ಶ್ರವಣ್ಕುಮಾರ್ ನಾಳ ಮಂಗಳೂರು
ನೂರಾರು ಎಕರೆ ಹಡಿಲು, ಕೃಷಿ ಯೋಗ್ಯವಲ್ಲದ, ಜನವಸತಿ ನಿರ್ಮಾಣಕ್ಕೆ ಸೂಕ್ತವಾದ ಖಾಸಗಿ ಭೂಮಿಗೆ ಇನ್ನು ಜೀವ ಕಳೆ ಬರಲಿದೆ. ದ.ಕ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಖಾಸಗಿ ಭೂಮಿಯನ್ನು 50:50 ಒಪ್ಪಂದ ಆಧಾರದಲ್ಲಿ ಕರ್ನಾಟಕ ಗೃಹ ಮಂಡಳಿ ಲೇಔಟ್ ಮಾಡಿ ನಿವೇಶನ ಅಗತ್ಯವಿರುವವರಿಗೆ ಹಂಚಿಕೆ ಮಾಡುವ ಮಹತ್ತರ ಯೋಜನೆಗೆ ಮಂಗಳೂರಿನಲ್ಲಿ ಕೈ ಹಾಕಿದೆ.
ಒಪ್ಪಂದದ ಆಧಾರದಲ್ಲಿ ಭೂಮಾಲೀಕರಿಂದ ಉಚಿತವಾಗಿ ಭೂಮಿ ಪಡೆದು ಗೃಹ ಮಂಡಳಿಯು ಅದನ್ನು ಸಂಪೂರ್ಣ ಲೇಔಟ್ ಮಾಡುತ್ತದೆ. ಅಭಿವೃದ್ಧಿಪಡಿಸಿದ ನಂತರ ಒಟ್ಟು ಭೂಮಿಯ ಅರ್ಧದಷ್ಟು ಗೃಹ ಮಂಡಳಿ ಹಾಗೂ ಉಳಿದ ಅರ್ಧವನ್ನು ಭೂಮಾಲೀಕರಿಗೆ ನೀಡಲಾಗುತ್ತದೆ.
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಾದರೆ ಶೇ.50:50, ಗ್ರಾಮಾಂತರ ಭಾಗದಲ್ಲಾದರೆ ಶೇ.60 ಗೃಹ ಮಂಡಳಿ ಹಾಗೂ ಶೇ.40 ಭೂಮಾಲೀಕರಿಗೆ ಅಭಿವೃದ್ಧಿಪಡಿಸಿದ ಲೇಔಟ್ ದೊರೆಯಲಿದೆ. ಈಗಾಗಲೇ ರಾಜ್ಯದ 24 ಕಡೆ ಇಂತಹ ಯೋಜನೆ ಯಶಸ್ವಿಯಾಗಿದೆ. ದ.ಕ. ಜಿಲ್ಲೆಯಲ್ಲಿ ವಿವಿಧ ಕಡೆಗಳಲ್ಲಿ ಇಂತಹ ಪರಿಕಲ್ಪನೆ ಜಾರಿಗೆ ಗೃಹ ಮಂಡಳಿ ನಿರ್ಧರಿಸಿದ್ದು, ಮೊದಲ ಹಂತದಲ್ಲಿ ಸುರತ್ಕಲ್ ಸಮೀಪದ ಮಧ್ಯ ಗ್ರಾಮದಲ್ಲಿ ಅನುಷ್ಠಾನಕ್ಕೆ ಯೋಜನೆ ರೂಪುಗೊಂಡಿದೆ.
