| ವಿಲಾಸ ಮೇಲಗಿರಿ ಬೆಂಗಳೂರು
ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಅಭ್ಯರ್ಥಿಗಳು ನಾನಾ ಆಮಿಷ ಒಡ್ಡುತ್ತಿರುವುದು ಮಾಮೂಲು. ಈ ಬೆಳವಣಿಗೆ ನಡುವೆಯೇ ಜ್ಯೋತಿಷಿಗಳಿಗೂ ಭರ್ಜರಿ ಬೇಡಿಕೆ ಬಂದಿದೆ. ರಾಜಕೀಯ ನಾಯಕರು ಚುನಾವಣೆಯಲ್ಲಿ ಗೆಲ್ಲಲು ಜ್ಯೋತಿಷಿಗಳ ಮೊರೆ ಹೋಗುತ್ತಿದ್ದಾರೆ. ಜತೆಗೆ ಬಗೆಬಗೆಯ ಪೂಜೆ, ಹೋಮ-ಹವನ ಭರಾಟೆಯೂ ಜೋರಾಗಿದೆ. ಟಿಕೆಟ್ ಆಕಾಂಕ್ಷಿಗಳು ಟೆಂಪಲ್ ರನ್ ಅಂತೂ ಇತ್ತೀಚೆಗೆ ಸರ್ವೆಸಾಮಾನ್ಯವಾಗಿದೆ. ಹಳ್ಳಿಗಳಲ್ಲಿನ ದೇವಾಲಯಗಳು ರಾಜಕೀಯ ನಾಯಕರ ಭೇಟಿಯಿಂದ ಝುಗಮಗಿಸುತ್ತಿವೆ. ದೇವಸ್ಥಾನಗಳಿಗೆ ಭೇಟಿ ನೀಡುವ ಮೂಲಕ ಆಯಾ ಸಮುದಾಯಗಳ ಮತ ಸೆಳೆಯುವ ತಂತ್ರದ ಭಾಗವಾಗಿ ರಾಜಕೀಯ ನಾಯಕರು ಭಕ್ತಿ ಪರಕಾಷ್ಠೆ ಪ್ರದರ್ಶಿಸುತ್ತಿದ್ದಾರೆ.
ಎಲ್ಲದಕ್ಕೂ ಜ್ಯೋತಿಷ್ಯ: ಟಿಕೆಟ್ ಸಿಗುತ್ತದೆಯೋ ಇಲ್ಲವೋ ಎಂಬುದರಿಂದ ಹಿಡಿದು ಪ್ರತಿಯೊಂದು ಹಂತಕ್ಕೂ ರಾಜಕೀಯ ನಾಯಕರು ಜ್ಯೋತಿಷ್ಯ ಕೇಳುತ್ತಿದ್ದಾರೆ. ಮತದಾರರಿಗೆ ಗಿಫ್ಟ್ ಯಾವಾಗ ನೀಡಬೇಕು? ಅದಕ್ಕೇನಾದರೂ ಮುಹೂರ್ತ ಫಿಕ್ಸ್ ಮಾಡುತ್ತೀರಾ? ಮತದಾರರ ಭೇಟಿಗೆ ಹೋಗುವಾಗ ಯಾವ ಬಣ್ಣದ ಬಟ್ಟೆ ಧರಿಸಬೇಕು? ಬೆಳಗ್ಗೆ ಯಾವ ದಿಕ್ಕಿನಿಂದ ಪ್ರಯಾಣ ಬೆಳೆಸಬೇಕು ಎಂದು ಕೇಳುವವರೂ ಇದ್ದಾರೆ. ಮನೆಯಿಂದ ಹೊರಡುವ ಮುನ್ನ ಯಾವ ದೇವರ ಪೂಜೆ ಮಾಡಬೇಕು ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ ಪಾಲನೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಮೊಬೈಲ್-ಚಾರ್ಜರ್ ಒಂದೇ ಬಾಕ್ಸ್ನಲ್ಲಿದ್ರೆ ಪ್ರತ್ಯೇಕ ತೆರಿಗೆ ಇಲ್ಲ: ಹೈಕೋರ್ಟ್ ಆದೇಶ
