ಹಾವೇರಿ: ಇಲ್ಲಿನ ಚಿಕ್ಕ ಮೈಲಾರ ಖ್ಯಾತಿಯ ಹಾವನೂರು ಗ್ರಾಮದಲ್ಲಿ ಸುಮಾರು 354 ವರ್ಷಗಳ ಇತಿಹಾಸ ಇರುವ ಕಾರ್ಣಿಕೋತ್ಸವ ನಡೆಯಿತು.
ಈ ವೇಳೆ ಗೊರವಪ್ಪ ಹೊನ್ನಪ್ಪ ಬಿಲ್ಲರ ಅವರು’ ಮುತ್ತಿನ ರಾಶಿಗೆ ಮುತ್ತ ಕೊಟ್ಟಿತಲೇ ಪರಾಕ್’ ಎಂದು ಮೈಲಾರ ಲಿಂಗೇಶ್ವರನ ಕಾರ್ಣಿಕ ನುಡಿದರು.
ಹೂವಿನಹಡಗಲಿಯ ಮೈಲಾರದ ಡೆಂಕನಮರಡಿಯಲ್ಲಿ ಕಾರ್ಣಿಕ ನುಡಿಯುವ ಹಿಂದಿನ ದಿನ ಹಾವನೂರಿನಲ್ಲಿ ಕಾರ್ಣಿಕ ಹೇಳಲಾಗುತ್ತದೆ. ಇದನ್ನು ಭವಿಷ್ಯ ಎಂದೇ ಪರಿಗಣಿಸಲಾಗುತ್ತದೆ.
15-20 ಅಡಿ ಎತ್ತರದ ಬಿಲ್ಲನ್ನು ಏರಿದ ಗೊರವಪ್ಪ ಮುತ್ತಿನ ರಾಶಿಗೆ ಮುತ್ತ ಕೊಟ್ಟಿತಲೇ ಪರಾಕ್’ ಎಂದು ಹೇಳಿದ್ದನ್ನು ಅನೇಕ ರೀತಿಯಲ್ಲಿ ಅರ್ಥೈಸಲಾಗಿದೆ.
ಈ ವರ್ಷ ರೈತರಿಗೆ ಹೆಚ್ಚು ಮಹತ್ವವನ್ನು ಕಾರ್ಣಿಕ ನೀಡಿದೆ ಎಂದು ಭಕ್ತರು ಹೇಳಿದ್ದಾರೆ. ಅಲ್ಲದೆ ರಾಜಕೀಯ ವಿಚಾರಕ್ಕೂ ಅದನ್ನು ಅನ್ವಯಿಸಿಕೊಂಡು ತಮ್ಮದೇ ಧಾಟಿಯಲ್ಲಿ ಅರ್ಥೈಸಿದ್ದಾರೆ.
ಕಾರ್ಣಿಕವನ್ನು ವೀಕ್ಷಿಸಲು ಹಾವನೂರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರು ಆಗಮಿಸಿದ್ದರು.