ಕಿಕ್ಕೇರಿ: ವಿಶ್ವದಲ್ಲಿನ ಬಹು ಭಾಷೆಗಳಲ್ಲಿ ಕನ್ನಡ ಭಾಷೆ ಅತ್ಯಂತ ಸುಂದರ ಲಿಪಿ ಹೊಂದಿದೆ ಎಂದು ಶಾಸಕ ಎಚ್.ಟಿ. ಮಂಜು ತಿಳಿಸಿದರು.
ಪಟ್ಟಣದಲ್ಲಿ ಬಸ್ಸ್ಟ್ಯಾಂಡ್ ಓಮ್ನಿ ವ್ಯಾನ್ ಮಾಲೀಕರು ಹಾಗೂ ಚಾಲಕರ ಸಂಘದಿಂದ ಶನಿವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಭಾಷೆ ಅತ್ಯಂತ ಸಿರಿವಂತ ಭಾಷೆ. ಕನ್ನಡಿಗರಲ್ಲಿ ಕನ್ನಡದ ಅಸ್ಮಿತೆ ಮೂಡಿಸುವಲ್ಲಿ ಚಾಲಕರ ಪಾತ್ರ ಬಲುದೊಡ್ಡದು. ಬಡತನದ ಬದುಕು ಕಟ್ಟಿಕೊಂಡ ಇವರಲ್ಲಿನ ಕನ್ನಡದ ಅಭಿಮಾನ ಎಲ್ಲರಿಗೂ ಮಾದರಿಯಾಗಿದೆ. ನವೆಂಬರ್ ಮಾಸ ಕನ್ನಡದ ಹಬ್ಬವಾಗದೆ, ನಿತ್ಯೋತ್ಸವದ ಹಬ್ಬವಾಗಬೇಕು ಎಂದು ಆಶಿಸಿದರು.
ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ನಾಡು ನಮ್ಮದಾಗಿದೆ. ಕಾವೇರಿಯಿಂದ ಗೋದಾವರಿವರೆಗೆ ಹಬ್ಬಿದ ನಾಡು ಕಿರಿದಾಗಲು ನಮ್ಮಲ್ಲಿನ ಕೀಳರಿಮೆಯೇ ಪ್ರಮುಖ ಕಾರಣವಾಗಿದೆ. ಕನ್ನಡ ನಾಡಿನಲ್ಲಿ ವಾಸಿಸುವ, ವ್ಯವಹರಿಸುವ ಅನ್ಯಭಾಷಿಕರಿಗೆ ಮೊದಲು ಪ್ರೀತಿಯಿಂದ ಕನ್ನಡ ಕಲಿಸುವ ಕೆಲಸವಾಗಬೇಕಿದೆ. ಮಕ್ಕಳಲ್ಲಿ ಕನ್ನಡದ ಮನಸ್ಸನ್ನು ಕಟ್ಟುವ ಕೆಲಸ ಮಾಡಬೇಕಿದೆ ಎಂದರು.
ಇನ್ಸ್ಪೆಕ್ಟರ್ ರೇವತಿ, ಗ್ರಾಪಂ ಅಧ್ಯಕ್ಷೆ ತಾಯಮ್ಮ, ಮಾಜಿ ಅಧ್ಯಕ್ಷ ಕೆ.ವಿ.ಅರುಣಕುಮಾರ್, ಕರವೇ ಜಿಲ್ಲಾ ಉಪಾಧ್ಯಕ್ಷ ಸಾಸಲು ಗುರುಮೂರ್ತಿ, ಜೆಡಿಎಸ್ ಮುಖಂಡರಾದ ಐಕನಹಳ್ಳಿ ಕೃಷ್ಣೇಗೌಡ, ಕಾಯಿ ಮಂಜೇಗೌಡ, ಮೊಟ್ಟೆ ಮಂಜು, ದಿಲೀಪ್, ರಮೇಶ್, ರಘು, ಉಮೇಶ್, ಸಂಘದ ಸದಸ್ಯರು ಹಾಜರಿದ್ದರು.