ಬೆಂಗಳೂರು: ಕರ್ನಾಟಕ ನಾಗರಿಕ ಸೇವಾ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕ, ಆಯ್ಕೆ ನಿರ್ವಹಿಸುತ್ತಿದ್ದ ಕರ್ನಾಟಕ ಲೋಕ ಸೇವಾ ಆಯೋಗಕ್ಕೆ (ಕೆಪಿಎಸ್ಸಿ) ದಾಖಲೆಗಳ ಪರಿಶೀಲನೆಗಾಗಿ ಸೀಮಿತ ಅವಕಾಶ ಕಲ್ಪಿಸಿದ್ದು, ಈ ಸಂಬಂಧ ಕರಡು ನಿಯಮಾವಳಿಗಳನ್ನು ರೂಪಿಸಿ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದೆ.
ತಿದ್ದುಪಡಿ ನಿಯಮದಂತೆ ಆಯ್ಕೆಯಾದ ಅಭ್ಯರ್ಥಿಗಳ ಸಮಗ್ರ ದಾಖಲೆಗಳನ್ನು ಆಯಾ ಇಲಾಖೆಗಳು ಪರಿಶೀಲಿಸಲಿವೆ. ಕೆಪಿಎಸ್ಸಿ ಇನ್ನು ಮುಂದೆ ಸ್ವೀಕರಿಸಿದ ಅರ್ಜಿಗಳೊಂದಿಗೆ ಲಗತ್ತಿಸಿದ ದಾಖಲೆಗಳನ್ನು ಮಾತ್ರ ಪರಿಶೀಲಿಸಬೇಕು. ಅಗತ್ಯವೆನಿಸಿದರೆ, ಸಂದರ್ಶನ ಸಂದರ್ಭದಲ್ಲಿ ದಾಖಲೆಗಳ ಪರಿಶೀಲನೆಗೆ ಅಭ್ಯರ್ಥಿಗಳನ್ನು ಆಹ್ವಾನಿಸಬಹುದಾಗಿದೆ.
ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ 1977ರ ಪ್ರಕಾರ, ಯಾವುದೇ ವ್ಯಕ್ತಿ ಯಾವುದೇ ಸೇವೆ ಮತ್ತು ಹುದ್ದೆಗೆ ನೇಮಕ ಪ್ರಾಧಿಕಾರ ಒಪ್ಪಿಗೆ ನೀಡುವುದು ಕಡ್ಡಾಯವೆಂಬ ಅರ್ಥೈಸುವಿಕೆ ಮಾರ್ಪಡಿಸಿ 2020ರ ತಿದ್ದುಪಡಿಗೆ ನಿಯಮಾವಳಿ ರೂಪಿಸಿ ಆದೇಶ ಹೊರಡಿಸಲಾಗಿದೆ. ಈ ನಿಯಮದಂತೆ ನೇರ ನೇಮಕ ಸಂದರ್ಭದಲ್ಲಿ ವಿದ್ಯಾರ್ಹತೆ, ವೇತನ, ಆದಾಯ, ಜಾತಿ ಪ್ರಮಾಣ ಪತ್ರ ಇತರೆ ಎಲ್ಲ ದಾಖಲೆಗಳು ನೈಜತೆ ಹಾಗೂ ಅಧಿಕೃತತೆ ಖಾತರಿಪಡಿಸಿಕೊಂಡ ನಂತರವೇ ನೇಮಕ ಮಾಡಿಕೊಳ್ಳಬೇಕು.
ಅವಧಿ ವಿಸ್ತರಣೆ: ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮತ್ತೊಂದು ಕರಡು ನಿಯಮಾವಳಿ ಹೊರಡಿಸಿ, ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಸಾಕ್ಷರತೆ 2012 ರಿಂದ ಪೂರ್ವಾನ್ವಯ ಕಾಯ್ದೆ ನಿಯಮ 2ರಡಿ 8 ವರ್ಷ ಎಂಬುದನ್ನು 10 ಹಾಗೂ 9 ವರ್ಷ ಎಂಬುದನ್ನು 11 ವರ್ಷಗಳಿಗೆ ವಿಸ್ತರಿಸಿದೆ.
ಬೆಂಗಳೂರಿನಲ್ಲಿ ಎಲ್ಲೆಲ್ಲಿ ಡ್ರೋನ್ ಕ್ಯಾಮರಾ ಕಣ್ಗಾವಲು – ಇಲ್ಲಿದೆ ನೋಡಿ ವಿಷುವಲ್ಸ್…