ಅಗರ್ತಲ: ಮೊದಲ ಇನಿಂಗ್ಸ್ನಲ್ಲಿ ಉಪಯುಕ್ತ ಮುನ್ನಡೆ ಸಾಧಿಸಿರುವ ಪ್ರವಾಸಿ ಕರ್ನಾಟಕ ತಂಡ ದ್ವಿತೀಯ ಇನಿಂಗ್ಸ್ ವೈಲ್ಯದ ನಡುವೆಯೂ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ತ್ರಿಪುರಕ್ಕೆ ಆರಂಭಿಕ ಪೆಟ್ಟು ನೀಡಿದ್ದು, ಗೆಲುವಿನ ಮೇಲೆ ಕಣ್ಣಿಟ್ಟಿದೆ. ಪಂದ್ಯದ 4ನೇ ಹಾಗೂ ಅಂತಿಮ ದಿನ ಮಯಾಂಕ್ ಅಗರ್ವಾಲ್ ಬಳಗಕ್ಕೆ 7 ವಿಕೆಟ್ ಅವಶ್ಯವಿದೆ.
ಎಂಬಿಬಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ 3ನೇ ದಿನವಾದ ಭಾನುವಾರ ತ್ರಿಪುರ ತಂಡವನ್ನು ಮೊದಲ ಇನಿಂಗ್ಸ್ನಲ್ಲಿ 200 ರನ್ಗಳಿಗೆ ಕಟ್ಟಿಹಾಕಿದ ಕರ್ನಾಟಕ 41 ರನ್ಗಳ ಅಮೂಲ್ಯ ಮುನ್ನಡೆ ಸಾಧಿಸಿತು. ನಂತರ 2ನೇ ಸರದಿಯಲ್ಲಿ ಕರ್ನಾಟಕ 51.3 ಓವರ್ಗಳಲ್ಲಿ 151 ರನ್ಗಳಿಗೆ ಆಲೌಟ್ ಆಯಿತು. ಕಿಶನ್ ಬಿದರೆ (42) ಹಾಗೂ ವಿಕೆಟ್ ಕೀಪರ್-ಬ್ಯಾಟರ್ ಶರತ್ ಶ್ರೀನಿವಾಸ್ (48) ಉಪಯುಕ್ತ ಕೊಡುಗೆ ನೀಡಿದರು. 193 ರನ್ ಗುರಿ ಪಡೆದ ತ್ರಿಪುರ ದಿನದಂತ್ಯಕ್ಕೆ 24 ಓವರ್ಗಳಲ್ಲಿ 3 ವಿಕೆಟ್ಗೆ 59 ರನ್ಗಳಿಸಿದ್ದು, ಇನ್ನೂ 134 ರನ್ಗಳಿಸಬೇಕಿದೆ.
ಕರ್ನಾಟಕ: 241 ಹಾಗೂ 51.3 ಓವರ್ಗಳಲ್ಲಿ 151 (ಮಯಾಂಕ್ 17, ನಿಕಿನ್ 2, ಕಿಶನ್ 42, ಹಾರ್ದಿಕ್ ರಾಜ್ 10,ಎಸ್. ಶರತ್ 48, ವೈಶಾಕ್ 22, ಮಣಿಶಂಕರ್ 29ಕ್ಕೆ 3, ರಾಣ ದತ್ತ 39ಕ್ಕೆ 3). ತ್ರಿಪುರ: 200 ಹಾಗೂ 3 ವಿಕೆಟ್ಗೆ 59 (ಬಿಶಾಲ್ 5, ಶ್ರೀದಮ್ 21, ಸುದೀಪ್ 26*, ಗಣೇಶ್ ಸತೀಶ್ 3*, ವಿದ್ವತ್ 15ಕ್ಕೆ 1, ವೈಶಾಕ್ 13ಕ್ಕೆ 1).
ಕಿಶನ್-ಶರತ್ ಆಸರೆ: ಇನಿಂಗ್ಸ್ ಮುನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ತಂಡ ನಿರಂತರ ವಿಕೆಟ್ ಕೈಚೆಲ್ಲುವ ಮೂಲಕ ಸಾಧಾರಣ ಮೊತ್ತಕ್ಕೆ ಕುಸಿಯಿತು. ಆರಂಭಿಕ ಸಮರ್ಥ್, ಕೆವಿ ಅನೀಶ್ (2), ನಾಯಕ ಮಯಾಂಕ್ ಅಗರ್ವಾಲ್ (17) ವಿಕೆಟ್ ಕಬಳಿಸಿದ ತ್ರಿಪುರ ದಿಟ್ಟ ತಿರುಗೇಟು ನೀಡಿತು. ಉಪನಾಯಕ ನಿಕಿನ ಜೋಸ್ (4), ಹಾರ್ದಿಕ್ ರಾಜ್ (10) ನಿರಾಸೆ ಮೂಡಿಸಿದರು. ಬಳಿಕ 6ನೇ ವಿಕೆಟ್ಗೆ ಜತೆಯಾದ ಕಿಶನ್ ಬಿದರೆ-ಶರತ್ ಶ್ರೀನಿವಾಸ್ ಜೋಡಿ 32 ರನ್ಗಳ ಚೇತರಿಕೆ ನೀಡಿತು. ಭೋಜನ ವಿರಾಮಕ್ಕೆ 86 ರನ್ಗಳಿಗೆ 6 ವಿಕೆಟ್ ಕಳೆದುಕೊಂಡ ಕರ್ನಾಟಕ ತಂಡಕ್ಕೆ
ಆಸರೆಯಾಗಿ ನಿಂತಿದ್ದ ಶರತ್ ಜತೆಯಾದ ವೈಶಾಕ್ ವಿಜಯ್ ಕುಮಾರ್ (22) ಜೋಡಿ 7ನೇ ವಿಕೆಟ್ಗೆ 47 ರನ್ಗಳಿಸಿ ಮುನ್ನಡೆ ಹೆಚ್ಚಿಸಿತು. ಅರ್ಧಶತಕ ಅಂಚಿನಲ್ಲಿದ್ದ ಶರತ್ ವಿಕೆಟ್ ಒಪ್ಪಿಸುವ ಮೂಲಕ ಕರ್ನಾಟಕ ಎರಡನೇ ಇನಿಂಗ್ಸ್ ಮುಕ್ತಾಯ ಕಂಡಿತು.