ಬೆಂಗಳೂರು: ಮಾರ್ಚ್ 5ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡಿಸಲಿರುವ ಆಯವ್ಯಯಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಜನಮಾನಸದಲ್ಲಿ ಈ ಭಾರಿಯ ಬಜೆಟ್ ದಾಖಲಿಸಲು ಸಿಎಂ ನಿರ್ಧರಿಸಿದ್ದು, ಅದಕ್ಕಾಗಿ ಬಿಎಸ್ವೈ ಸಿದ್ಧತೆ ನಡೆಸಿದ್ದಾರೆ.
ಕೃಷಿ ಮತ್ತು ಜಲಸಂಪನ್ಮೂಲ ಇಲಾಖೆ ಮೇಲೆ ಹೆಚ್ಚು ನಿಗಾವಹಿಸಿರುವ ಸಿಎಂ, ಕೇಂದ್ರ ಸರ್ಕಾರದ ವಿಶೇಷ ಅನುದಾನ ಪಡೆದು ಬಜೆಟ್ ಯೋಜನೆಗಳನ್ನು ಸಕಾರಾಗೊಳಿಸಲು ತೀರ್ಮಾನಿಸಿದ್ದಾರೆ. ಅದಕ್ಕಾಗಿ ಬಜೆಟ್ ಘೋಷಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಲು ನಿರ್ಧರಿಸಿದ್ದಾರೆ.
ಮೋದಿ ಭೇಟಿಯಾಗಿ ವಿಶೇಷ ಪ್ಯಾಕೇಜ್ ಪಡೆಯಲು ಮನವಿ ಮಾಡಲಿದ್ದಾರೆ. ಕೇಂದ್ರದ ವಿಶೇಷ ಅನುದಾನ ದೊರೆತರೆ ಬಜೆಟ್ನಲ್ಲಿ ಮಹತ್ವದ ಘೋಷಣೆ ಮಾಡಲು ಯಡಿಯೂರಪ್ಪ ನಿರ್ಧರಿಸಿದ್ದಾರೆ.
ನೀರಾವರಿ ಯೋಜನೆಗಳ ಪೂರ್ಣಗೊಳಿಸಲು ಕೇಂದ್ರದ ಸ್ಪೇಷಲ್ ಪ್ಯಾಕೇಜ್ಗೆ ಮೊರೆ ಹೋಗಿರುವ ಸಿಎಂ, ಈ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲು ವಿಶೇಷ ವರದಿ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಕೇಂದ್ರದಿಂದ ಅನುದಾನ ತಂದು ಅಭಿವೃದ್ಧಿಪಡಿಸುವ ಭರವಸೆಯನ್ನು ಚುನಾವಣೆಗಳಲ್ಲಿ ನೀಡಲಾಗಿತ್ತು. ಅದರಂತೆ, ಕೇಂದ್ರದಿಂದ ವಿಶೇಷ ಅನುದಾನ ಪಡೆದು ಬಜೆಟ್ನಲ್ಲಿ ಭರಪೂರ ಯೋಜನೆ ಘೋಷಣೆ ಮಾಡಲು ಸಿಎಂ ತೀರ್ಮಾನಿಸಿದ್ದಾರೆ.