ಬೇಡಿಕೆ ಸರ್ವೇ ಆರಂಭ: ಮಧ್ಯ ಗ್ರಾಮದಲ್ಲಿ ಸುಮಾರು 31.57 ಎಕರೆ ಖಾಸಗಿ ಜಮೀನಿನಲ್ಲಿ 474 ನಿವೇಶನವನ್ನು 50:50 (ಭೂ ಮಾಲೀಕರಿಗೆ: ಗೃಹ ಮಂಡಳಿಗೆ) ಅನುಪಾತದಲ್ಲಿ ಎಲ್ಲ ಮೂಲಸೌಕರ್ಯ ಒಳಗೊಂಡ ವಸತಿ ಯೋಜನೆಗೆ ಕರ್ನಾಟಕ ಗೃಹ ಮಂಡಳಿ ತೀರ್ಮಾನಿಸಿದೆ. ಇದಕ್ಕಾಗಿ ಸಾರ್ವಜನಿಕರಿಂದ ಬೇಡಿಕೆ ಸರ್ವೇ ಆರಂಭಿಸಲಾಗಿದೆ.
ನಿವೇಶನ ಬಯಸಿ ಸಾರ್ವಜನಿಕರು ಸಲ್ಲಿಸುವ ಅರ್ಜಿ ಆಧಾರದಲ್ಲಿ ಬೇಡಿಕೆ ಬಂದರೆ ಅದರಂತೆ ಗೃಹಮಂಡಳಿಯು ಲೇಔಟ್ ಮಾಡಿ ಲಾನುಭವಿಗಳಿಗೆ ನೀಡಲಿದೆ. ಈಗಾಗಲೇ 550 ಅರ್ಜಿ ನಿವೇಶನಕ್ಕಾಗಿ ಸಲ್ಲಿಕೆಯಾಗಿದೆ.
ಉಡುಪಿ ಜಿಲ್ಲೆಯಲ್ಲೂ ಸಾರ್ವಜನಿಕರಿಂದ ಬೇಡಿಕೆ ಸರ್ವೇ ಆರಂಭಗೊಂಡಿದ್ದು, ಸಾರ್ವಜನಿಕರು ಹಾಗೂ ಭೂ ಮಾಲೀಕರಿಂದ ಮೊದಲ ಹಂತದ ಪ್ರತಿಕ್ರಿಯೆ ದೊರಕಿದೆ.
ಪರಿಹಾರದ ಬದಲು ಭೂಮಿ ಹಂಚಿಕೆ
ಮಂಗಳೂರು ಪಾಲಿಕೆ ಹಾಗೂ ಇತರ ನಗರಾಭಿವೃದ್ಧಿ ಪ್ರಾಧಿಕಾರಗಳ ವ್ಯಾಪ್ತಿಗೆ ಬರುವ ಮಾಲೀಕರಿಗೆ ಅಭಿವೃದ್ಧಿಪಡಿಸಿದ ನಿವೇಶನವನ್ನು ಸಮಾನ ಮಾದರಿಯಲ್ಲಿ (50:50) ಹಂಚಿಕೆ ಮಾಡಲಾಗುತ್ತದೆ. ನೀರು, ವಿದ್ಯುತ್, ಚರಂಡಿ ಸೇರಿದಂತೆ ಎಲ್ಲ ಸೌಲಭ್ಯವನ್ನು ಆ ಜಮೀನಿಗೆ ಗೃಹ ಮಂಡಳಿ ಕಲ್ಪಿಸಲಿದೆ. ನಗದು ಪರಿಹಾರದ ಬದಲು ಅಭಿವೃದ್ಧಿ ಪಡಿಸಿದ ಜಮೀನನ್ನೇ ಭೂಮಾಲೀಕರಿಗೆ ನೀಡುವ ಹಿನ್ನೆಲೆಯಲ್ಲಿ ಭೂಮಾಲೀಕರಿಗೂ ಇದರಿಂದ ಅನುಕೂಲ.