ಯಜ್ಞ, ಹೋಮ, ಹವನ: ಗೆಲುವಿನ ದಾರಿ ಸುಗಮವಾಗಲಿ ಎಂದು ಸುದರ್ಶನ ಹೋಮ, ಶನೇಶ್ಚರನ ಜಪ.. ಹೀಗೆ ನಾನಾ ಬಗೆಯ ಪೂಜೆ-ಹೋಮಗಳನ್ನು ಮಾಡಿಸಲಾಗುತ್ತಿದೆ. ಜತೆಗೆ ವಿವಿಧ ದೇವಸ್ಥಾನ-ಮಠಗಳಿಗೆ ಭೇಟಿ ಕೊಡುವುದು, ಮನೆದೇವರ ಪೂಜೆ ಮಾಡುವುದು ಕೂಡ ಸಾಂಗೋಪಸಾಂಗವಾಗಿ ನಡೆದಿವೆ.
ಯಂತ್ರ, ಮಂತ್ರ, ತಾಯತ: ಗೆಲುವಿನ ಹಿನ್ನೆಲೆಯಲ್ಲಿ ಶತ್ರು ಸಂಹಾರ ಯಾಗವನ್ನೂ ಕೆಲವರು ಮಾಡಿಸುತ್ತಿದ್ದಾರೆ. ಕೆಲವು ರಾಜಕಾರಣಿಗಳು ಅದಕ್ಕಾಗಿ ಕೇರಳದ ಜ್ಯೋತಿಷಿಗಳ ಮೊರೆ ಹೋಗಿದ್ದಾರೆ ಎನ್ನಲಾಗುತ್ತದೆ. ಈ ಹಿಂದೆಯೂ ಅನೇಕ ರಾಜಕಾರಣಿಗಳು ಕೇರಳದಲ್ಲಿ ಯಜ್ಞ, ಯಾಗಗಳನ್ನು ಮಾಡಿಸಿದ್ದರು. ಜತೆಗೆ ರಾಜ್ಯದ ಪ್ರತಿಷ್ಠಿತ ದೇವಸ್ಥಾನಗಳಲ್ಲೂ ಹೋಮ ಮಾಡಿಸುತ್ತಿದ್ದಾರೆ. ಕೆಲವರು ಶತ್ರು ನಾಶಕ್ಕೆ ಮಾಟ ಮಂತ್ರ ಮಾಡಿಸುವುದೂ ನಡೆಯುತ್ತಿದೆ. ಲಿಂಬೆಹಣ್ಣು, ಪಂಚಲೋಹದ ತಾಯತ, ಕಾಯಿ, ಕರಿದಾರದಿಂದ ಮಾಡಿದ ಮಾಟ ಮಂತ್ರ ಮಾಡಿಸಿ ಓಡಾಡುವ ದಾರಿಯಲ್ಲಿ, ಶತ್ರುಗಳ ಕಚೇರಿ, ಮನೆ ಸುತ್ತಮುತ್ತ ಹಾಕುತ್ತಿರುವ ಪ್ರಕರಣಗಳೂ ವರದಿಯಾಗುತ್ತಿವೆ. ಇತ್ತೀಚೆಗೆ ರಾಯಚೂರು ಜಿಲ್ಲೆ ಲಿಂಗಸಗೂರು ಜೆಡಿಎಸ್ ಅಭ್ಯರ್ಥಿ ಸಿದ್ದು ಬಂಡಿ ಅವರ ಮನೆ ಮತ್ತು ಕಚೇರಿ ಮುಂದೆ ಮಾಟ ಮಂತ್ರ ಮಾಡಿಸಿರುವ ಪ್ರಕರಣ ದೊಡ್ಡ ಸುದ್ದಿಯಾಗಿದೆ. ಇದು ಆಡಳಿತ ಮತ್ತು ಪ್ರತಿಪಕ್ಷಗಳ ಅಭ್ಯರ್ಥಿಗಳ ನಡುವಿನ ವಾಗ್ಯುದ್ಧಕ್ಕೂ ಕಾರಣವಾಗಿದೆ.
