ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ ತಡೆಯಲು ಹಲೋ ನೇಬರ್ ಯೋಜನೆ, ಡ್ರಗ್ಸ್ ದಂಧೆ ತಡೆಯಲು ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ಸೇರಿ ಬೆಂಗಳೂರು ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಕಾರ್ಯಪ್ರವೃತ್ತರಾಗಿದ್ದಾರೆ. ಶುಕ್ರವಾರ ವಿಜಯವಾಣಿ ಕಚೇರಿಯಲ್ಲಿ ಆಯೋಜಿಸಿದ್ದ ಫೋನ್ಇನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಮಿಷನರ್, ಪೊಲೀಸ್ ಇಲಾಖೆ ಕಾರ್ಯವೈಖರಿ, ಭ್ರಷ್ಟಾಚಾರ ಹಾಗೂ ಅಪರಾಧ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಹೇಗಿರಬೇಕು ಎಂಬುದರ ಕುರಿತು ಹಂಚಿಕೊಂಡ ಸಮಗ್ರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
- ಪೊಲೀಸ್ ಪರಿಶೀಲನಾ ಪ್ರಮಾಣಪತ್ರ (ಪಿವಿಸಿ) ಕೊಡಲು 450 ರೂ. ಶುಲ್ಕ ವಿಧಿಸಲಾಗುತ್ತಿದೆ. ಅಷ್ಟೊಂದು ಹಣ ಕೊಡಲು ನಿರುದ್ಯೋಗಿಗಳಿಗೆ ಕಷ್ಟವಾಗುತ್ತದೆ. ಈ ಪ್ರಮಾಣಪತ್ರವನ್ನು ಉಚಿತವಾಗಿ ಕೊಡುವ ವ್ಯವಸ್ಥೆ ಮಾಡಿದರೆ ಬಡವರಿಗೆ ಸಹಾಯವಾಗುತ್ತದೆ.
| ಲತಾ ಬೆಂಗಳೂರು ವಿ.ವಿ. ವಿದ್ಯಾರ್ಥಿನಿ
ಪಿವಿಸಿ ಪ್ರಮಾಣಪತ್ರಕ್ಕೆ ವಿಧಿಸುವ 450 ರೂ. ಶುಲ್ಕವನ್ನು ಕಡಿಮೆಗೊಳಿಸುವಂತೆ ಲಿಖಿತವಾಗಿ ಸರ್ಕಾರದ ಗಮನಕ್ಕೆ ತರಬಹುದು. ನಾವು ಇದನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರುತ್ತೇವೆ.
- ಕೆಂಗೇರಿ ವ್ಯಾಪ್ತಿಯಲ್ಲಿ ಮೊಬೈಲ್ ಕಳ್ಳತನ, ಗಾಂಜಾ ಮಾರಾಟ, ದರೋಡೆ ಸೇರಿ ಸಾಕಷ್ಟು ಅಪರಾಧ ಚಟುವಟಿಕೆಗಳು ನಡೆಯುತ್ತಿವೆ. ಇದನ್ನು ತಡೆಯಲು ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ…
| ವಿನೋದ್ ಕೆಂಗೇರಿ
ಮೊಬೈಲ್ ಹಾಗೂ ವಾಹನದ ರಕ್ಷಣೆ ಮಾಡಿಕೊಳ್ಳಿ. ವಾಹನಕ್ಕೆ ಜಿಪಿಎಸ್ ಸಾಧನ ಅಳವಡಿಸಿ. ಕೀಯನ್ನು ವಾಹನದಲ್ಲೇ ಬಿಟ್ಟು ಹೋಗಬೇಡಿ. ಇದುವರೆಗೆ ನಗರದಲ್ಲಿ ಕಳುವಾದ 3 ಸಾವಿರ ವಾಹನಗಳನ್ನು ಪತ್ತೆ ಮಾಡಿದ್ದೇವೆ. ಗಾಂಜಾ ಮಾರಾಟದ ಬಗ್ಗೆ 100ಕ್ಕೆ ಕರೆ ಮಾಡಿ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳುತ್ತೇವೆ.
