ತರೀಕೆರೆ: ತಾಲೂಕಿನ ಕೆರೆಹೊಸಳ್ಳಿ ಗ್ರಾಮದಲ್ಲಿ ಫೆ.21 ಮತ್ತು 22ರಂದು ನೂತನ ಶಿವಾಲಯದ ಪ್ರವೇಶೋತ್ಸವ, ಶ್ರೀ ಮಹಾಶಿವಲಿಂಗ, ಶ್ರೀ ನಂದೀಶ್ವರ ದೇವರ ಪ್ರಾಣ ಪ್ರತಿಷ್ಠಾಪನೆ, ಕಲಶಾರೋಹಣ ಹಾಗೂ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬುಧವಾರ ಬೆಳಗ್ಗೆ ಗಂಗಾ ಪ್ರವೇಶ, ಧ್ವಜಾರೋಹಣ, ಮಹಾಗಣಪತಿ ಪೂಜೆ, ಆಗ್ರೋದಕ, ಮೃತ್ಸಂಗ್ರಹಣ, ಪುಣ್ಯಾಹವಾಚನ, ಪಂಚಗವ್ಯ, ನಾಂದೀಸಹಿತ ಮಾತೃಕಾ, ವಾಸ್ತುಮಂಡಲ, ಮೂರ್ತಿಗಳ ಅಧಿವಾಸ, ಮೃತ್ಯುಂಜಯ ಜಪ, ಮಹಾಗಣಪತಿ ಹೋಮ, ಲಘು ಪೂರ್ಣಾಹುತಿ, ಮಹಾ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.
ಸಂಜೆ ಕರ್ಮಣ ಪುಣ್ಯಃ, ಪ್ರಧಾನ ದೇವತೆ ಪರಿವಾರ ದೇವತೆಗಳ ಕಲಶ ಸ್ಥಾಪನೆ, ಮಹಾ ಮೃತ್ಯುಂಜಯ ಹೋಮ, ರುದ್ರಹೋಮ, ಶಿವಾಷ್ಟೋತ್ತರ, ದುರ್ಗಾ, ನವಗ್ರಹ ನಕ್ಷತ್ರ, ಕ್ಷೇತ್ರಪಾಲಕ ಹೋಮಗಳು, ಲಘು ಪೂರ್ಣಾಹುತಿ, ಮಹಾ ಮಂಗಳಾರತಿ ಬಳಿಕ ತೀರ್ಥಪ್ರಸಾದ ವಿನಿಯೋಗವಾಗಲಿದೆ. ನಂತರ ವಿಗ್ರಹಗಳಿಗೆ ರತ್ನ ವಿನ್ಯಾಸದೊಂದಿಗೆ ಪೀಠ ಬಂಧನ ನೆರವೇರಲಿದೆ.
ಬೆಳಗ್ಗೆ 11ಕ್ಕೆ ಸಭಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಶಾಸಕ ಜಿ.ಎಚ್.ಶ್ರೀನಿವಾಸ್ ಉದ್ಘಾಟಿಸುವರು. ಗ್ರಾಮಸಮಿತಿಯ ಕೆ.ಆರ್.ಪರಮೇಶ್ವರಪ್ಪ, ಸಾಹಿತಿ ಚಟ್ನಳ್ಳಿ ಮಹೇಶ್, ದೋರನಾಳ್ ಪರಮೇಶ್, ತಾಪಂ ಮಾಜಿ ಸದಸ್ಯ ಅಸ್ಲಂಖಾನ್, ಎಂ.ನಟರಾಜ್ ಮತ್ತಿತರರು ಭಾಗವಹಿಸುವರು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
22ರಂದು ಬ್ರಾಹ್ಮೀ ಮುಹೂರ್ತದಲ್ಲಿ ಆಲಯ ಶುದ್ಧಿ, ಬಿಂಬ ಶುದ್ಧಿ, ನಾಡಿ ಸಂಧಾನ, ಶಿವಲಿಂಗ ಪ್ರಾಣ ಪ್ರತಿಷ್ಠಾಪನೆ, ವಿಗ್ರಹಗಳಿಗೆ ನೇತ್ರೋನ್ಮಿಲನ, ದರ್ಪಣದೊಂದಿಗೆ ಭಕ್ತರಿಗೆ ಸ್ವಾಮಿಯ ದರ್ಶನ ಭಾಗ್ಯ ನೀಡಲಾಗುವುದು. ನವಾರತಿ, ಪಂಚೋಪಚಾರ ಪೂಜೆ, ಬಲಿಹರಣ, ಮಹಾರುದ್ರ, ಹೋಮ, ಮಹಾಕುಂಭಾಭಿಷೇಕ, ಮಹಾಪೂರ್ಣಾಹುತಿ, ಮಹಾಲಂಕಾರ, ಮಹಾಮಂಗಳಾರತಿ, ಸ್ವಸ್ತಿವಾಚನ, ರಾಷ್ಟ್ರಾಶೀರ್ವಚನ, ಧ್ವಜಾವರೋಹಣ ಬಳಿಕ ಕಂಕಣ ವಿಸರ್ಜಿಸಲಾಗುವುದು.
ಬೆಳಗ್ಗೆ ಗಂಟೆ 10.25 ರಿಂದ 11.15ರವರೆಗೆ ಕಲಶಾರೋಹಣದ ಜತೆ ದೇವರ ಪ್ರಾಣ ಪ್ರತಿಷ್ಠೆ ಹಲವು ವಿಧಿ ವಿಧಾನಗಳ ಮೂಲಕ ನೆರವೇರಲಿದೆ. ನಂತರ ನಡೆಯುವ ಧಾರ್ಮಿಕ ಸಭೆಯಲ್ಲಿ ಚಿಕ್ಕಮಗಳೂರು ಬಸವ ತತ್ವಪೀಠದ ಡಾ. ಬಸವಮರುಳಸಿದ್ಧ ಸ್ವಾಮೀಜಿ, ಹುಣಸಘಟ್ಟ ಹಾಲುಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾಜಿ ಶಾಸಕ ಡಿ.ಎಸ್.ಸುರೇಶ್ ಕಾರ್ಯಕ್ರಮ ಉದ್ಘಾಟಿಸುವರು.
ಶಿವಾಲಯ ಪ್ರವೇಶೋತ್ಸವದ ನಿಮಿತ್ತ ಸಂಜೆ 5.30ರಿಂದ ಹುಲಿಕಲ್ ನಟರಾಜ್ ನಂಬಿಕೆ-ಮೂಢನಂಬಿಕೆಗಳ ಕುರಿತು ಉಪನ್ಯಾಸ ನೀಡುವರು. ರಾಜ್ಯ ಪ್ರಶಸ್ತಿ ಪುರಸ್ಕೃತೆ ಎಸ್.ಲಕ್ಷ್ಮೀ ಅವರಿಂದ ವಚನ ರೂಪಕ, ಕನ್ನಡ ಕೋಗಿಲೆ ಖ್ಯಾತಿಯ ಪುಟಾಣಿ ಮಹನ್ಯಾ ಗುರು ಪಾಟೀಲ್ ಅವರಿಂದ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