ್ರದೇಶಗಳಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಮನೆ ಮನೆಗೆ ಭೇಟಿ ನೀಡುವ ಮತ್ತು ಸೈಕಲ್ ಜಾಥಾ ಹಾಗೂ ಬೈಕ್ ರ‌್ಯಾಲಿ ಹಮ್ಮಿಕೊಂಡು ಜನರಲ್ಲಿ ಮತ ಚಲಾಯಿಸಲು ಜಾಗೃತಿ ಮೂಡಲಾಗುತ್ತಿದೆ ಎಂದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 29 ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಿ ತೀವ್ರ ನಿಗಾ ಇರಿಸಲಾಗಿದೆ ಎಂದರು. ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts