ಬೆಂಗಳೂರು: ಅಗರ ಕೆರೆ ಬಳಿ ಇರುವ ಪಾರ್ಕ್ನಲ್ಲಿ ಸಂಯುಕ್ತಾ ಹೆಗ್ಡೆ ಮತ್ತವರ ಸ್ನೇಹಿತರು ಕ್ರೀಡಾ ಉಡುಗೆ ತೊಟ್ಟು ಹುಲಾ ಹೂಪ್ ಡಾನ್ಸ್ ಮಾಡುತ್ತಿದ್ದಾಗ ಅವರನ್ನು ನಿಂದಿಸಿ, ಹಲ್ಲೆ ಮಾಡಿರುವ ಆರೋಪದಡಿ ಕಾಂಗ್ರೆಸ್ ನಾಯಕಿ ಕವಿತಾ ರೆಡ್ಡಿಯವರನ್ನು ಬಂಧಿಸಿ, ನಂತರ ವಿಶೇಷ ಜಾಮೀನಿನಡಿ ಬಿಡುಗಡೆ ಮಾಡಲಾಗಿದೆ.
ನಿನ್ನೆಯಷ್ಟೇ ಕವಿತಾ ರೆಡ್ಡಿ ವಿಡಿಯೋ ಮೂಲಕ ಸಂಯುಕ್ತಾರ ಕ್ಷಮೆ ಕೋರಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಂಯುಕ್ತಾ ಹೆಗ್ಡೆ, ಹಳೇ ಘಟನೆಯನ್ನೆಲ್ಲ ಮರೆತು, ಮುಂದಕ್ಕೆ ಹೋಗೋಣ ಎಂದು ಹೇಳಿದ್ದರು. ಆದರೆ ಅದಕ್ಕೂ ಮೊದಲು ಸಂಯುಕ್ತಾ ಹೆಗ್ಡೆ ಎಚ್ಎಸ್ಆರ್ ಲೇಔಟ್ ಪೊಲೀಸರಿಗೆ ದೂರು ನೀಡಿದ್ದರಿಂದ ಎಫ್ಐಆರ್ ದಾಖಲಿಸಿ, ಬಂಧಿಸಿದ್ದರು. ಇದನ್ನೂ ಓದಿ: ಸಂಯುಕ್ತಾ ಹೆಗ್ಡೆ ಪರವಾಗಿ ನಿಂತ ಜಗ್ಗೇಶ್; ಬಾಬ್ಕಟ್ ಮಹಿಳೆಗೆ ಕ್ಲಾಸ್
ಪಾರ್ಕ್ನಲ್ಲಿದ್ದ ಸಂಯುಕ್ತಾ ಹೆಗ್ಡೆ ಮತ್ತು ಅವರ ಸ್ನೇಹಿತರನ್ನು ಕವಿತಾ ರೆಡ್ಡಿ ಹಾಗೂ ಸ್ಥಳೀಯರು ನಿಂದಿಸಿದ್ದರು. ಅದರಲ್ಲೂ ಓರ್ವ ಡ್ರಗ್ಸ್ ಸೇವನೆ ಆರೋಪದಡಿ ಜೈಲಿಗೆ ಕಳಿಸುತ್ತೇವೆ ಎಂದೂ ಎಚ್ಚರಿಸಿದ್ದರು. ಈ ಎಲ್ಲ ಘಟನೆಯ ಬಳಿಕ ಸಂಯುಕ್ತಾ ಹೆಗ್ಡೆಗೆ ಹಿರಿಯ ನಟ ಜಗ್ಗೇಶ್, ಸಂಸದೆ ಶೋಭಾ ಕರಂದ್ಲಾಜೆ ಸೇರಿ ಹಲವು ಗಣ್ಯರು ಬೆಂಬಲ ವ್ಯಕ್ತಪಡಿಸಿದ್ದರು. ನೈತಿಕ ಪೊಲೀಸ್ ಗಿರಿಗೆ ಅವಕಾಶವಿಲ್ಲ ಎಂದಿದ್ದರು. (ಏಜೆನ್ಸೀಸ್)