ಕಾರವಾರ: ಸುಪ್ರೀಂ ಕೋರ್ಟಿನಲ್ಲಿ ತೀರ್ಮಾನ ಆಗುವವರೆಗೆ ಅರಣ್ಯ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾನ ಮಾಡಿದ್ದಾರೆ. ಭಾನುವಾರ ಶಿರಸಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಅರಣ್ಯ ರಕ್ಷಣೆ ಮತ್ತು ಜೀವ ವೈವಿಧ್ಯತೆಯನ್ನು ಒಟ್ಟಿಗೇ ತೆಗೆದುಕೊಂಡು ಹೋಗುವ ಅವಶ್ಯಕತೆ ಇದೆ ಎಂದು ಹೇಳಿದರು.
ಈಗಾಗಲೇ ವಿಚಾರ ಸುಪ್ರೀಂ ಕೋರ್ಟ್ನಲ್ಲಿದೆ. ಅರಣ್ಯ ಹಕ್ಕು ಕಾಯ್ದೆಯಡಿ ಮೂರು ತಲೆಮಾರಿನ ದಾಖಲೆ ಕೊಡಬೇಕು ಎಂಬ ನಿಯಮವಿದೆ. ಅದನ್ನು ಒಂದು ತಲೆಮಾರಿಗೆ ಇಳಿಸಬೇಕು ಎಂದು ನಾವು ಕೇಂದ್ರ ಸರ್ಕಾರಕ್ಕೆ ಅಭಿಪ್ರಾಯ ತಿಳಿಸಿದ್ದೇವೆ. ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ವರದಿ ನೀಡಲಿದೆ. ಆದರೆ, ಅಲ್ಲಿಯವರೆಗೆ ಅತಿಕ್ರಮಣದಾರರಿಗೆ ತೊಂದರೆಕೊಡುವ ಪ್ರಶ್ನೆಯೇ ಇಲ್ಲ ಎಂದರು.
ಅತಿಕ್ರಮಣ ಸಮಸ್ಯೆಯಿಂದ ಜಿಲ್ಲೆಯಲ್ಲಿ ಪರಿಹಾರ ನೀಡಲು ಸಾಧ್ಯವಾಗುತ್ತಿಲ್ಲ ಎಂದರು. ಕಳೆದ ವರ್ಷ ನೆರೆಯಿಂದ ಕಳಚೆ ಗ್ರಾಮಕ್ಕೆ ಹಾನಿಯಾಗಿದೆ. ಅಲ್ಲಿ ಅರಣ್ಯೀಕರಣಕ್ಕೆ ಗ್ರೀನ್ ಬಜೆಟ್ ನಲ್ಲಿ ಅವಕಾಶ ನೀಡಿದ್ದೇನೆ.ಗ್ರಾಮ ಸ್ಥಳಾಂತರಕ್ಕೆ ಅನುದಾನ ನೀಡಲು ಬದ್ಧವಾಗಿದ್ದೇನೆ ಎಂದರು.