ಜಾತಕ ಹಿಡಿದು ರಾಜಕೀಯ ಭವಿಷ್ಯ: ಅನೇಕ ರಾಜಕಾರಣಿಗಳು ಜಾತಕ ಹಿಡಿದು ಜ್ಯೋತಿಷಿಗಳನ್ನು ಭೇಟಿ ಮಾಡಿ ರಾಜಕೀಯ ಭವಿಷ್ಯ ಕೇಳುತ್ತಿದ್ದಾರೆ. ಜ್ಯೋತಿಷಿಗಳ ಸಲಹೆಯಂತೆ ವಿವಿಧ ದೇವಾಲಯ ಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ. ಕೆಲವರು ಕೊಳ್ಳೆಗಾಲದ ಜ್ಯೋತಿಷಿಗಳಿಂದಲೂ ಸಲಹೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಹಂಪಿ ಸ್ಮಾರಕಗಳ ಮೇಲೆ ನೃತ್ಯ ಪ್ರಕರಣ: FIR ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೋರಿದ ಯುವಕ
ಮಂಗಳಮುಖಿಯರಿಗೆ ಮೊರೆ: ನಾಮಪತ್ರ ಸಲ್ಲಿಕೆ, ಫಲಿತಾಂಶದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ರಾಜಕಾರಣಿಗಳು ಜ್ಯೋತಿಷಿಗಳ ಮೊರೆ ಹೋಗುತ್ತಾರೆ. ಮತ್ತೆ ಕೆಲವರು ಮಂಗಳಮುಖಿಯರಿಗೆ ಉಡಿ ತುಂಬುವ ಮೂಲಕ ವಿಶೇಷ ಪೂಜೆ ಪುನಸ್ಕಾರ ಮಾಡುತ್ತಾರೆ. ಸೀರೆ, ಬೆಳ್ಳಿ ದೀಪ, ಅರಿಶಿಣ-ಕುಂಕುಮ ಬಟ್ಟಲು ಸೇರಿ ಇತ್ಯಾದಿ ವಸ್ತುಗಳನ್ನು ನೀಡಿ ಆಶೀರ್ವಾದ ಪಡೆದುಕೊಳ್ಳುತ್ತಾರೆ.
ಪಟ್ಟಿ ಬಿಡುಗಡೆಗೂ ಒಳ್ಳೇ ಟೈಂ
ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೂ ಪಕ್ಷಗಳು ಜ್ಯೋತಿಷಿಗಳ ಮೊರೆ ಹೋಗುತ್ತವೆ. ಎಷ್ಟು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಬೇಕು? ಯಾವ ದಿನಾಂಕ, ಸಮಯದಲ್ಲಿ ಮಾಡಬೇಕು ಎಂಬುದನ್ನು ಕೇಳಿಯೇ ಪಟ್ಟಿ ಪ್ರಕಟಿಸುವ ಪದ್ಧತಿ ಬಹುತೇಕ ಎಲ್ಲ ಪಕ್ಷಗಳಲ್ಲೂ ಇದೆ.