- ನಮ್ಮ ಸಹೋದರಿಯನ್ನು ಬೆಂಗಳೂರಿನ ಉದ್ಯೋಗಿಯೊಬ್ಬರನ್ನು ವಿವಾಹವಾಗಿದ್ದರು. ಇದೀಗ ಪತಿ ಹಾಗೂ ಅವರ ಕಡೆಯವರ ಕಿರುಕುಳದಿಂದ ನಮ್ಮ ಸಹೋದರಿಗೆ ಸಮಸ್ಯೆಯಾಗಿದೆ. ನೀವು ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸಬಹುದೇ ?
| ಹೆಸರು ಹೇಳಲಿಚ್ಚಿಸದವರು ಬಳ್ಳಾರಿ ಜಿಲ್ಲೆ ಹೂವಿನಹಡಗಲಿ
ಇಂಥ ಸಮಸ್ಯೆಗಳನ್ನು ಬಗೆಹರಿಸಲೆಂದೇ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ವನಿತಾ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಅಲ್ಲಿಗೆ ಭೇಟಿ ನೀಡಿ ನಿಮ್ಮ ಕೌಟುಂಬಿಕ ಸಮಸ್ಯೆ ಹೇಳಿಕೊಂಡರೆ, ನ್ಯಾಯ ಒದಗಿಸುತ್ತೇವೆ.
- ಕೆ.ಆರ್. ಪುರದಲ್ಲಿರುವ ನಮ್ಮ ಮನೆಯಲ್ಲಿ ಕಳೆದ ವರ್ಷ ಚಿನ್ನಾಭರಣ ಸೇರಿ ಹಲವು ವಸ್ತುಗಳು ಕಳವಾಗಿದ್ದವು. ಪೊಲೀಸರು ಇದುವರೆಗೆ ಆರೋಪಿಯನ್ನು ಪತ್ತೆಹಚ್ಚುವಲ್ಲಿ ವಿಫಲವಾಗಿದ್ದಾರೆ.
| ಅರುಣ್ ಕುಮಾರ್ ಬೆಂಗಳೂರು
ಕೆಲವೊಮ್ಮೆ ಕಳ್ಳರು ಕದ್ದ ಚಿನ್ನವನ್ನು ಚಿನಿವಾರರಿಗೆ ಮಾರಿ ಅದನ್ನು ಕರಗಿಸುತ್ತಾರೆ. ಇದರಿಂದ ಕದ್ದ ಚಿನ್ನಾಭರಣ ಪತ್ತೆ ಹಚ್ಚುವುದು ಕಷ್ಟವಾಗುತ್ತದೆ. ನಿಮ್ಮ ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಆ ವಿಭಾಗದ ಡಿಸಿಪಿಗೆ ಸೂಚನೆ ನೀಡುತ್ತೇನೆ.
ಪ್ರತಿನಿತ್ಯ ಕೆಲಸದ ನಿಮಿತ್ತ ನಾನು ಯಲಹಂಕದಿಂದ ಹುಣಸನಹಳ್ಳಿಗೆ ಹೋಗುತ್ತೇನೆ. 298 ನಂಬರ್ನ ಬಸ್ನಲ್ಲಿ ಜೇಬುಗಳ್ಳತನ ಹೆಚ್ಚಾಗುತ್ತಿದೆ. ಬಾಗಲೂರು ಕ್ರಾಸ್ ಬಳಿ ಇಂಥ ಪ್ರಕರಣಗಳು ಹೆಚ್ಚಾಗಿವೆ. ಇದರಿಂದ ಆತಂಕಗೊಂಡಿದ್ದೇವೆ. ಈ ಬಗ್ಗೆ ಪೊಲೀಸರು ಏಕೆ ಕ್ರಮ ಕೈಗೊಳ್ಳುತ್ತಿಲ್ಲ?
