ಕೊಪ್ಪ: ತಾಲೂಕಿನಲ್ಲಿ ಅಗತ್ಯವಿಲ್ಲದ ಕಡೆ ಕುಡಿಯುವ ನೀರಿಗಾಗಿ ಬೋರ್ವೆಲ್ ಕೊರೆಸಲು ಅನುಮತಿ ನೀಡಬೇಡಿ. ಇದರಿಂದ ಅಂತರ್ಜಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ತಾಪಂ ಇಒ ನವೀನ್ಕುಮಾರ್ ಅವರಿಗೆ ಶಾಸಕ ರಾಜೇಗೌಡ ಸೂಚಿಸಿದರು.
ಶುಕ್ರವಾರ ನಡೆದ ತಾಪಂ ತ್ರೖೆಮಾಸಿಕ ಕೆಡಿಪಿ ಮುಂದುವರಿದ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಮನೆಗೊಂದು ಬೋರ್ವೆಲ್ ಕೊರೆಸಲಾಗುತ್ತಿದೆ. ಇದರಿಂದ ಗ್ರಾಪಂಗಳಿಗೆ ನಿರ್ವಹಣೆ ಕಷ್ಟವಾಗಲಿದೆ. ಮುಂದಿನ ದಿನದಲ್ಲಿ ಅನುಮತಿ ಕೊಡುವುದನ್ನು ನಿಲ್ಲಿಸಬೇಕು.ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನವೀನ್ಕುಮಾರ್, ಇನ್ನುಮುಂದೆ ವೈಯಕ್ತಿಕವಾಗಿ ಬೋರ್ವೆಲ್ ಕೊರೆಯಲು ಅನುಮತಿ ನೀಡದಂತೆ ಎಲ್ಲ ಪಿಡಿಒಗಳಿಗೂ ಸೂಚಿಸುತ್ತೇನೆ ಎಂದು ಹೇಳಿದರು.
ಜಿಪಂ ಸದಸ್ಯ ಎಸ್.ಎನ್.ರಾಮಸ್ವಾಮಿ ಮಾತನಾಡಿ, ಬೋರ್ವೆಲ್ಗಳಿಂದ ಮನೆ ಮನೆಗೆ ನೀರು ನೀಡುವುದಕ್ಕಿಂದ ಹೊಳೆ ನೀರನ್ನು ಉಪಯೋಗಿಸುವುದು ಅನುಕೂಲ. ಬಹುಗ್ರಾಮ ನೀರಿನ ಯೋಜನೆಯಡಿ ಈ ಹಿಂದೆ ತುಂಗಾ ನದಿಯಿಂದ ನೀರೋದಗಿಸುವ ಯೋಜನೆಗೆ ರೂಪುರೇಷೆ ಆರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಅದು ಮಂದಗತಿಯಿಂದ ಸಾಗುತ್ತಿದೆ ಎಂದು ಸಭೆ ಗಮನಕ್ಕೆ ತಂದರು.