ಹುಬ್ಬಳ್ಳಿ: ಕಾರ್ಗಿಲ್ ಯುದ್ಧದಲ್ಲಿ ತಮ್ಮ ಜೀವವನ್ನೇ ದೇಶಕ್ಕೆ ಸಮರ್ಪಿಸಿದ ಹುತಾತ್ಮ ಯೋಧರ ಸ್ಮರಣೆ ಅಗತ್ಯ ಎಂದು ಸುಬೇದಾರ ಮೇಜರ್ ರಷ್ಪಾಲ್ ಶರ್ಮಾ ಹೇಳಿದರು.
ನಗರದ ಶ್ರೀ ಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯ ಮತ್ತು ಎಚ್ಎಸ್ಕೆ ವಿಜ್ಞಾನ ಸಂಸ್ಥೆಯ ಎನ್ಸಿಸಿ ಘಟಕ ಗುರುವಾರ ಏರ್ಪಡಿಸಿದ್ದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೈನಿಕರು ಕುಟುಂಬದಿಂದ ದೂರವಿದ್ದು ಹಗಲು-ರಾತ್ರಿ ಎನ್ನದೇ ಗಡಿ ಕಾಯುತ್ತಾರೆ. ದೇಶಕ್ಕಾಗಿ ಅವರ ತ್ಯಾಗ ದೊಡ್ಡದು. ಯುದ್ಧದ ಸಂದರ್ಭದಲ್ಲಿ ಜೀವವನ್ನೇ ಪಣಕ್ಕಿಡಲು ಸೈನಿಕರು ಹಿಂಜರಿಯುವುದಿಲ್ಲ ಎಂದರು.
ಕಾಲೇಜಿನ ಎನ್ಸಿಸಿ ಅಧಿಕಾರಿ ಚಂದ್ರಶೇಖರ ಪಾಟೀಲ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಸೈನಿಕರು ಕೆಚ್ಚೆದೆಯಿಂದ ಹೋರಾಡಿ, ಪ್ರಾಣತ್ಯಾಗ ಮಾಡಿದ್ದನ್ನು ವಿವರಿಸಿದರು. ಸೇನಾ ಪಡೆಗೆ ಸೇರುವಂತೆ ಮತ್ತು ಅಗತ್ಯ ಬಿದ್ದರೆ ಪ್ರಾಣ ತ್ಯಾಗಕ್ಕೂ ಮುಂದಾಗುವಂತೆ ಸೈನಿಕರ ಪತ್ನಿ ಮತ್ತು ತಾಯಂದಿರರು ಬೆಂಬಲಿಸುತ್ತಿರುವುದರಿಂದಲೇ ಸೈನಿಕರ ಆತ್ಮಬಲ ಹೆಚ್ಚುತ್ತಿದೆ ಎಂದರು.
ಪ್ರಾಚಾರ್ಯು ಡಾ. ಉಮಾ ನೇರ್ಲೆ ಅಧ್ಯಕ್ಷತೆ ವಹಿಸಿದ್ದರು. ಸುಬೇದಾರ ರಾಮಚಂದ್ರ ಪಾಟೀಲ ಪಾಲ್ಗೊಂಡಿದ್ದರು.
ಕ್ಯಾಡೆಟ್ಗಳ ಸನ್ಮಾನ:
ಅಗ್ನಿಪಥ್ ಸೇನಾ ತರಬೇತಿಗೆ ಆಯ್ಕೆಯಾಗಿರುವ ಕಾಲೇಜಿನ ಎನ್ಸಿಸಿ ಕ್ಯಾಡೆಟ್ಗಳಾದ ಸಿದ್ಧಾರ್ಥ ಮಾನೆ, ಅಭಿಷೇಕ ಕರಿಗಾರ, ಸಚಿನ್ ಚಿನ್ನಟ್ಟಿ, ಪ್ರಕಾಶ ಸಾವಳಗಿ ಅವರನ್ನು ಸನ್ಮಾನಿಸಲಾಯಿತು. ಕ್ಯಾಡೆಟ್ಗಳಾದ ನಾಗರತ್ನಾ ಮತ್ತು ಜ್ಯೋತಿ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಸಂಜನಾ ಪಾಟೀಲ ಸ್ವಾಗತಿಸಿದರು. ತೇಜಸ್ವಿನಿ ನಾಯಕ ನಿರೂಪಿಸಿದರು. ತೇಜಸ್ವಿನಿ ಬೆಲ್ಲದ ವಂದಿಸಿದರು.