| ದೀಪಿಕಾ ಯಲಹಂಕ
ಈ ವಿಚಾರವನ್ನು ಸಂಬಂಧಿಸಿದ ಡಿಸಿಪಿ ಗಮನಕ್ಕೆ ತರುತ್ತೇನೆ. ಜನಸಂಚಾರ ಹೆಚ್ಚಾಗಿರುವ ಸಮಯಗಳಲ್ಲಿ ಮಫ್ತಿಯಲ್ಲಿ ಪೇದೆಗಳನ್ನು ಆ ಮಾರ್ಗದಲ್ಲಿ ಗಸ್ತು ತಿರುಗಲು ಸೂಚಿಸುತ್ತೇನೆ. ಇದನ್ನು ಬಿಎಂಟಿಸಿ ಅಧಿಕಾರಿಗಳ ಗಮನಕ್ಕೂ ತಂದು, ಆ ಬಸ್ನಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಸೂಚಿಸುತ್ತೇನೆ.
- 2018ರಲ್ಲಿ ಕೆ.ಜಿ. ಹಳ್ಳಿ ಬಳಿ ಹೋಗುತ್ತಿದ್ದಾಗ ರಸ್ತೆ ಮಧ್ಯೆ ದುಷ್ಕರ್ವಿುಗಳು ದರೋಡೆ ಮಾಡಿ, ಹಣ ಹಾಗೂ ಇತರ ವಸ್ತುಗಳನ್ನು ಕಸಿದುಕೊಂಡಿದ್ದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಏಕೆ?
| ಹೆಸರು ಹೇಳಲು ಇಚ್ಚಿಸದವರು ಕೆ.ಜಿ. ಹಳ್ಳಿ ನಿವಾಸಿ
ಆ ವ್ಯಾಪ್ತಿಯ ಡಿಸಿಪಿ ಹಾಗೂ ಎಸಿಪಿಗಳಿಗೆ ಈ ಪ್ರಕರಣ ಸದ್ಯ ಯಾವ ಹಂತದಲ್ಲಿದೆ ಎಂಬುದನ್ನು ಪರಿಶೀಲಿಸಿ, ಆರೋಪಿಗಳನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ.
- ರಾಮಮೂರ್ತಿನಗರ ವ್ಯಾಪ್ತಿಯಲ್ಲಿ ದರೋಡೆ, ಸುಲಿಗೆ, ಕಳ್ಳತನ ಪ್ರಕರಣಗಳು ಮಿತಿಮೀರಿವೆ. ಪೊಲೀಸರು ಏಕೆ ಈ ಬಗ್ಗೆ ಕ್ರಮ ವಹಿಸುತ್ತಿಲ್ಲ?
| ಗಿರೀಶ್ ಕೆ.ಆರ್.ಪುರ ರಾಮಮೂರ್ತಿ ನಗರ
ಇನ್ಸ್ಪೆಕ್ಟರ್, ಬಾಣಸವಾಡಿ ಎಸಿಪಿ ಹಾಗೂ ಆ ವ್ಯಾಪ್ತಿಯ ಡಿಸಿಪಿಗೆ ರಾಮಮೂರ್ತಿ ನಗರದಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣ ಬಗ್ಗೆ ನಿಗಾ ಇಡುವಂತೆ ಸೂಚಿಸುತ್ತೇನೆ.
