ಹನೂರು: ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಒಡೆಯರಪಾಳ್ಯ ದೊಂಡ್ಲಲಿಂಗ್ ಟಿಬೆಟಿಯನ್ ಸೆಟ್ಲ್ಮೆಂಟ್ ಕ್ಯಾಂಪ್ನ ಟಿಬೆಟಿಯನ್ನರು ಭಾಗವಹಿಸಿದ್ದು ವಿಶೇಷವಾಗಿತ್ತು.
ಕ್ಯಾಂಪ್ನ ಟಿಬೆಟಿಯನ್ ಆಡಳಿತಾಧಿಕಾರಿ ಗೆಲೆಕ್ ನೆೇತೃತ್ವದಲ್ಲಿ ಸುಮಾರು 80ಕ್ಕೂ ಹೆಚ್ಚು ಟಿಬೆಟಿಯನ್ನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜೈ ಭುವನೇಶ್ವರಿ ಭಾವಚಿತ್ರದ ಮೆರವಣಿಗೆಯಲ್ಲಿ ಕನ್ನಡ ಬಾವುಟ ಹಿಡಿದು ಹೆಜ್ಜೆ ಹಾಕಿದ ಟಿಬೆಟಿಯನ್ನರು, ದಾರಿಯುದ್ದಕ್ಕೂ ತಮ್ಮದೇಯಾದ ಸಾಹಿತ್ಯಕ್ಕೆ ಸಾಮೂಹಿಕವಾಗಿ ನೃತ್ಯ ಪ್ರದರ್ಶಿಸಿದರು. ವೇದಿಕೆ ಕಾರ್ಯಕ್ರಮದಲ್ಲಿ ಟಿಬೆಟಿಯನ್ ಮಹಿಳೆ ‘ಮುಂಗಾರು ಮಳೆ’ ಚಲನಚಿತ್ರದ ‘ಅನಿಸುತಿದೆ ಯಾಕೋ ಇಂದು’ ಹಾಡನ್ನು ಹಾಡುವುದರ ಮೂಲಕ ಜನರ ಮನಗೆದ್ದರು.