ಕವಿತಾಳ: ಹಾಲಾಪೂರ ಹತ್ತಿರದ ಹಳ್ಳ ತುಂಬಿ ಹರಿಯುತ್ತಿರುವುದರಿಂದ ಮಸ್ಕಿ-ಕವಿತಾಳ ನಡುವಿನ ಸಂಚಾರ ಶನಿವಾರ ಮತ್ತು ಭಾನುವಾರ ಸ್ಥಗಿತವಾಗಿತ್ತು. ಹಾಲಾಪೂರ ಹತ್ತಿರದ ಹಳ್ಳದ ಸೇತುವೆ ಶಿಥಿಲಗೊಂಡಿದ್ದು, ಹೊಸ ಸೇತುವೆ ನಿರ್ಮಿಸಲಾಗುತ್ತಿದೆ. ಜನರ ಅನುಕೂಲಕ್ಕಾಗಿ ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿದ್ದು, ಹಳ್ಳದ ನೀರಿನ ರಭಸಕ್ಕೆ ಕೊಚ್ಚಿಹೋಗಿದೆ. ಲೋಕೋಪಯೋಗಿ ಇಲಾಖೆಯಿಂದ 1.95 ಕೋಟಿ ರೂಪಾಯಿ ಅನುದಾನದಲ್ಲಿ ಸೇತುವೆ ನಿರ್ಮಿಸಲಾಗುತ್ತಿದೆ. ಮಳೆಗಾಲದಲ್ಲಿ ಕಾಮಗಾರಿ ಕೈಗೊಂಡಿರುವುದು ಸಂಪರ್ಕ ಸಮಸ್ಯೆಗೆ ಕಾರಣವಾಗಿದೆ.