- ಪರಿಚಿತರ ಬಳಿ ಕೆಲ ವರ್ಷಗಳಿಂದ ಚೀಟಿ ಹಣ ಕಟ್ಟುತ್ತಿದ್ದೆ. ಆ ವ್ಯಕ್ತಿ ಹೆಚ್ಚಿನ ಬಡ್ಡಿ ನೀಡುವುದಾಗಿ ಆಮಿಷವೊಡ್ಡಿ ಸಾವಿರಾರು ರೂ. ಲಪಟಾಯಿಸಿದ್ದಾರೆ.
| ಫಣಿರಾಜ್ ಗಾಯತ್ರಿನಗರ
ಹೆಚ್ಚಿನ ಬಡ್ಡಿ ಹಣದ ಆಮಿಷಕ್ಕೊಳಗಾಗಿ ಹಣ ಹೂಡಿಕೆ ಮಾಡಬಾರದು. ಇಂತಹ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿದ್ದು, ಸಾರ್ವಜನಿಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರ ಸಂಖ್ಯೆ ಹೆಚ್ಚಾಗುತ್ತಿದೆ.
- ಈ ಸಮಸ್ಯೆ ಪರಿಹರಿಸಲು ಬೆಂಗಳೂರು ಪೊಲೀಸರು ಯಾವ ರೀತಿ ಕ್ರಮ ಕೈಗೊಂಡಿದ್ದಾರೆ?
| ಬಾಲಕೃಷ್ಣ ಬೆಂಗಳೂರು
ಪೊಲೀಸರು ಈಗಾಗಲೇ ಅಕ್ರಮವಾಗಿ ನೆಲೆಸಿರುವ ವಿದೇಶಿಗರನ್ನು ಪತ್ತೆ ಮಾಡುವ ಕಾರ್ಯ ಮುಂದುವರಿಸಿದ್ದಾರೆ. ಪತ್ತೆಯಾದವರನ್ನು ಅಕ್ರಮ ವಲಸಿಗರ ಕೇಂದ್ರದಲ್ಲಿಟ್ಟು (ಡಿಟೆನ್ಷನ್ ಸೆಂಟರ್) ಕೆಲ ಪ್ರಕ್ರಿಯೆ ಬಳಿಕ ಅವರನ್ನು ಅವರವರ ದೇಶಕ್ಕೆ ಗಡಿಪಾರು ಮಾಡಲಾಗುತ್ತದೆ.
- ದೂರು ನೀಡಿದರೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ. ಕೆಲ ಅಂಗಡಿಗಳಿಂದ ನಗರ ಪೊಲೀಸರು ಲಂಚ ಪಡೆಯುತ್ತಾರೆ. ಇದನ್ನು ತಡೆಗಟ್ಟಬೇಕಾದ ಅಗತ್ಯವಿದೆ.
| ಮಂಜುನಾಥ್ ಬೆಂಗಳೂರು
ಯಾವುದೇ ಕಾರಣಕ್ಕೂ ಪೊಲೀಸರಿಗೆ ಲಂಚ ಕೊಡಬೇಡಿ. ದೂರು ನೀಡಿದರೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಗೆ ಒಳಪಡಿಸುವುದು ಪೊಲೀಸರ ಕರ್ತವ್ಯವಾಗಿದೆ.
- ಮಾಧ್ವರ ಮಠದಲ್ಲಿ ಕೆಲ ತಿಂಗಳ ಹಿಂದೆ ಕಳ್ಳತನವಾಗಿತ್ತು. ಆದಷ್ಟು ಬೇಗ ಕಳ್ಳರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು.
| ಹೆಸರು ಹೇಳಲು ಇಚ್ಚಿಸದವರು ಜಯನಗರ ನಿವಾಸಿ
ಈ ಪ್ರಕರಣ ನನ್ನ ಗಮನದಲ್ಲಿದೆ. ಆದಷ್ಟು ಬೇಗ ಕಳ್ಳರನ್ನು ಪತ್ತೆ ಹಚ್ಚಲು ಕ್ರಮ ತೆಗೆದುಕೊಳ್ಳುವಂತೆ ಜಯನಗರ ಪೊಲೀಸರಿಗೆ ಸೂಚಿಸಿದ್ದು, ಕಳ್ಳರನ್ನು ಶೀಘ್ರದಲ್ಲಿ ಬಂಧಿಸಲಾಗುವುದು.