ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯರನ್ನಾಗಿ ಐವರು ಸಾಹಿತಿಗಳನ್ನು ಆಯ್ಕೆ ಮಾಡಲಾಗಿದೆ. ಆಜೀವ ಗೌರವವಾದ ಸದಸ್ಯತ್ವವನ್ನು 9 ವರ್ಷದ ನಂತರ ನೀಡಲಾಗುತ್ತಿದ್ದು, ಖ್ಯಾತ ವಿಮರ್ಷಕಿ ಡಾ. ವೀಣಾ ಶಾಂತೇಶ್ವರ, ಜಾನಪದ ವಿದ್ವಾಂಸ ಡಾ. ಗೊ.ರು. ಚನ್ನಬಸಪ್ಪ, ಹಿರಿಯ ವಿದ್ವಾಂಸ ಡಾ. ಹಂ. ಪ. ನಾಗರಾಜಯ್ಯ, ಹಿರಿಯ ಕವಿ ಡಾ. ದೊಡ್ಡರಂಗೇಗೌಡ ಹಾಗೂ ಹಿರಿಯ ವಿದ್ವಾಂಸ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್ ಪ್ರಕಟಿಸಿದ್ದಾರೆ.
ಕೃಷ್ಣರಾಜ ಪರಿಷನ್ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮನು ಬಳಿಗಾರ್, ಐವರು ಗಣ್ಯರಿಗೆ ಕಸಾಪ ಗೌರವ ಸದಸ್ಯತ್ವ ನೀಡಬೇಕು ಎಂದು 35 ವರ್ಷದ ಹಿಂದೆ ನಿರ್ಧರಿಸಲಾಗಿದೆ. 1985ರಲ್ಲಿ ರಾಷ್ಟ್ರಕವಿ ಕುವೆಂಪು ಅವರಿಂದ ಆರಂಭವಾಗಿ 2011ರಲ್ಲಿ ಡಾ. ಎಚ್.ಜೆ. ಲಕ್ಕಪ್ಪಗೌಡರವರೆಗೆ 19 ಗಣ್ಯರನ್ನು ಆಯ್ಕೆ ಮಾಡಲಾಗಿದೆ. ಇದು ಆಜೀವ ಸದಸ್ಯತ್ವವಾಗಿದ್ದು, ತಾಮ್ರಲಕ, ಶಾಲು, ಸನ್ಮಾನಗಳನ್ನು ಒಳಗೊಂಡಿದೆ. ಈ ಬಾರಿ ಗೌರವ ಸದಸ್ಯರ ಆಯ್ಕೆಗಾಗಿ ಹಿರಿಯ ವಿಮರ್ಷಕ ಎಸ್.ಆರ್. ವಿಜಯಶಂಕರ್, ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಅವರ ಆಯ್ಕೆ ಸಮಿತಿಯನ್ನು ರಚನೆ ಮಾಡಲಾಗಿತ್ತು. ಸದಸ್ಯತ್ವಕ್ಕೆ ಐವರನ್ನು ಆಯ್ಕೆ ಮಾಡಲಾಗಿದ್ದು, ತಲಾ 1 ಲಕ್ಷ ರೂ. ನೀಡುವ ನಿರ್ಧಾರವನ್ನೂ ಮಾಡಲಾಗಿದೆ.
ಗೌರವ ಸದಸ್ಯತ್ವಕ್ಕೆ ಆಯ್ಕೆಯಾಗುವವರು ನಾಡು ನುಡಿಗೆ ಗಣನೀಯ ಸೇವೆ ಸಲ್ಲಿಸಿರಬೇಕು ಎಂಬುದರ ಜತೆಗೆ ಈಗಾಗಲೆ ಜ್ಞಾನಪೀಠ, ಸರಸ್ವತಿ ಸಮ್ಮಾನ, ನೃಪತುಂಗ ಪ್ರಶಸ್ತಿ ಪಡೆದಿರಬಾರದು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಗಿರಬಾರದು ಎಂಬ ನಿಬಂಧನೆ ವಿಧಿಸಿಕೊಳ್ಳಲಾಗಿತ್ತು. ಆಯ್ಕೆಯಾದವರ ಕುರಿತು 80-100 ಪುಟದ ವಾಚಿಕೆಯನ್ನು ಪರಿಷತ್ತು ಮುದ್ರಣ ಮಾಡಲಿದೆ. ಮುಖ್ಯಮಂತ್ರಿಗಳು, ಸಚಿವರು ಅಥವಾ ಸಾರಸ್ವತ ಲೋಕದ ಗಣ್ಯರ ಉಪಸ್ಥಿತಿಯಲ್ಲಿ ಸದ್ಯದಲ್ಲೆ ಗೌರವ ಪ್ರದಾನ ಕಾರ್ಯಕ್ರಮ ನಡೆಯುತ್ತದೆ ಎಂದು ಮನು ಬಳಿಗಾರ್ ಹೇಳಿದರು.
