ಬೆಳಗಾವಿ: ರಾಜ್ಯ ಸರ್ಕಾರ ಹಂಪಿ ವಿಶ್ವವಿದ್ಯಾಲಯಕ್ಕೆ ವಾರ್ಷಿಕ ನಿರ್ವಹಣೆಗಾಗಿ ಐದು ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು ಹಾಗೂ ಅಗತ್ಯ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳುವ ಮೂಲಕ ವಿವಿಯ ಅಭಿವೃದ್ಧಿಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಶುಕ್ರವಾರ ಮನವಿ ಸಲ್ಲಿಸಿತು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ವಿಶ್ವದಲ್ಲಿಯೇ ಭಾಷೆಗಾಗಿ ಸ್ಥಾಪನೆಗೊಂಡಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಅನುದಾನವಿಲ್ಲ. ಹೀಗಾಗಿ ಮೂರ್ನಾಲ್ಕು ವರ್ಷದಿಂದ ಯಾವುದೇ ನೇಮಕಾತಿ ನಡೆದಿಲ್ಲ. ಸೇವೆ ಸಲ್ಲಿಸುತ್ತಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ವೇತನ ನೀಡದೆ ವರ್ಷಗಳೇ ಕಳೆದಿವೆ. ವಿವಿಯ ವಾರ್ಷಿಕ ನಿರ್ವಹಣೆಗೆ ನೀಡುತ್ತಿದ್ದ ಐದು ಕೋಟಿ ರೂ. ಅನುದಾನ ನಿಲ್ಲಿಸಲಾಗಿದೆ. ಆರ್ಥಿಕ ಬಿಕ್ಕಟ್ಟಿನ ನೆಪವೊಡ್ಡಿ ಕೇವಲ 50 ಲಕ್ಷ ರೂ.ಗೆ ಸೀಮಿತಗೊಳಿಸಲಾಗಿದೆ. ಈ ಅನುದಾನದಲ್ಲಿಯೂ 12 ಲಕ್ಷ ರೂ. ಮಾತ್ರ ಸರ್ಕಾರ ಬಿಡುಗಡೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸೇನೆ ಜಿಲ್ಲಾಧ್ಯಕ್ಷ ಬಾಬು ಸಂಗೋಡಿ, ಮಂಜುನಾಥ ಪಾಟೀಲ, ಗಂಗಪ್ಪ ಹುಲಿಮನಿ, ಬಸು ದೊಡ್ಡಮನಿ, ನಾಗರಾಜ ದೊಡ್ಡಮನಿ, ರೋಹಿತ ಅನಗೋಳಕರ್, ಮಂಜು ಹಡಪದ, ಸೂರಜ ಅನಗೋಳಕರ್ ಇತರರಿದ್ದರು.