ಬಿ ಫಾರ್ಮ್ಗೂ ಪೂಜೆಯ ಅದೃಷ್ಟ
ಅಭ್ಯರ್ಥಿಗಳು ಪಕ್ಷಗಳಿಂದ ತಾವು ಪಡೆದುಕೊಳ್ಳುವ ಬಿ ಫಾಮ್ರ್ ಅನ್ನು ದೇವಸ್ಥಾನಗಳಿಗೆ ತೆಗೆದುಕೊಂಡು ಹೋಗಿ ಪೂಜೆ ನೆರವೇರಿಸುತ್ತಾರೆ. ಬಳಿಕ ನಾಮಪತ್ರ ಸಲ್ಲಿಸಲು ಜ್ಯೋತಿಷಿಗಳ ಬಳಿ ಸಮಯ ಕೇಳುತ್ತಾರೆ.
ಕೈ ಚಿಹ್ನೆಯಲ್ಲೂ ಅದೃಷ್ಟ ರೇಖೆ
ಜ್ಯೋತಿಷಿಗಳ ಸಲಹೆಯಂತೆ ಕಾಂಗ್ರೆಸ್ ಚಿಹ್ನೆಯಾದ ‘ಹಸ್ತ’ದಲ್ಲಿ ಅದೃಷ್ಟ ರೇಖೆಯೊಂದನ್ನು ಸೇರ್ಪಡೆ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಈ ಹಿಂದಿನ ಕಾಂಗ್ರೆಸ್ ಚಿಹ್ನೆಯಲ್ಲಿ ಅಡ್ಡಲಾಗಿ ಮೂರು ಗೆರೆಗಳಿದ್ದು, ಅದಕ್ಕೆ ಈಗ ಲಂಬವಾಗಿ ಮತ್ತೊಂದು ಗೆರೆ ಎಳೆಯಲಾಗಿದೆ. ಚುನಾವಣೆಯಲ್ಲಿ ಕಾಂಗ್ರೆಸ್ಗೆ ಅದೃಷ್ಟ ಒಲಿಯಲಿದೆ ಎಂಬ ಜ್ಯೋತಿಷಿಗಳ ಸಲಹೆಯನ್ನು ಪರಿಗಣಿಸಿ ಈ ರೀತಿ ಮಾಡಲಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಕಾಣೆಯಾದ ಹಸು ಹುಡುಕಿಕೊಂಡು ಹೋದ ರೈತನಿಗಾಗಿ ಕಾಡಲ್ಲಿ ಕಾದಿದ್ದ ಜವರಾಯ!
ಜೆಡಿಎಸ್ ಗಂಗಾಪೂಜೆ!
ಜೆಡಿಎಸ್ ಕಚೇರಿಯಲ್ಲಿ ಗಂಗಾ ಪೂಜೆ ಹಿನ್ನೆಲೆಯಲ್ಲಿ ಬ್ರಹ್ಮ ಕಳಸ ಪ್ರತಿಷ್ಠಾಪನೆ ಮಾಡಲಾಗಿದೆ. ವರ್ಷವಿಡೀ ಈ ಕಳಸಕ್ಕೆ ಪೂಜೆ ನಡೆಯುತ್ತಿದೆ. 10 ಅಡಿ ಎತ್ತರದ 500 ಲೀಟರ್ ಜಲ ತುಂಬಿರುವ ಕಳಸಕ್ಕೆ ನಿತ್ಯ ಶಾಸ್ತೊ್ರೕಕ್ತವಾಗಿ ಪೂಜೆ ನೆರವೇರಿಸಲಾಗುತ್ತಿದೆ.
ಇತ್ತೀಚೆಗಷ್ಟೇ ಮದ್ವೆಯಾಗಿದ್ದ ಯುವ ವೈದ್ಯೆ ಫ್ರೆಂಡ್ ಫ್ಲ್ಯಾಟ್ನಲ್ಲಿ ಶವವಾಗಿ ಪತ್ತೆ
VIDEO | ಸಾರ್ವಜನಿಕವಾಗಿಯೇ ಗರ್ಲ್ಫ್ರೆಂಡ್ಗೆ ಲಿಪ್ ಕಿಸ್ ಕೊಟ್ಟ ಹೃತಿಕ್ ರೋಷನ್!