ಕಸಾಪ ಗೌರವ ಕೋಶಾಧ್ಯಕ್ಷ ಮಲ್ಲಿಕಾರ್ಜುನಯ್ಯ, ಗೌರವ ಪ್ರಧಾನ ಕಾರ್ಯದರ್ಶಿ ಕೆ. ರಾಜಕುಮಾರ್, ಪದ್ಮರಾಜ ದಂಡಾವತಿ, ಎಸ್. ವಿಜಯಶಂಕರ ಉಪಸ್ಥಿತರಿದ್ದರು.
ಮರಾಠಿ ಭಾಷೆಯ ನಿಗಮವಾದರೆ ವಿರೋಧ
ಮರಾಠ ಸಮುದಾಯ ಹಾಗೂ ಮರಾಠಿ ಭಾಷಿಕರು ಪ್ರತ್ಯೇಖವಾಗಿದ್ದು, ಸರ್ಕಾರವು ಮರಾಠ ಸಮುದಾಯಕ್ಕೆ ನಿಗಮ ಮಾಡಿದ್ದರೆ ಕಸಾಪ ಆಕ್ಷೇಪ ಇಲ್ಲ ಎಂದು ಮನು ಬಳಿಗಾರ್ ಹೇಳಿದರು. ಮರಾಠ ಸಮುದಾಯದವರು ತಲೆಮಾರುಗಳಿಂದ ಕರ್ನಾಟಕದಲ್ಲಿದ್ದು, ಅನೇಕರಿಗೆ ಕನ್ನಡವೇ ಮಾತೃಭಾಷೆ. ಸರ್ಕಾರ ಸ್ಥಾಫಿಸಿರುವ ನಿಗಮವು ಮರಾಠ ಸಮುದಾಯಕ್ಕೆ ಎಂದು ಹೇಳಲಾಗುತ್ತಿದೆ. ಆದರೆ ನಿಗಮಕ್ಕೆ ಕಾರ್ಯಸೂಚಿ ರೂಪಿಸುವಾಗ ಸರ್ಕಾರ ಎಚ್ಚರಿಕೆ ವಹಿಸಬೇಕು. ಮರಾಠ ಭಾಷೆಯ ಕುರಿತಾಗಿ ಕಾರ್ಯವಿದ್ದರೆ ಕಸಾಪ ಅದನ್ನು ವಿರೋಧಿಸುತ್ತದೆ ಎಂದರು.
ಇನ್ನು ಸರ್ಕಾರದ ಹೊಣೆ
ಕಸಾಪಕ್ಕೆ ಸಮಯಕ್ಕೆ ಸರಿಯಾಗಿ ಚುನಾವಣೆ ನಡೆಸುವಂತೆ ಮೂರು ತಿಂಗಳಿಗೂ ಮುಂಚಿತವಾಗಿಯೇ ಪತ್ರ ಬರೆಯಲಾಗಿದ್ದು, ಇನ್ನು ಸರ್ಕಾರದ ನಿರ್ಧಾರದ ಮೇಲೆ ಚುನಾವಣೆ ಅವಲಂಬಿತವಾಗಿದೆ ಎಂದು ಮನು ಬಳಿಗಾರ್ ತಿಳಿಸಿದ್ದಾರೆ. ಮೂರು ತಿಂಗಳು ಮೊದಲು ಪತ್ರ ಬರೆಯಬೇಕು ಎಂದು ನಿಯಮದಲ್ಲಿದೆ. ಆದರೆ ನಾನು ಸುಮಾರು ನಾಲ್ಕು ತಿಂಗಳಿದ್ದಾಗಲೇ ಚುನಾವಣೆ ಕುರಿತ ಪ್ರಕ್ರಿಯೆಗೆ ಚಾಲನೆ ನೀಡಿದ್ದೇನೆ. ಬೆಂಗಳೂರಿನಲ್ಲಿ ಕೇವಲ ಒಂದಿದ್ದ ಮತಗಟ್ಟೆಯನ್ನು 28ಕ್ಕೆ ಹೆಚ್ಚಿಸುವುದು, ಚುನಾವಣಾ ವೆಚ್ಚ ಉಳಿಸಲು ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಸುವುದು, ಕಾರ್ಯಕಾರಿ ಸಮಿತಿಯಲ್ಲಿ ಎಸ್ಸಿಎಸ್ಟಿ, ಮಹಿಳಾ ಪ್ರಾತಿನಿಧ್ಯ ಹೆಚ್ಚಿಸುವ ಅನೇಕ ಸುಧಾರಣೆಗಳನ್ನು ತಮ್ಮ ಅವಧಿಯಲ್ಲಿ ಕೈಗೊಳ್ಳಲಾಗಿದೆ ಎಂದರು.