ಧಾರವಾಡ: ಪಾಕ್ ಪರ ಘೋಷಣೆ ಕೂಗಿ ದೇಶದ್ರೋಹ ಆರೋಪದಲ್ಲಿ ಬಂಧಿತರಾಗಿರುವ ಕಾಶ್ಮೀರಿ ಯುವಕರ ಬಿಡುಗಡೆಗೆ ಜಾಮೀನು ಅರ್ಜಿ ಸಲ್ಲಿಸಲು ಸಾಧ್ಯವಾಗದೆ ವಕೀಲರು ಹಿಂದಿರುಗಿದ್ದಾರೆ.
ಪೊಲೀಸರ ಭದ್ರತೆಯಲ್ಲಿ ಜಿಲ್ಲಾ ಕೋರ್ಟ್ಗೆ ಆಗಮಿಸಿದ ಕಾಶ್ಮೀರಿ ಯುವಕರ ಪರ ವಕೀಲರು ಕೋರ್ಟ್ ಆಡಳಿತಾಧಿಕಾರಿಗೆ ಜಾಮೀನು ಅರ್ಜಿ ಸಲ್ಲಿಸದೆ ನೇರವಾಗಿ ನ್ಯಾಯಾಧೀಶರಿಗೆ ಸಲ್ಲಿಸಲು ಮುಂದಾದರು. ಹೀಗಾಗಿ ನ್ಯಾಯಾಧೀಶರು ಅರ್ಜಿ ಸ್ವೀಕರಿಸಲು ನಿರಾಕರಿಸಿ. ಆಡಳಿತಾಧಿಕಾರಿಗೆ ಸಲ್ಲಿಸಿ ಎಂದು ಸೂಚಿಸಿದರು.
ಜಾಮೀನು ಅರ್ಜಿ ಹಿಂದಕ್ಕೆ ಪಡೆದ ವಕೀಲರು ಆಡಳಿತಾಧಿಕಾರಿಗೆ ಅರ್ಜಿ ಸಲ್ಲಿಸದೆ ಕೋರ್ಟ್ನಿಂದ ಹೊರ ನಡೆದರು.
ವಕೀಲರ ಕಾರು ಜಖಂ: ಕಾಶ್ಮೀರಿ ಯುವಕರ ಪರವಾಗಿ ಜಾಮೀನು ಅರ್ಜಿ ಸಲ್ಲಿಸಲು ಬೇರೆ ಕಡೆಯಿಂದ ಬಂದ ವಕೀಲರನ್ನು ಸ್ಥಳೀಯ ವಕೀಲರು ತೀವ್ರವಾಗಿ ವಿರೋಧಿಸಿದರು. ಇದರಿಂದ ಕೋರ್ಟ್ ಆವರಣದಲ್ಲಿ ಉದ್ರಿಕ್ತ ಸ್ಥಿತಿ ನಿರ್ಮಾಣವಾಯಿತು. ಗುಂಪು ವಕೀಲರ ಕಾರು ಜಖಂಗೊಳಿಸಿತು. ಪೊಲೀಸರು ಮಧ್ಯ ಪ್ರವೇಶಿಸಿ ವಕೀಲರನ್ನು ಸುರಕ್ಷಿತವಾಗಿ ಕೋರ್ಟ್ ಆವರಣದಿಂದ ಹೊರಕ್ಕೆ ಕಳುಹಿಸಿದರು. (ದಿಗ್ವಿಜಯ ನ್ಯೂಸ್)