ಭೂ ಮಾಲೀಕ–ಗೃಹ ಮಂಡಳಿಗೆ ಲಾಭ
ಈ ಯೋಜನೆಯಿಂದ ಅಗತ್ಯ ಲಾನುಭವಿಗಳಿಗೆ ಸುಲಭದಲ್ಲಿ ನಿವೇಶನ ದೊರೆಯುವುದು ಒಂದೆಡೆಯಾದರೆ ಭೂ ಮಾಲೀಕರಿಗೆ ಹಾಗೂ ಗೃಹ ಮಂಡಳಿಗೂ ಲಾಭ ಇದೆ. ಭೂಮಾಲೀಕರಿಂದ ಪಡೆದ ಭೂಮಿಗೆ ಗೃಹ ಮಂಡಳಿ ಹಣ ಪಾವತಿಸುವುದಿಲ್ಲ. ಮಾಲೀಕರು ನೀಡಿದ ಭೂಮಿಯಲ್ಲಿ ಅರ್ಧದಷ್ಟು ಲೇಔಟ್ ಮಾಡಿ, ಅದಕ್ಕೆ ಪರ್ಮಿಷನ್ ಆಗಿ, ವಿದ್ಯುತ್, ಚರಂಡಿ, ಕುಡಿಯುವ ನೀರು ಸೇರಿದಂತೆ ಎಲ್ಲ ವ್ಯವಸ್ಥೆ ಇರುವ ನಿವೇಶನದ ಹಕ್ಕು ಭೂ ಮಾಲೀಕರಿಗೆ ದೊರೆಯುತ್ತದೆ. ಉಳಿದ ನಿವೇಶನದ ಹಕ್ಕು ಗೃಹ ಮಂಡಳಿಗೆ ಸಿಗುತ್ತದೆ, ಈ ನಿವೇಶನದ ಮಾರ್ಕೆಟಿಂಗ್ ಕೂಡ ಗೃಹ ಮಂಡಳಿಯೇ ನಡೆಸುತ್ತದೆ.
ಖಾಸಗಿ ಭೂಮಿಯನ್ನು 50:50 ಒಪ್ಪಂದ ಆಧಾರದಲ್ಲಿ ಕರ್ನಾಟಕ ಗೃಹ ಮಂಡಳಿ ಲೇಔಟ್ ಮಾಡಿ ನಿವೇಶನ ಅಗತ್ಯವಿರುವವರಿಗೆ ಹಂಚಿಕೆ ಮಾಡುವ ಮಹತ್ತರ ಯೋಜನೆ ಇದಾಗಿದ್ದು, ದ.ಕ ಜಿಲ್ಲೆಯಲ್ಲಿ ಸುರತ್ಕಲ್ ಸಮೀಪದ ಮಧ್ಯ ಗ್ರಾಮದಲ್ಲಿ ಅನುಷ್ಠಾನಕ್ಕೆ ಯೋಜನೆ ರೂಪುಗೊಂಡಿದೆ.
ವಿಜಯ್ ಕುಮಾರ್, ಸಹಾಯಕ ಕಾರ್ಯಪಾಲ ಅಭಿಯಂತ, ಕರ್ನಾಟಕ ಗೃಹ ಮಂಡಳಿ, ಮಂಗಳೂರು
………….
ಖಾಸಗಿ ಭೂಮಿಯನ್ನು ಕರ್ನಾಟಕ ಗೃಹ ಮಂಡಳಿಯಿಂದ 50:50 ಆಧಾರದಲ್ಲಿ ಲೇಔಟ್ ಮಾಡುವ ಯೋಜನೆಗೆ ಸಾರ್ವಜನಿಕರಿಂದ ಬೇಡಿಕೆ ಸರ್ವೇ ಆರಂಭಿಸಲಾಗಿದೆ. 20 ಎಕರೆಗಿಂತ ಜಾಸ್ತಿ ಭೂಮಿ ಸಿಕ್ಕರೆ ಹೆಚ್ಚು ಅನುಕೂಲ. ಉಡುಪಿಯಲ್ಲಿ ಭೂ ಮಾಲೀಕರಿಂದ ಮೊದಲ ಹಂತದ ಪ್ರತಿಕ್ರಿಯೆ ದೊರಕಿದೆ.
ಸಹನಾ, ಸಹಾಯಕ ಕಾರ್ಯಪಾಲ ಅಭಿಯಂತರು, ಕರ್ನಾಟಕ ಗೃಹ ಮಂಡಳಿ, ಉಡುಪಿ